ಮಾಲೂರಿನಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಸ್ಥಾಪನೆ

KannadaprabhaNewsNetwork | Published : Jan 10, 2025 12:46 AM

ಸಾರಾಂಶ

ಮಾಲೂರಿನಲ್ಲಿ ೧೦೫೨ ರಲ್ಲಿ ಸ್ಥಾಪನೆಯಾದ ಇಲ್ಲಿನ ಆಸ್ವತ್ರೆಯನ್ನು ಅಗಾಗ್ಗೇ ಅಭಿವೃದ್ಧಿಪಡಿದರೂ ಅದು ವ್ಯವಸ್ಥಿತವಾಗಿರದೆ ಶಿಥಿಲ ವ್ಯವಸ್ಥೆಗೆ ತಲುಪಿದೆ. ಸರ್ಕಾರವು ಎಲ್ಲ ರೀತಿಯ ಸೌಲಭ್ಯ ಸವಲತ್ತು ನೀಡಿದರೂ ಇಲ್ಲಿನ ಆಸ್ವತ್ರೆಯಲ್ಲಿ ಜಾಗ ಇದಲ್ಲದೆ ಎಲ್ಲ ಸೌಲಭ್ಯಗಳು ಸಾರ್ವಜನಿಕ ಉಪಯೋಗಕ್ಕೆ ಬಾರದಂತಾಗಿದೆ.

ಕನ್ನಡಪ್ರಭ ವಾರ್ತೆ ಮಾಲೂರು

ಈ ಬಾರಿಯ ಅಯವ್ಯಯದಲ್ಲಿ ಮಾಲೂರಿನಲ್ಲಿ ಸುಸಜ್ಜಿತ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಘೋಷಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು. ಅವರು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಪತ್ರಕರ್ತರ ಜತೆ ಮಾತನಾಡಿ, ೧೦೫೨ ರಲ್ಲಿ ಸ್ಥಾಪನೆಯಾದ ಇಲ್ಲಿನ ಆಸ್ವತ್ರೆಯನ್ನು ಅಗಾಗ್ಗೇ ಅಭಿವೃದ್ಧಿಪಡಿದರೂ ಅದು ವ್ಯವಸ್ಥಿತವಾಗಿರದೆ ಶಿಥಿಲ ವ್ಯವಸ್ಥೆಗೆ ತಲುಪಿದೆ. ಸರ್ಕಾರವು ಎಲ್ಲ ರೀತಿಯ ಸೌಲಭ್ಯ ಸವಲತ್ತು ನೀಡಿದರೂ ಇಲ್ಲಿನ ಆಸ್ವತ್ರೆಯಲ್ಲಿ ಜಾಗ ಇದಲ್ಲದೆ ಎಲ್ಲ ಸೌಲಭ್ಯಗಳು ಸಾರ್ವಜನಿಕ ಉಪಯೋಗಕ್ಕೆ ಬಾರದಂತಾಗಿದೆ ಎಂದರು.

ಹುದ್ದೆಗಳ ಭರ್ತಿಗೆ ಕ್ರಮ

ಇಲ್ಲಿ ದಾಖಲೆಯ ಹೊರರೋಗಿಗಳ ನೋಂದಣಿಯಾಗುತ್ತಿದ್ದು, ಹೈಟೆಕ್‌ ಆಸ್ಪತ್ರೆ ಅತಿ ಜರೂರಾಗಿ ಬೇಕಾಗಿದೆ. ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಯಲ್ಲಿ ಇಬ್ಬರು ಗೈನೋಕಲಿಜಿಸ್ಟ್‌, ಇಬ್ಬರು ಅರಿವಳಿಕೆ ತಜ್ಞ,ಎರಡು ಮಕ್ಕಳ ತಜ್ಞರನ್ನು ಕಡ್ಡಾಯ ವಾಗಿ ನೇಮಿಸುವ ಜತೆಯಲ್ಲಿ ಖಾಲಿ ಇರುವ ಎಲ್ಲ ದರ್ಜೆಗಳ ಹುದ್ದೆಯನ್ನು ಭರ್ತಿ ಮಾಡುವ ಚಿಂತನೆ ಸರ್ಕಾರದ ಮುಂದಿದ್ದು ,ಶೀಘ್ರವಾಗಿ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.

ವೈದ್ಯರ ಸೇವೆಗೆ ಶ್ಲಾಘನೆ

ಇಲ್ಲಿ ಉತ್ತಮ ವೈದ್ಯರ ತಂಡ ಇದ್ದು, ಅವರ ಕಾರ್ಯಸೇವೆ ತೃಪ್ತಿ ತಂದಿದೆ. ಅವರಿಗೆ ಬೇಕಾಗುವ ಎಲ್ಲ ರೀತಿಯ ಸಹಕಾರ ನೀಡುವೆ ಎಂದರು. ಇದೇ ಸಂದರ್ಭದಲ್ಲಿ ವೈದ್ಯರನ್ನೂ ಹಾಗೂ ನರ್ಸ್‌ ಗಳನ್ನು ಪ್ರತ್ಯೇಕವಾಗಿ ಮಾತನಾಡಿಸಿ ಅವರ ಕುಂದು ಕೊರತೆ ವಿಚಾರಿಸಿದರು.

ಈ ಸಂದರ್ಭದಲ್ಲಿ ಸಚಿವ ಜತೆ ಶಾಸಕ ಕೆ.ವೈ.ನಂಜೇಗೌಡ, ಡಿಹೆಚ್‌ ಓ ಡಾ.ಶ್ರೀನಿವಾಸ್‌ ,ತಾಲೂಕು ವೈದ್ಯಾಧಿಕಾರಿ ಡಾ.ರಮೇಶ್‌ ಬಾಬು,ಆಸ್ವತ್ರೆ ವೈದ್ಯಾಧಿಕಾರಿ ಡಾ.ವಸಂತ್‌ ಕುಮಾರ್‌ ,ಡಾ.ಶ್ರೀನಿವಾಸ್‌, ಡಾ.ಚೆನ್ನಕೇಶವ, ಡಾ.ಮಂಜುನಾಥ್‌, ಡಾ.ಮಧುಸೂಧನ್‌ ಸೇರಿದಂತೆ ಮತ್ತಿತರರು ಉಫಸ್ಥಿತರಿದ್ದರು.

ಬಿಜೆಪಿಗೆ ಶಾಂತಿ ಬೇಕಿಲ್ಲ

ನಕ್ಸಲರು ಮುಖ್ಯವಾಹಿನಿಗೆ ಬರಬೇಕು, ಸಮಾಜದಲ್ಲಿ ಶಾಂತಿ ಸ್ಥಾಪನೆ ಆಗಬೇಕು ಎಂಬ ಉದ್ದೇಶದಿಂದ ನಕ್ಸಲರ ಶರಣಾಗತಿಗೆ ವ್ಯವಸ್ಥೆ ಮಾಡಿದರೆ ಅದರಲ್ಲೂ ಬೆಂಕಿ ಹಚ್ಚುವ ಕೆಲಸ ಬಿಜೆಪಿಗರು ಮಾಡುತ್ತಿದ್ದಾರೆ. ಅವರಿಗೆ ಶಾಂತಿ ನೆಮ್ಮದಿ ಬೇಕಿಲ್ಲ, ಹಿಂಸೆ ಇರಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಟೀಕಿಸಿದರು. ಅವರು ಮಾಲೂರು ತಾಲೂಕಿನ ಲಿಂಗಾಪುರದಲ್ಲಿ ದಿ.ವಿಕ್ರಂ ಚಾರಿಟಬಲ್‌ ಟ್ರಸ್ಟ್‌ ಹಮ್ಮಿಕೊಂಡಿದ್ದ ಸರ್ಕಾರಿ ಆಸ್ವತ್ರೆಗೆ ಎರಡು ಆ್ಯಂಬುಲೆನ್ಸ್‌ , ರಕ್ತದಾನ ಶಿಬಿರ ಹಾಗೂ ಹೆಲ್ಮಟ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಕ್ಸಲ್‌ ರ ಶರಣಾಗತಿ ಬಗ್ಗೆ ಮಾತನಾಡುವ ಮುನ್ನ ೨೦೨೬ ರೊಳಗೆ ದೇಶವನ್ನು ನಕ್ಸಲ್‌ ಮುಕ್ತ ಮಾಡುತ್ತೇವೆ ಎಂದಿರುವ ಅಮಿತ್‌ ಶಾ ಹಾಗೂ ಪ್ರಧಾನಿಯನ್ನು ಕೇಳಿ ನಂತರ ಹೇಳಿಕೆಗಳನ್ನು ನೀಡಲಿ ಎಂದರು.ಬಣ ಶಕ್ತಿ ಪ್ರದರ್ಶನ ಅಲ್ಲ

ನಾನು ಈ ಹಿಂದೆ ಅಧ್ಯಕ್ಷನಾಗಿದ್ದೆ, ಈಗ ಡಿ.ಕೆ.ಶಿವಕುಮಾರ್‌ ಅಧ್ಯಕ್ಷರಾಗಿದ್ದಾರೆ. ನಾಳೆ ಮತ್ತೊಬ್ಬರು ಅಧ್ಯಕ್ಷರಾಗ್ತಾರೆ ಎಂದು ಡಿ.ಕೆ.ಶಿವುಕುಮಾರ್‌ ವರ್ತನೆ ಬಗ್ಗೆ ಸೂಕ್ಷವಾಗಿ ಹೇಳಿದರು. ಒಂದೇ ಪಕ್ಷದವರು ಎಂದಾಗ ಲಂಚ್‌, ಬ್ರೇಕ್‌ ಫಾಸ್ಟ್‌, ಡಿನ್ನರ್‌ ಸೇರುತ್ತೇವೆ. ಇದರಿಂದ ಸಿ.ಎಂ.ಸಿದ್ದರಾಮಯ್ಯ ಬದಲಾವಣೆ ಅಥವಾ ಬಣ ಶಕ್ತಿ ಪ್ರದರ್ಶನ ಅಲ್ಲ ಎಂದರು.

ಕಾಂಗ್ರೆಸ್‌ ನ ಎಸ್ಸಿಎಸ್ಟಿ ಶಾಸಕರ ಸಭೆ ಮುಂದೂಡಿದ್ದ ಬಗ್ಗೆ ಉತ್ತರಿಸಿದ ಆರೋಗ್ಯ ಸಚಿವರು, ಸಚಿವ ಕೆ.ಎನ್.ರಾಜಣ್ಣ ಯಾವ ಅರ್ಥದಲ್ಲಿ ಮಾತನಾಡಿದ್ದಾರೋ ಗೋತ್ತಿಲ್ಲ. ಸಭೆ ನಡೆಸುವುದು, ಸಭೆ ಮುಂದೂಡುವುದು ಪಕ್ಷದ ಅಂತರಿಕ ವಿಚಾರ. ಈ ಬಗ್ಗೆ ಈಗಾಗಲೇ ಪರಮೇಶ್ವರ್‌ ಸ್ಪಷ್ಟನೆ ನೀಡಿದ್ದು, ನಾನು ಹೆಚ್ಚಾಗಿ ಮಾತನಾಡುವುದಿಲ್ಲ ಎಂದರು.ಅಶ್ವತ್ಥ್‌ ನಾರಾಯಣ್‌ಗೆ ತಿಳಿವಳಿಕೆ ಇಲ್ಲ

ದೇಶದಲ್ಲಿ ಕಾಣಿಸಿಕೊಂಡಿರುವ ಎಚ್.ಎಂ.ಪಿ.ವಿ ವೈರಸ್‌ ಬಗ್ಗೆ ರಾಜ್ಯದಲ್ಲಿ ಅಂತಕಗೊಳ್ಳಬೇಕಾಗಿಲ್ಲ.ಈ ಬಗ್ಗೆ ಸ್ವಯಂ ವೈದ್ಯರಾಗಿರುವ ಬಿಜೆಪಿ ಶಾಸಕ ಅಶ್ವತ್ಥ್‌ ನಾರಾಯಣ್‌ ಅವರೇ ವಿಷಯ ತಿಳಿಯದೇ ಮಾತನಾಡುತ್ತಿದ್ದು, ಅವರಿಗೆ ಏನು ತಿಳಿವಳಿಕೆ ಇದೆಯೋ ಎಂಬ ಅನುಮಾನ ಕಾಡುತ್ತದೆ ಎಂದರು.

Share this article