ದೊಡ್ಡಬಳ್ಳಾಪುರ ನಗರದಲ್ಲೂ ಮಳೆಗೆ ಜನರ ತತ್ತರ

KannadaprabhaNewsNetwork | Published : Dec 3, 2024 12:32 AM

ಸಾರಾಂಶ

ದೊಡ್ಡಬಳ್ಳಾಪುರ: ಫೆಂಗಲ್‌ ಚಂಡಮಾರುತದ ಪರಿಣಾಮ ದೊಡ್ಡಬಳ್ಳಾಪುರದಲ್ಲಿ ಸೋಮವಾರ ದಿನವಿಡೀ ಜನಜೀವನ ಅಸ್ತವ್ಯಸ್ತಗೊಂಡಿತ್ತು. ನಸುಕಿನಲ್ಲೂ ಆರಂಭಗೊಂಡ ಜಿಟಿಜಿಟಿ ಮಳೆ ದಿನಪೂರ್ತಿ ಮುಂದುವರಿದಿತ್ತು.

ದೊಡ್ಡಬಳ್ಳಾಪುರ: ಫೆಂಗಲ್‌ ಚಂಡಮಾರುತದ ಪರಿಣಾಮ ದೊಡ್ಡಬಳ್ಳಾಪುರದಲ್ಲಿ ಸೋಮವಾರ ದಿನವಿಡೀ ಜನಜೀವನ ಅಸ್ತವ್ಯಸ್ತಗೊಂಡಿತ್ತು. ನಸುಕಿನಲ್ಲೂ ಆರಂಭಗೊಂಡ ಜಿಟಿಜಿಟಿ ಮಳೆ ದಿನಪೂರ್ತಿ ಮುಂದುವರಿದಿತ್ತು.

ಜಿಟಿಜಿಟಿ ಮಳೆ, ಕೊರೆಯುವ ಚಳಿ, ಶೀತಗಾಳಿಯ ಅಬ್ಬರಕ್ಕೆ ಜನರು ತತ್ತರಿಸಿದ್ದು, ಬಹುತೇಕ ಚಟುವಟಿಕೆಗಳು ಸ್ತಬ್ಧಗೊಂಡು ಜನರು ಮನೆಯಿಂದ ಹೊರಬರದೆ ಮನೆಯಲ್ಲೇ ದಿನ ಕಳೆಯುವಂತಾಗಿತ್ತು. ರಸ್ತೆಗಳಲ್ಲಿ ಜನರ ಸಂಚಾರ, ವಾಹನ ದಟ್ಟಣೆ ವಿರಳವಾಗಿತ್ತು. ಬಸ್‌ ನಿಲ್ದಾಣದಲ್ಲಿಯೂ ಜನ ಸಂಚಾರ ವಿರಳವಾಗಿದ್ದು, ಹೊರ ಊರುಗಳಿಗೆ ಪ್ರಯಾಣಿಸುವವರ ಸಂಖ್ಯೆ ಗೌಣವಾಗಿತ್ತು. ಕೆಲಮಾರ್ಗಗಳಲ್ಲಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬಾರದೆ ಪ್ರಯಾಣಿಕರು ಪರಿತಪಿಸುವಂತಾಯಿತು.

ಸದಾ ಕಿಕ್ಕಿರಿದು ತುಂಬಿರುತ್ತಿದ್ದ ದೊಡ್ಡಬಳ್ಳಾಪುರ-ಯಲಹಂಕ, ದೊಡ್ಡಬಳ್ಳಾಪುರ-ಬೆಂಗಳೂರು ಮಾರ್ಗದ ಬಿಎಂಟಿಸಿ ಬಸ್ಸುಗಳು ಸಾಧಾರಣ ಸಂಖ್ಯೆಯ ಪ್ರಯಾಣಿಕರನ್ನು ಹೊತ್ತು ಸಂಚರಿಸಿದವು. ಆದರೆ ಬೆಂಗಳೂರು-ಕಾವೇರಿ ಭವನ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್ಸುಗಳ ಸಮಯಕ್ಕೆ ಬಾರದೆ ಮಳೆಯಲ್ಲೂ ಬಸ್‌ಗಾಗಿ ಕಾಯುವ ಸ್ಥಿತಿ ಇತ್ತು. ಮೊದಲೇ ಚಲನಚಿತ್ರಗಳನ್ನು ನೋಡಲು ಜನರು ಚಿತ್ರಮಂದಿರಗಳ ಕಡೆ ಸುಳಿಯದ ಸಂದರ್ಭ ಇರುವಾಗ ಮಳೆ-ಛಳಿಯ ಪರಿಣಾಮ ಇಲ್ಲಿನ ಕೆಲ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಲ್ಲದೆ ಚಿತ್ರ ಪ್ರದರ್ಶನ ಸ್ಥಗಿತವಾಗಿತ್ತು. ಗುಂಡಂಗೆರೆ ವಿದ್ಯುತ್‌ ಕೇಂದ್ರದಲ್ಲಿ ರಿಪೇರಿ ಕಾರ್ಯದ ಹಿನ್ನೆಲೆ ತಾಲೂಕಿನ ಕೆಲ ಭಾಗಗಳಲ್ಲಿ ವಿದ್ಯುತ್‌ ಸರಬರಾಜು ವ್ಯತ್ಯಯವಾಗಿತ್ತು.

ಕೆಲ ಶಾಲೆಗಳಿಗೆ ರಜೆ:

ಚಳಿ ಮಳೆ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಿಸಲಾಗಿತ್ತು. ಆದರೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿರಲಿಲ್ಲ. ಆದಾಗ್ಯೂ ಕೆಲ ಖಾಸಗಿ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಮುನ್ನೆಚ್ಚರಿಕೆಯಿಂದ ಕ್ರಮವಹಿಸಿ ರಜೆ ಘೋಷಿಸಿದ್ದವು. ಇಲ್ಲಿನ ಶ್ರೀ ದೇವರಾಜ ಅರಸ್‌ ಅಂತಾರಾಷ್ಟ್ರೀಯ ವಸತಿ ಶಾಲೆ, ಪದವಿ ಪೂರ್ವ ಕಾಲೇಜು ಸೇರಿದಂತೆ ಪ.ಪೂ ಹಂತದವರೆಗಿನ ವಿವಿಧ ಶೈಕ್ಷಣಿಕ ಘಟಕಗಳ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿತ್ತು. ಸರ್ಕಾರಿ ಶಾಲಾ-ಕಾಲೇಜುಗಳು ಎಂದಿನಂತೆ ನಡೆದವು. ಆದರೆ ವಿದ್ಯಾರ್ಥಿಗಳ ಹಾಜರಾತಿ ಕ್ಷೀಣವಾಗಿತ್ತು.

ಸರ್ಕಾರಿ ಕಚೇರಿಗಳಲ್ಲೂ ಜನಸಂದಣಿ ಕಡಿಮೆ:

ಮಳೆ, ಗಾಳಿಯ ಪರಿಣಾಮ ಸರ್ಕಾರಿ ಕಚೇರಿಗಳಲ್ಲೂ ಜನಸಂದಣಿ ಕಡಿಮೆ ಇತ್ತು. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ, ತಾಲೂಕು ಕಚೇರಿ, ತಾಲೂಕು ಪಂಚಾಯಿತಿ, ನಗರಸಭೆ ಕಚೇರಿ ಸೇರಿದಂತೆ ಪ್ರಮುಖ ಕಚೇರಿಗಳಲ್ಲಿ ಜನ ವಿರಳವಾಗಿದ್ದರು. ಬ್ಯಾಂಕುಗಳು, ಡಿಮಾರ್ಟ್‌ ಸೇರಿದಂತೆ ಪ್ರಮುಖ ವಾಣಿಜ್ಯ ಮಳಿಗೆಗಳಲ್ಲೂ ಗ್ರಾಹಕರ ಕೊರತೆ ಕಾಡುತ್ತಿತ್ತು.

ಇಂದು ಮಳೆ ಮುಂದುವರಿಯುವ ಸಾಧ್ಯತೆ:

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ತುಂತುರು ಮಳೆ ಮತ್ತು ಚಳಿಯ ವಾತಾವರಣ ಮಂಗಳವಾರವೂ ಜಿಲ್ಲಾದ್ಯಂತ ಮುಂದುವರಿಯುವ ಸಾಧ್ಯತೆ ಇದ್ದು, ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ.

ಬಾಕ್ಸ್‌........

ಶೀತ, ಗಾಳಿ ಮುನ್ನೆಚ್ಚರಿಕೆ ವಹಿಸಲು ಡಿಸಿ ಮನವಿ

ದೊಡ್ಡಬಳ್ಳಾಪುರ: ಜಿಲ್ಲೆಯಾದ್ಯಂತ ತುಂತುರು ಮಳೆ ಹಾಗೂ ಶೀತ, ಗಾಳಿ ಹಿನ್ನೆಲೆಯಲ್ಲಿ ಮಕ್ಕಳು ಸಾರ್ವಜನಿಕರು ಎಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿ ಶಿವಶಂಕರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಫೆಂಗಲ್ ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿಯೂ ಅತಿಯಾದ ಚಳಿ, ಶೀತಗಾಳಿ ಬೀಸುತ್ತಿದ್ದು, ಸಾರ್ವಜನಿಕರು ಬೆಚ್ಚಗಿನ ಉಡುಪುಗಳನ್ನು ಧರಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅವಶ್ಯವಿದ್ದರಷ್ಟೇ ಮನೆಯಿಂದ ಹೊರ ಹೋಗುವ ಯತ್ನ ಮಾಡಬೇಕು. ವಯೋವೃದ್ದರು ಅನಾರೋಗ್ಯ ಪೀಡಿತರು ಆದಷ್ಟು ಮನೆಯಲ್ಲಿಯೇ ಇದ್ದು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವ ಕೃಷಿಕರು ಮುಂಜಾಗ್ರತೆ ವಹಿಸುವ ಮೂಲಕ ಕೃಷಿ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಮನವಿ ಮಾಡಿದ್ದಾರೆ.

2ಕೆಡಿಬಿಪಿ4-

ದೊಡ್ಡಬಳ್ಳಾಪುರದಲ್ಲಿ ಸಂಪೂರ್ಣ ಮೋಡ ಕವಿದ ವಾತಾವರಣ, ಜಿಟಿಜಿಟಿ ಮಳೆ.

2ಕೆಡಿಬಿಪಿ5-

ದೊಡ್ಡಬಳ್ಳಾಪುರದಲ್ಲಿ ಶಾಲೆಗೆ ರಜೆ ಇಲ್ಲದ ಕಾರಣ ಕೊಡೆ ಹಿಡಿದು ಶಾಲೆಯತ್ತ ಹೆಜ್ಜೆ ಹಾಕುತ್ತಿರುವ ಮಕ್ಕಳು.

2ಕೆಡಿಬಿಪಿ6-

ಮಳೆ ನಡುವೆ ಬಾರದ ಬಸ್‌ಗಾಗಿ ಪ್ರಯಾಣಿಕರ ಪರಿತಾಪ.

Share this article