ಸರ್ಕಾರ ಬೀಳಿಸೋ ತಾಕತ್ತು ಒಳಗಿನ ಕಾಂಗ್ರೆಸ್ಸಿಗರಿಗಿದೆ: ಸಿ.ಟಿ. ರವಿ
ರಾಜ್ಯ ಸರ್ಕಾರದ ಆಡಳಿತ ವೈಖರಿ ಬಗ್ಗೆ ಪ್ರತಿಕ್ರಿಯೆ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ರಾಜ್ಯ ಸರ್ಕಾರವನ್ನ ಬಿಳಿಸುವ ತಾಕತ್ತು ಪಕ್ಷದ ಒಳಗಿರುವ ಕಾಂಗ್ರೆಸ್ಸಿಗರಿಗೆ ಮಾತ್ರ ಇರೋದು. ಹೊರಗಡೆಯ ಯಾರಿಗೂ ಇಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಖರಿ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದಲ್ಲಿ 135 ಜನ ಶಾಸಕರಿದ್ದಾರೆ. ಅವರಲ್ಲಿ ಒಗ್ಗಟ್ಟಿದ್ದರೆ ಯಾರು ತಾನೆ ಸರ್ಕಾರ ಬೀಳಿಸಲು ಆಗುತ್ತೆ. ಸತೀಶ್ ಜಾರಕಿಹೊಳಿಗೆ ನಾವು ಹೇಳಿಕೊಟ್ಟಿದ್ದೀವಾ ? ಡಿಕೆಶಿ ಬೆಳಗಾವಿಗೆ ಬಂದಾಗ ಹೋಗಬೇಡಿ ಅಂತ ನಾವು ಹೇಳಿಕೊಟ್ಟಿದ್ದೀವಾ ? ಅದು ಅವರು ತೆಗೆದುಕೊಂಡಿರುವ ತೀರ್ಮಾನ ಎಂದರು. ಸರ್ಕಾರಕ್ಕೆ 20 ಹಿರಿಯ ಶಾಸಕರು ಪತ್ರ ಬರೆದಿದ್ದರು, ನಾವೇನಾದರೂ ಬರೀರಿ ಅಂತ ಬರೆಸಿದ್ದೆವಾ ? ಅಥವಾ ರಾಜಣ್ಣ ಅವರು ಐದು ಜನ ಡಿಸಿಎಂ ಮಾಡಿ ಅಂತ ನಮ್ಮ ಮಾತು ಕೇಳಿ ಅವರು ಹೇಳಿಕೆ ನೀಡಿದ್ರಾ ? ಬಿಜೆಪಿಯವರು ಮಾಡಿಸಿದ್ರೆ, ಬರೆಸಿದ್ರೆ, ಇವೆಲ್ಲಾ ಬಿಜೆಪಿಯವರು ಮಾಡ್ತಿದ್ದಾರೆ ಅನ್ನಬಹುದು ಅಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದಲ್ಲಿ 135 ಜನ ಒಟ್ಟಿಗೆ ಇದ್ದರೆ ಯಾರೂ ಅಲ್ಲಾಡಿಸಲು ಆಗುವುದಿಲ್ಲ. ಅವರು ಅಲ್ಲಾಡ್ತಾ ಇದ್ರೆ ಅದು ನಮ್ಮ ಕೈಯಲ್ಲಿ ಇಲ್ಲ. ಹಾಗೇನಾದರೂ ಪಕ್ಷ ಅಲ್ಲಾಡ್ತಾ ಇದ್ರೆ ಇವತ್ತಲ್ಲ ನಾಳೆ ಸರ್ಕಾರ ಬಿದ್ದೇ ಬಿಳುತ್ತೆ ಅದು ನಮ್ಮ ಕೈಯಲ್ಲಿದ್ದೀಯಾ ? ಅವರಿಗೆ ಜನ ಒಳ್ಳೆಯ ಆಡಳಿತ ಕೊಡಿ ಅಂತ ಅಧಿಕಾರ ಕೊಟ್ಟಿದ್ದಾರೆ ಎಂದು ಹೇಳಿದರು. ಅದನ್ನು ಬಿಟ್ಟು ಕಲಾವಿದರ ಬಳಿಯೂ ದುಡ್ಡು ಎತ್ಕಂಡು ತಿನ್ನಿ ಅಂತ ಅಧಿಕಾರ ಕೊಟ್ಟಿದ್ದಾರಾ ? ಎಲ್ಲದರಲ್ಲೂ ಹೆದರಿಸಿ, ಬೆದರಿಸಿ ವಸೂಲಿ ಮಾಡಿ, ಅಂತ ಅಧಿಕಾರ ಕೊಟ್ಟಿರೋದಾ ? ನಾವು ಹೆಚ್ಚು ಅಂದ್ರೆ ಇವರ ಮೇಲೆ ಆರೋಪ ಮಾಡಬಹುದು ಅಷ್ಟೇ. ಸರ್ಕಾರದ ಬಗ್ಗೆ ಜನ ಶಾಪ ಹಾಕಬಹುದು, ಅದಕ್ಕಿಂತ ಇನ್ನೇನೂ ಮಾಡೋಕಾಗುತ್ತೇ. ಸರ್ಕಾರವನ್ನು ಬಿಳಿಸುವ ತಾಕತ್ತು ಹೊರಗಡೆಯ ಯಾರಿಗೂ ಇಲ್ಲ ಬದಲಾಗಿ ಬೀಳಿಸುವ ಸಾಮಾರ್ಥ್ಯ ಇರೋದು ಒಳಗಡೆ ಇರುವ ಕಾಂಗ್ರೆಸ್ಸಿಗರಿಗೆ ಮಾತ್ರ ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.