ಎಚ್.ಕೆ.ಅಶ್ವಥ್ ಹಳುವಾಡಿ
ಇಂದಿನಿಂದ ಜಿಲ್ಲಾದ್ಯಂತ ಆರಂಭಗೊಳ್ಳಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಮತ್ತು ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಬಿಗಿ ಭದ್ರತೆಯಲ್ಲಿ ಜಿಲ್ಲೆಯ ಒಟ್ಟು 20,650 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಜಿಲ್ಲೆಯ 7 ತಾಲೂಕುಗಳಲ್ಲಿ ಒಟ್ಟು 62 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಆದರೆ, ಈ ಬಾರಿ ಯಾವುದೇ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಇರುವುದಿಲ್ಲ. ಜಿಲ್ಲೆಯ ಒಟ್ಟು 475 ಶಾಲೆಗಳ 18,816 ಹೊಸ ವಿದ್ಯಾರ್ಥಿಗಳು, 393 ಖಾಸಗಿ ಅಭ್ಯರ್ಥಿಗಳು, 1441 ಪುನರಾವರ್ತಿತ ಸೇರಿ 20,650 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು 2619 ವಿದ್ಯಾರ್ಥಿಗಳು, ಮದ್ದೂರು 3545, ಮಳವಳ್ಳಿ 3282, ಮಂಡ್ಯ ದಕ್ಷಿಣ 3254, ಮಂಡ್ಯ ಉತ್ತರ 1221, ಪಾಂಡವಪುರ 2344, ಶ್ರೀರಂಗಪಟ್ಟಣ - 1984 ಹಾಗೂ ನಾಗಮಂಗಲ 2401 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
4 ಜಾಗೃತ ದಳ ತಂಡ ನೇಮಕ:
ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾ ಹಂತದಲ್ಲಿ 4 ಜಾಗೃತ ದಳ ತಂಡಗಳನ್ನು ರಚಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಪೋನ್ ಸ್ವಾಧೀನಾಧಿಕಾರಿಗಳನ್ನು ನೇಮಿಸಲಾಗಿದೆ. ಅಲ್ಲದೇ ಪರೀಕ್ಷೆ ನಡೆಯುವ ದಿನ ಬಿಗಿ ಬಂದೋಬಸ್ತ್ ಗಾಗಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ.ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರವೇಶವೆಂದು ಘೋಷಿಸಿ, ಹತ್ತಿರದ ಎಲ್ಲಾ ಜೆರಾಕ್ಸ್ ಮತ್ತು ಸೈಬರ್ ಕೇಂದ್ರಗಳನ್ನು ಮುಚ್ಚಲು ಆದೇಶಿಸಲಾಗಿದೆ. ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳನ್ನು ಸಂರಕ್ಷಿಸಲು ಕಚೇರಿಯ ಮೊದಲ ಮಹಡಿಯ 1 ಕೊಠಡಿಯನ್ನು ಭದ್ರತಾ ಕೊಠಡಿಯನ್ನಾಗಿ ಮಾಡಿ ದಿನದ 24 ಗಂಟೆಗಳ ಕಾಲ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸಿಸಿ ಟಿವಿ ಅಳವಡಿಕೆ, ವೆಬ್ ಕಾಸ್ಟಿಂಗ್ ವೀಕ್ಷಣಾ ಕೇಂದ್ರ ಸ್ಥಾಪನೆ:ಜಿಲ್ಲೆಯ ಎಲ್ಲಾ 62 ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ನಿಗಾವಹಿಸಲು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಜಿಲ್ಲಾ ಹಂತದಲ್ಲಿ ವೆಬ್ ಕಾಸ್ಟಿಂಗ್ ವೀಕ್ಷಣಾ ಕೇಂದ್ರ ಸ್ಥಾಪಿಸಿ ಈ ಮೂಲಕ ಸಿಸಿಟಿವಿ ವೀಕ್ಷಿಸಿ ವರದಿ ಸಲ್ಲಿಸಲು ತಂಡ ರಚಿಸಲಾಗಿದೆ.
ಪರೀಕ್ಷಾ ದಿನಗಳಂದು ಶಾಲೆಗಳಿಗೆ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗಿದೆ. ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಪ್ರಥಮ ಚಿಕಿತ್ಸಾ ಪಟ್ಟಿಗೆಯೊಂದಿಗೆ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯಾಧಿಕಾರಿ, ಒರ್ವ ಸಹಾಯಕರನ್ನು ನಿಯೋಜನೆ ಮಾಡಲಾಗಿದೆ.ಪರೀಕ್ಷೆಯಿಂದ ಹೊರಗುಳಿದ 663 ವಿದ್ಯಾರ್ಥಿಗಳು:
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 19,479 ವಿದ್ಯಾರ್ಥಿಗಳು ಹೊಸದಾಗಿ ನೋಂದಾಯಿಸಿಕೊಂಡಿದ್ದರು. ಆದರೆ, ತರಗತಿಗಳಿಗೆ ಹಾಜರಾತಿ ಕೊರತೆ ಇದ್ದ ಕಾರಣ 663 ವಿದ್ಯಾರ್ಥಿಗಳು ಪರೀಕ್ಷೆಯಿಂದ ಹೊರಗುಳಿದಿದ್ದಾರೆ.ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ:
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗಲು ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲು ಕೆಎಸ್ ಆರ್ ಟಿಸಿ ಅಧಿಕಾರಿಗಳನ್ನು ಕೋರಿದ್ದು, ಅದರಂತೆ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರ ಹಾಜರು ಪಡಿಸಿ ಸೌಲಭ್ಯ ಪಡೆಯಬಹುದಾಗಿದೆ.ಪರೀಕ್ಷೆಗೆ ನೋಂದಾಯಿಸಿರುವ ತಾಲೂಕುವಾರು ವಿದ್ಯಾರ್ಥಿಗಳ ವಿವರತಾಲೂಕುಶಾಲೆಗಳುಹೊಸ ವಿದ್ಯಾರ್ಥಿಗಳುಒಟ್ಟು
ಕೆ.ಆರ್.ಪೇಟೆ5624232619ಮದ್ದೂರು9031163545
ಮಳವಳ್ಳಿ7429633282ಮಂಡ್ಯ ದಕ್ಷಿಣ6831503254
ಮಂಡ್ಯ ಉತ್ತರ3311981227ನಾಗಮಂಗಲ5321652401
ಪಾಂಡವಪುರ4820372344ಶ್ರೀರಂಗಪಟ್ಟಣ5317641984
ಒಟ್ಟು4751881620,650