ಕನ್ನಡಪ್ರಭ ವಾರ್ತೆ ಮೈಸೂರು
ಆಧುನಿಕ ಜಗತ್ತು ವಾಣಿಜ್ಯದ ಆಧಾರದ ಮೇಲೆ ಚಲಿಸುತ್ತಿದೆ. ವಾಣಿಜ್ಯವು ನೈತಿಕತೆಯ ಬುನಾದಿಯ ಮೇಲೆ ಅರಳಲಿ. ಆಗ ಯುವಪೀಳಿಗೆಯ ವಾಣಿಜ್ಯ ವಿದ್ಯಾರ್ಥಿಗಳು ದೇಶವನ್ನು ಪ್ರಗತಿಯ ಹಾದಿಯತ್ತ ಕೊಂಡೊಯ್ಯಬಲ್ಲರು. ನೈತಿಕತೆ ಎಂಬುದು ವಾಣಿಜ್ಯದ ಆತ್ಮ ಎಂದು ಆಧ್ಯಾತ್ಮಿಕ ಚಿಂತಕ ಶಂಕರ ದೇವನೂರು ತಿಳಿಸಿದರು.ನಗರದ ವಿದ್ಯಾವರ್ದಕ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಕೇಂದ್ರವು ಆಯೋಜಿಸಿದ್ದ 2025- 26ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಎಂ.ಕಾಂ ವಿದ್ಯಾರ್ಥಿಗಳ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉನ್ನತ ಕನಸುಗಳನ್ನು ಕಾಣಬೇಕು ಹಾಗೂ ಜೀವನವನ್ನು ಆ ಕನಸುಗಳನ್ನು ಸಾಕಾರಗೊಳಿಸುವ ಪಯಣವನ್ನಾಗಿ ಮಾಡಿಕೊಳ್ಳಬೇಕು. ಕನಸುಗಳನ್ನು ಸಾಕಾರಗೊಳಿಸಲು ಬದುಕಿ, ಬದುಕುವುದಕ್ಕೆ ಮಾತ್ರ ಬದುಕಬೇಡಿ ಎಂದು ಕಿವಿಮಾತು ಹೇಳಿದರು.
ಕಾಲ ಕಡಿಮೆ ಆದರೆ ಜೀವನ ಅತ್ಯಮೂಲ್ಯ. ಆದ್ದರಿಂದ ಕನಸುಗಳಿಗೆ ಕೇಂದ್ರೀಕರಿಸಿ, ನೈತಿಕತೆಯೊಂದಿಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಗಳಿಸಿ. ಜೀವನದಲ್ಲಿ ಕೇವಲ ಯೋಜನೆ ಸಾಕಾಗುವುದಿಲ್ಲ, ಅದನ್ನು ಸುಂದರವಾಗಿ ಅನುಷ್ಠಾನಗೊಳಿಸಬೇಕು. ಮೌಲ್ಯಗಳು ಮೌಲ್ಯವಸ್ತುಗಳಿಗಿಂತ ಶ್ರೇಷ್ಠ ಎಂದರು.ಪ್ರಾಂಶುಪಾಲ ಡಾ.ಎಸ್. ಮರೀಗೌಡ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಗಳನ್ನು ನಿರ್ಧರಿಸಿ, ಜ್ಞಾನ ಮತ್ತು ಕೌಶಲ್ಯಗಳನ್ನು, ಸಮಗ್ರ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತೆ ಹೇಳಿದರು.
ವಿದ್ಯಾವರ್ಧಕ ಸಂಘದ ಖಜಾಂಚಿ ಶ್ರೀಶೈಲರಾಮಣ್ಣವರ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕಳೆದ ಸಮಯವನ್ನು ಉತ್ತಮವಾಗಿ ಉಪಯೋಗಿಸಿಕೊಂಡು, ಆಧುನಿಕ ಬೋಧನೆ ಮತ್ತು ಕಲಿಕೆ ವಿಧಾನಗಳ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳುವಂತೆ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಗುಂಡಪ್ಪ ಗೌಡ ಮಾತನಾಡಿ, ಭವಿಷ್ಯದಲ್ಲಿ ವಾಣಿಜ್ಯ ಪದವೀಧರರು ವಿಶ್ವವನ್ನು ಆಳಲಿದ್ದಾರೆ. ವಾಣಿಜ್ಯ ವಿದ್ಯಾರ್ಥಿಗಳು ಹಣಕಾಸು ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಬೇಕು. ಪ್ರಾಮಾಣಿಕತೆ ಮತ್ತು ಸಮಯಪಾಲನೆಯ ಮೂಲಕ ಯಶಸ್ವಿ ವೃತ್ತಿಜೀವನ ಕಟ್ಟಿಕೊಳ್ಳುವಂತೆ ಶುಭ ಹಾರೈಸಿದರು.
ಇದೇ ವೇಳೆ ಪಿಜಿ ಕೇಂದ್ರದ ವಿವಿಪಿಜಿಸಿ ಇಮೇಜ್ ಎಂಬ 13ನೇ ಸಂಚಿಕೆಯ ನ್ಯೂಸ್ ಲೆಟರ್ ಅನ್ನು ಬಿಡುಗಡೆಗೊಳಿಸಲಾಯಿತು. ಎಂ.ಕೆ. ತ್ರಿವೇಣಿ ಪ್ರಾರ್ಥಿಸಿದರು. ಪಿ.ಜಿ. ಕೇಂದ್ರದ ಮುಖ್ಯಸ್ಥೆ ಡಾ.ಎಸ್. ಪೂರ್ಣಿಮಾ ಸ್ವಾಗತಿಸಿದರು. ಎಂ.ಜಿ. ಸುನಿಲ್ ವಂದಿಸಿದರು. ಎಂ.ಸಿ. ಅನುಷಾ ನಿರೂಪಿಸಿದರು.ನಾಳೆ ವಿದ್ಯಾವರ್ಧಕ ಕಾಲೇಜಿನಲ್ಲಿ ಕಲಾ ಸಂಭ್ರಮ
ಕನ್ನಡಪ್ರಭ ವಾರ್ತೆ ಮೈಸೂರುನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೆ.27 ರಂದು 2025- 26ನೇ ಶೈಕ್ಷಣಿಕ ಸಾಲಿನ ಕಲಾ ಸಂಭ್ರಮ 2025- 26 ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆ ಹಾಗೂ ಜನಪದಗೀತೆ ಗಾಯನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10ಕ್ಕೆ ಕಲಾ ಸಂಭ್ರಮ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಪರೀಕ್ಷಾಂಗ ಕುಲಸಚಿವ ಡಾ.ಎಂ.ಜಿ. ಮಂಜುನಾಥ ಉದ್ಘಾಟಿಸುವರು.ಚರ್ಚಾ ಸ್ಪರ್ಧೆಯ ವಿಷಯ ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗದೇ ರಾಜಕೀಯದ ಕೈಗವಸುಗಳಾಗಿವೆ ಎಂಬುದಾಗಿದೆ. ಸ್ಪರ್ಧೆಯು ಉದ್ಘಾಟನಾ ಸಮಾರಂಭ ಮುಗಿದ ನಂತರ ಬೆಳಗ್ಗೆ 11ಕ್ಕೆ ಪ್ರಾರಂಭವಾಗುತ್ತದೆ. ಸ್ಪರ್ಧೆಯಲ್ಲಿ ಒಂದು ಕಾಲೇಜಿನಿಂದ ಇಬ್ಬರು ವಿದ್ಯಾಥಿಗಳು ಭಾಗವಹಿಸಬಹುದಾಗಿದ್ದು, ಒಬ್ಬರು ಪರ ಹಾಗೂ ಒಬ್ಬರು ವಿರೋಧವಾಗಿ ವಿಷಯವನ್ನು ಮಂಡಿಸಲು ವೇದಿಕೆಯನ್ನು ಒದಗಿಸಲಾಗಿದೆ.
ಜನಪದಗೀತೆ ಗಾಯನ ಸ್ಪರ್ಧೆಯು ಅದೇ ದಿನ ಏಕಕಾಲದಲ್ಲಿ ನಡೆಯಲಿದ್ದು, ಈ ಸ್ಪರ್ಧೆಗೂ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಪ್ರತಿ ಸ್ಪರ್ಧೆಗೆ ಒಂದು ಕಾಲೇಜಿಗೆ 100 ರೂ. ಪ್ರವೇಶ ಶುಲ್ಕವಿರುತ್ತದೆ. ವಿಜೇತ ಸ್ಪರ್ಧಿಗಳಿಗೆ ಮೊದಲ 3 ಸ್ಥಾನಗಳಿಗೆ 6000, 4000 ಹಾಗೂ 2000 ರೂ. ನಗದು ಬಹುಮಾನವನ್ನು ನಿಗಧಿಪಡಿಸಲಾಗಿದೆ. ಜೊತೆಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು.ಆಸಕ್ತ ವಿದ್ಯಾರ್ಥಿಗಳು ಮೊ. 94818 33305, 70197 35580, 63610 89195 ಸಂಪರ್ಕಿಸಬಹುದಾಗಿದೆ. ಸ್ಪರ್ಧೆಗಳಿಗೆ ಸೆ.27ರ ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಸ್ಥಳ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ ಎಂದು ಕಾಲೇಜಿನ ಪ್ರಾಂಸುಪಾಲ ಡಾ.ಎಸ್. ಮರೀಗೌಡ ತಿಳಿಸಿದ್ದಾರೆ.