ಕೊಪ್ಪಳ: ಆರೋಗ್ಯ ಇಲಾಖೆಯಿಂದ ಗುತ್ತಿಗೆ ಆಧಾರದಲ್ಲಿ 26 ಹುದ್ದೆಗಳ ನೇಮಕಾತಿಯ ದಾಖಲೆ ಪರಿಶೀಲನೆಗೆ ಶುಕ್ರವಾರ ಅಪಾರ ಪ್ರಮಾಣದ ಉದ್ಯೋಗಾಂಕ್ಷಿಗಳು ನಗರದ ಜಿಲ್ಲಾ ಆರೋಗ್ಯ ಇಲಾಖೆ ಆವರಣಕ್ಕೆ ಆಗಮಿಸಿದ್ದರು.
ಆಪರೇಷನ್ ಆದ ಮರು ದಿನವೇ ವ್ಯಕ್ತಿಯೊಬ್ಬರು ಆಗಮಿಸಿದ್ದರೆ, ಚಿಕ್ಕಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದು ತಾಯಿ ಆವರಣದಲ್ಲಿ ಜೋಳಿಗೆ ಕಟ್ಟಿದ್ದು ಸಹ ಕಂಡು ಬಂತು.ಗುತ್ತಿಗೆ ನೇಮಕಾತಿ:
26 ಹುದ್ದೆಗೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿತ್ತು. ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ಸುಮಾರು 5000 ಉದ್ಯೋಗ ಆಕಾಂಕ್ಷಿಗಳು ನಿಂತಿದ್ದರು. ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ 11 ಹುದ್ದೆ, ಫಾರ್ಮಸಿ ಅಧಿಕಾರಿ 4 ಹುದ್ದೆ, ಶುಶ್ರೂಷಾಧಿಕಾರಿ 11 ಹುದ್ದೆಗೆ ನೇಮಕಾತಿ, ಒಂದು ವರ್ಷಕ್ಕೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ, 26 ಹುದ್ದೆಗೆ ದಾಖಲಾತಿ ಪರಿಶೀಲನೆ ಜರುಗಿತು.ಆಪರೇಷನ್ ಆದ ವ್ಯಕ್ತಿ: ಗುರುವಾರ ಆಪರೇಷನ್ ಆದರೂ ಕಾರ್ ನಲ್ಲಿ ಉದ್ಯೋಗ ಆಕಾಂಕ್ಷಿ ಒಬ್ಬರು ಆಗಮಿಸಿದ್ದರು. ದಾಖಲೆಗಳ ಪರಿಶೀಲನೆಗೆ ಕಿಮ್ಸ್ ನಿಂದ ನೇರವಾಗಿ ಕಾರಿನಲ್ಲಿ ಬಂದಿದ್ದರು. ಬಾಗಲಕೋಟೆ ಮೂಲದ ಗೋವಿಂದ ಆಪರೇಷನ್ ಆಗಿದೆ ಎನ್ನುವುದು ಲೆಕ್ಕಿಸದೆ ಆಗಮಿಸಿದ್ದರು. ಗೋವಿಂದ ಬೈಕಿನಿಂದ ಬಿದ್ದು ಗಾಯಗೊಂಡಿದ್ದರು. ಲ್ಯಾಬ್ ಟೆಕ್ನಿಷಯನ್ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದರು.
ಜೋಳಿಗೆ ಕಟ್ಟಿದ ತಾಯಂದಿರು: ಜಿಲ್ಲಾ ಆರೋಗ್ಯ ಇಲಾಖೆ ಆವರಣದಲ್ಲಿಯೇ ಸಣ್ಣ ಸಣ್ಣ ಮಕ್ಕಳ ಜತೆ ಉದ್ಯೋಗ ಆಕಾಂಕ್ಷಿ ತಾಯಂದಿರು ಸಹ ಆಗಮಿಸಿದ್ದರು. ಮಕ್ಕಳಿಗಾಗಿ ಆವರಣದಲ್ಲಿ ಜೋಳಿಗೆ ಕಟ್ಟಿದ್ದರು.