ದೇಶಕ್ಕೆ ಸಂವಿಧಾನ ನೀಡಿದ್ದರೂ ಇನ್ನೂ ಮನು ಸಂಸ್ಕೃತಿ ಜೀವಂತ

KannadaprabhaNewsNetwork | Published : May 28, 2025 12:04 AM
ಸುಭದ್ರ ಮತ್ತು ಸಮಾನತೆಯ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಎಲ್ಲರಿಗೂ ಸಮಾನವಾಗಿ ನೀಡಿದ್ದರೂ ದೇಶದಲ್ಲಿ ಇನ್ನೂ ಮನು ಸಂಸ್ಕೃತಿ ಜೀವಂತವಾಗಿದ್ದು, ಸಂವಿಧಾನ ಆಶಯಗಳ ಮೇಲೆ ಅಟ್ಟಹಾಸ ಮಾಡುತ್ತಿದೆ. ಇಂತಹ ದುಷ್ಟಶಕ್ತಿಗಳ ದಮನಗೊಳಿಸಿ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು ಎಂದು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ.ಮಹಾದೇವಪ್ಪ ಹೇಳಿದರು. ವಿಪಕ್ಷಗಳು ದೇಶದಲ್ಲಿ ಭಾವನಾತ್ಮಕ ವಿಷಯವನ್ನು ತೆಗೆದುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಎಲ್ಲಿಯತನಕ ವ್ಯಕ್ತಿ ಪೂಜೆ ನಡೆಯುತ್ತದೋ ಅಲ್ಲಿಯವರೆಗೆ ಸಂವಿಧಾನಕ್ಕೆ ಧಕ್ಕೆಯಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಸುಭದ್ರ ಮತ್ತು ಸಮಾನತೆಯ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಎಲ್ಲರಿಗೂ ಸಮಾನವಾಗಿ ನೀಡಿದ್ದರೂ ದೇಶದಲ್ಲಿ ಇನ್ನೂ ಮನು ಸಂಸ್ಕೃತಿ ಜೀವಂತವಾಗಿದ್ದು, ಸಂವಿಧಾನ ಆಶಯಗಳ ಮೇಲೆ ಅಟ್ಟಹಾಸ ಮಾಡುತ್ತಿದೆ. ಇಂತಹ ದುಷ್ಟಶಕ್ತಿಗಳ ದಮನಗೊಳಿಸಿ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು ಎಂದು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ.ಮಹಾದೇವಪ್ಪ ಹೇಳಿದರು.ಪಟ್ಟಣದ ಜೂನಿಯರ್‌ ಕಾಲೇಜು ಆವರಣದಲ್ಲಿ ತಾಲೂಕು ಛಲವಾದಿ ಮಹಾಸಭಾ ಮತ್ತು ವಿವಿಧ ದಲಿತ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ಹಾಗೂ ಅಭಿನಂದನಾ ಕಾರ್ಯಕ್ರಮದ ಉದ್ಘಾಟನೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಡೀ ದೇಶದದಲ್ಲಿ ಮೊದಲ ಬಾರಿಗೆ ಸಂವಿಧಾನ ಪೀಠಿಕೆಯನ್ನು ವಿಧಾನಸಭೆ ಶಾಲಾ ಕಾಲೇಜಿನಲ್ಲಿ ಓದುವ ಸುತ್ತೋಲೆಯನ್ನು ಕಡ್ಡಾಯ ಮಾಡಿದೆ. ಕೆಲವರು ಸಂವಿಧಾನ ಪೀಠಿಕೆ ಓದು ಕಾಂಗ್ರೆಸ್ ಸರ್ಕಾರದ್ದು ಎಂದು ಮೂರ್ಖರು ಮತ್ತು ಅವಿವೇಕಿಗಳು ಹೇಳುತ್ತಾರೆ. ವಿಪಕ್ಷಗಳು ದೇಶದಲ್ಲಿ ಭಾವನಾತ್ಮಕ ವಿಷಯವನ್ನು ತೆಗೆದುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಎಲ್ಲಿಯತನಕ ವ್ಯಕ್ತಿ ಪೂಜೆ ನಡೆಯುತ್ತದೋ ಅಲ್ಲಿಯವರೆಗೆ ಸಂವಿಧಾನಕ್ಕೆ ಧಕ್ಕೆಯಾಗುತ್ತದೆ ಎಂದರು.ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚು ಛಲವಾದಿ ಬಂಧುಗಳು ಇದ್ದು, ಅದರಲ್ಲೂ ಡಾ.ಎಚ್.ಸಿ.ಮಹಾದೇವಪ್ಪನವರ ಅಭಿಮಾನಿಗಳು ಇದ್ದಾರೆ. ಬೇಲೂರು ಕ್ಷೇತ್ರ ಅತ್ಯಂತ ಹಿಂದುಳಿದ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಸಚಿವರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕು ಮತ್ತು ನಾನು ಕೂಡ ಅಂಬೇಡ್ಕರ್ ಸಂವಿಧಾನ ಭಿಕ್ಷೆಯಿಂದ ಶಾಸಕನಾಗಿರುವೆ. ನನ್ನ ಕ್ಷೇತ್ರದಲ್ಲಿ 134 ಪರಿಶಿಷ್ಟರಿಗೆ ಸರ್ಕಾರದ ಸವಲತ್ತುಗಳನ್ನು ನೀಡಲಾಗಿದೆ. ಮಹಾದೇವಪ್ಪನವರು ಹೆಚ್ಚಿನ ಅಂಬೇಡ್ಕರ್ ಮತ್ತು ಇನ್ನಿತರ ವಸತಿ ಶಾಲೆಗಳನ್ನು ನೀಡಬೇಕು. ಇಡೀ ಗ್ರಾಮ ಗ್ರಾಮಕ್ಕೆ ಅಂಬೇಡ್ಕರ್ ಸಮುದಾಯದ ಭವನಗಳಿಗೆ ಅನುದಾನ ನೀಡಬೇಕಿದೆ. ಒಳ ಮೀಸಲಾತಿ ಸಮೀಕ್ಷೆಯನ್ನು ಯಾವುದೇ ತೊಡಕು ಇಲ್ಲದೆ ನಡೆಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರಿನ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಪುರಸಭೆ ಮಾಜಿ ಅಧ್ಯಕ್ಷ ಸಿ.ಎನ್.ದಾನಿ ವಹಿಸಿದ್ದರು. ಉಳಿದಂತೆ ಛಲವಾದಿ ಪೀಠದ ಬಸವನಾಗಿದೇವ ಸ್ವಾಮೀಜಿ, ಮಾಜಿ ಸಚಿವ ಬಿ.ಶಿವರಾಂ, ಮಾಜಿ ಶಾಸಕರಾದ ಕೆ.ಎಸ್.ಲಿಂಗೇಶ್, ನಿಂಗಯ್ಯ, ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ, ಬಿ.ಎಂ.ಸಂತೋಷ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶನಾಗೇಂದ್ರ,ತಾ.ಪಂ.ಮಾಜಿ ಅಧ್ಯಕ್ಷ ಪವರ್ತಯ್ಯ, ಸಿ.ಎಸ್.ಪ್ರಕಾಶ್, ಅರೇಹಳ್ಳಿ ರಾಜು,ಬಿ. ಎಲ್.ಲಕ್ಷ್ಮಣ್, ಬಳ್ಳೂರು ಉಮೇಶ್, ಈಶ್ವರ್ ಪ್ರಸಾದ್, ಭರತ್, ಬಿ.ಗಿರೀಶ್, ನಾಗರಾಜ್ ಪುರಸಭೆ ‌ಮಾಜಿ ಸದಸ್ಯ ಮಂಜುನಾಥ ನಿರೂಪಣೆ ನಡೆಸಿಕೊಟ್ಟರು.