ಚಿಕ್ಕಪ್ಪನಹಳ್ಳಿ ಷಣ್ಮುಖಕನ್ನಡಪ್ರಭ ವಾರ್ತೆ ಚಿತ್ರದುರ್ಗ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಚಿತ್ರದುರ್ಗ ನಿವಾಸ ಮಾರಾಟ ಇದೀಗ ನಿರ್ಣಾಯಕ ಹಂತ ತಲುಪಿದ್ದು, ರಾಜ್ಯ ಸರ್ಕಾರದ ಖರೀದಿ ಪ್ರಕ್ರಿಯೆ ನಡೆಯುತ್ತಿರುವುದರ ನಡುವೆಯೇ ಎಸ್ಸೆನ್ ಪುತ್ರ ಕಿರಣ್ ಶಂಕರ್ ಖಾಸಗಿಯವರಿಗೆ ಮಾರಲು ಮುಂದಾಗಿರುವುದು ಅಚ್ಚರಿ ತರಿಸಿದೆ.
ಸುಮಾರು ಹತ್ತು ಕೋಟಿ ಕಿಮ್ಮತ್ತು ಕಟ್ಟಿ ನಿವಾಸ ಮಾರಾಟ ಮಾಡಲು ಕಿರಣ್ ಶಂಕರ್ ನಿರ್ಧರಿಸಿದ್ದು, ಈ ಸಂಬಂಧದ ಪ್ರಕಟಣೆಯೊಂದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಡಲಾಗಿದೆ. ಮಧ್ಯವರ್ತಿಗಳಿಲ್ಲದೇ ನೇರವಾಗಿ ಸಂಪರ್ಕಿಸುವಂತೆ ಕಿರಣ್ ಶಂಕರ್ ತಮ್ಮ ಮೊಬೈಲ್ ಸಂಖ್ಯೆ ನೀಡಿದ್ದಾರೆ. ಎಸ್.ನಿಜಲಿಂಗಪ್ಪ ಅವರ ಚಿತ್ರದುರ್ಗ ನಿವಾಸವ ಖರೀದಿಸಿ ಅದನ್ನೊಂದು ಸ್ಮಾರಕ ಮಾಡುವ ಚಿಂತನೆ ಕಳೆದ ಹತ್ತು ವರ್ಷಗಳಿಂದ ಸರ್ಕಾರದಿಂದ ನಡೆಯುತ್ತಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮನೆ ಖರೀದಿಸಿ ಸ್ಮಾರಕ ಮಾಡಲು ಮುಂದಾಗಿದ್ದರು. ಬಜೆಟ್ನಲ್ಲಿ ಐದು ಕೋಟಿ ರುಪಾಯಿ ಕಾಯ್ದಿರಿಸಿದ್ದರು. ನಂತರ ಬಂದ ಎಲ್ಲ ಸರ್ಕಾರಗಳು ಈ ವಿಚಾರದಲ್ಲಿ ಆಸಕ್ತಿ ವಹಿಸಿದ್ದವು. ಐದು ಕೋಟಿ ರುಪಾಯಿಯಷ್ಟು ಬೃಹತ್ ಮೊತ್ತವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಿಡುಗಡೆ ಮಾಡಿದ್ದು, ಜಿಲ್ಲಾಧಿಕಾರಿ ಖಾತೆಯಲ್ಲಿ ಈ ಮೊತ್ತ ಬಡ್ಡಿ ದುಡಿಯುತ್ತಿದೆ.ಎಲ್ಲಿದೆ ಮನೆ ?: ನಿಜಲಿಂಗಪ್ಪ ಅವರು ಚಿತ್ರದುರ್ಗದಲ್ಲಿ ವಕೀಲಗಾರಿಕೆ ಮಾಡುತ್ತಿದ್ದಾಗ (1939) ರಲ್ಲಿ ಕಟ್ಟಿಸಿಕೊಂಡ ನಿವಾಸವಿದು. ಜಿಲ್ಲಾಧಿಕಾರಿ ಬಂಗಲೆ ಪಕ್ಕದಲ್ಲಿಯೇ ಇದೆ. 117 ಇಂಟು 130 ಅಡಿ ವಿಸ್ತೀರ್ಣದ ನಿವೇಶನದಲ್ಲಿ ಮನೆ ನಿರ್ಮಿಸಲಾಗಿದ್ದು, ಪೂರ್ಣ ಪ್ರಮಾಣದ ಶ್ವೇತಭವನ ( ಬಾಗಿಲು ಸೇರಿದಂತೆ ಗೋಡೆ ಎಲ್ಲ ಬಿಳಿ ಬಣ್ಣ) ಅದಾಗಿತ್ತು. ಪರಿಶುದ್ಧತೆ ಸಂಕೇತವಾಗಿ ಎಸ್ಸೆನ್ ತಮ್ಮ ನಿವಾಸಕ್ಕೆ ಶ್ವೇತಭವನದ ಸ್ಪರ್ಶ ನೀಡಿದ್ದರು. ಅವರ ಮೊಮ್ಮಗ ವಿನಯನ ಹೆಸರನ್ನು ನಿವಾಸಕ್ಕೆ ಇಡಲಾಗಿತ್ತು.ಕಳೆದ ಏಳು ವರ್ಷಗಳಿಂದ ಮನೆ ಖರೀದಿ ಪ್ರಕ್ರಿಯೆಯ ಜಿಲ್ಲಾಡಳಿತ ನಡೆಸಿದ್ದು, ಅಂತಿಮಗೊಳಿಸಿಲ್ಲ. ಸರ್ಕಾರದ ಹೆಸರಿಗೆ ನೋಂದಣಿ ಮಾಡಿಸಿಕೊಡಲು ಎರಡು ಬಾರಿ ಅಮೇರಿಕಾದಿಂದ ನಿಜಲಿಂಗಪ್ಪ ಅವರ ಮೊಮ್ಮಗ ವಿನಯ್ ಬಂದು ವಾಪಾಸ್ಸು ಹೋಗಿದ್ದಾರೆ. ವಿಲ್ನಲ್ಲಿ ನಮೂದಿಸಿರುವ ಕೆಲ ತಾಂತ್ರಿಕ ಕಾರಣಗಳು ನೋಂದಣಿಗೆ ಅಡ್ಡಿಯಾಗಿವೆ.ಮನೆ ಮೊಮ್ಮಗ ವಿನಯ್ ಗೆ ಸೇರಬೇಕೆಂದು ನಿಜಲಿಂಗಪ್ಪ ವಿಲ್ ಮಾಡಿದ್ದಾರೆ. ವಿಲ್ ಮಾಡುವಾಗ ತಮ್ಮ ಮೂವರು ಮಕ್ಕಳಾದ ಉಮಾಕಾಂತ್, ರಾಜಣ್ಣ, ಕಿರಣ್ ಶಂಕರ್ ಅನುಭವಿಸಿದ ನಂತರ ಮನೆ ವಿನಯ್ ಸೇರಬೇಕೆಂಬ ಅಂಶವ ವಿಲ್ ನಲ್ಲಿ ನಮೂದಿಸಿದ್ದರು. ಈ ಕಾರಣಕ್ಕಾಗಿಯೇ ಸಬ್ ರಿಜಿಸ್ಟ್ರಾರ್ ಮನೆಯನ್ನು ಸರ್ಕಾರದ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳಲು ನಿರಾಕರಿಸಿದ್ದರು. ಏತನ್ಮಧ್ಯೆ ನಿಜಲಿಂಗಪ್ಪ ಅವರ ನಿವಾಸವನ್ನು ಕಾಂಗ್ರೆಸ್ ಪಕ್ಷ ಖರೀದಿಸುತ್ತದೆ ಎಂದು ಸುದ್ದಿಗಳು ಹರಿದಾಡಿದ್ದವು. ಹಿಂದೊಮ್ಮೆ ಎಸ್ಸೆನ್ ಎಐಸಿಸಿ ಅಧ್ಯಕ್ಷರಾಗಿದ್ದರು. ಹಾಗಾಗಿ ಅವರ ನಿವಾಸವ ಕಾಂಗ್ರೆಸ್ ಖರೀದಿಸಿ ಪಕ್ಷದ ಹೆಸರಲ್ಲಿ ನಿರ್ಹಣೆ ಮಾಡುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಸಾಲದೆಂಬಂತೆ ಸಚಿವೆ ಹೆಬ್ಬಾಳ್ಕರ್ ಎಸ್ಎನ್ ನಿವಾಸಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೋಗಿದ್ದರು. ನಂತರ ಖರೀದಿ ಪ್ರಕ್ರಿಯೆ ತಣ್ಣಗಾಗಿತ್ತು. ತಾಂತ್ರಿಕ ಕಾರಣದಿಂದಾಗಿ ಸರ್ಕಾರಕ್ಕೆ ನಿವಾಸ ಖರೀದಿ ಸಾಧ್ಯವಾದಿರುವಾಗ ಕಾಂಗ್ರೆಸ್ ಪಕ್ಷ ಹೇಗೆ ಖರೀದಿಸುತ್ತದೆ ಎಂಬ ಪ್ರಶ್ನೆಗಳು ಎದ್ದಿದ್ದವು.ಇದೀಗ ನಿಜಲಿಂಗಪ್ಪ ಅವರ ಪುತ್ರ ಖಾಸಗಿಯವರಿಗೆ ಮಾರಲು ಮುಂದಾಗಿದ್ದಾರೆ. ಎರಡು ತಿಂಗಳ ಹಿಂದೆ ಸ್ವತಹಃ ಸಿಎಂ ಸಿದ್ದರಾಮಯ್ಯ ಅವರು ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಕರೆಯಿಸಿ ಸರ್ಕಾರದಿಂದ ಮನೆ ಖರೀದಿ ಮಾಡುವ ವಿಷಯ ಪ್ರಸ್ತಾಪಿಸಿ ತಾಂತ್ರಿಕ ಅಡಚಣೆ ನಿವಾರಿಸುವ ಭರವಸೆ ನೀಡಿದ್ದರು. ಇಷ್ಟೆಲ್ಲ ಬೆಳವಣಿಗೆ ನಡುವೆ ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಮನೆ ಮಾರಾಟ ಮಾಡಲು ಮುಂದಾಗಿರುವುದು ಸರ್ಕಾರಕ್ಕೆ ಸೆಡ್ಡು ಹೊಡೆದರಾ ಎಂಬ ಅನುಮಾನಗಳ ಮೂಡಿಸಿದೆ.