ಮಂಗಳೂರು: ರೋಹನ್ ಕಾರ್ಪೊರೇಶನ್ ಆಯೋಜಿಸಿದ್ದ ‘ಅನ್ ಈವಿನಿಂಗ್ ವಿತ್ ಶಾರುಖ್ ಖಾನ್'''''''' ವಿಶೇಷ ಕಾರ್ಯಕ್ರಮ ಬಾಲಿವುಡ್ನ ಖ್ಯಾತ ನಟ ಶಾರುಖ್ ಖಾನ್ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ಗುರುವಾರ ನಡೆಯಿತು.
ಈ ವೇಳೆ ಮಾತನಾಡಿದ ಶಾರುಖ್ ಖಾನ್, ನಗರದ ಆತಿಥ್ಯ, ಸಂಸ್ಕೃತಿ ಹಾಗೂ ವೇಗವಾಗಿ ಬೆಳೆಯುತ್ತಿರುವ ಅಭಿವೃದ್ಧಿಗೆ ರೋಹನ್ ಕಾರ್ಪೋರೇಶನ್ ಕೊಡುಗೆಯನ್ನು ಶ್ಲಾಘಿಸಿದರು. ಸಂಸ್ಥೆಯ ರೋಹನ್ ಮರೀನಾ ಒನ್ ಉತ್ತಮ ರೀತಿಯಲ್ಲಿ ನಿರ್ಮಾಣಗೊಂಡಿದ್ದು, ಎಲ್ಲ ಸೌಕರ್ಯಗಳೊಂದಿಗೆ ಆಕರ್ಷಕವಾಗಿದೆ ಎಂದು ಸಂಸ್ಥೆಗೆ ಶುಭಹಾರೈಸಿದರು.
ರೋಹನ್ ಕಾರ್ಪೊರೇಶನ್ನ ವ್ಯವಸ್ಥಾಪಕ ನಿರ್ದೇಶಕ ಡಾ.ರೋಹನ್ ಮೊಂತೇರೊ ಮಾತನಾಡಿ, ಶಾರುಖ್ ಖಾನ್ ಅವರ ಜೀವನ ಪಯಣ ಲಕ್ಷಾಂತರ ಜನರಿಗೆ ಪ್ರೇರಣೆಯ ಮೂಲವಾಗಿದೆ. ಕನಸು ಕಾಣುವ ಧೈರ್ಯ, ನಿರಂತರ ಪರಿಶ್ರಮ ಮತ್ತು ಸಾಧನೆಯತ್ತ ಇರುವ ಬದ್ಧತೆಯೇ ಯಶಸ್ಸಿನ ನಿಜವಾದ ಮಾರ್ಗ. ರೋಹನ್ ಕಾಪೋರೇಶನ್ ಸಂಸ್ಥೆ ಮಂಗಳೂರಿನ ಬೆಳಗವಣಿಗೆಯ ಉದ್ಧೇಶದೊಂದಿಗೆ ಕೆಲಸ ಮಾಡುತ್ತದೆ ಎಂದರು.
ರೋಹನ್ ಕಾರ್ಪೊರೇಷನ್ ಸಂಸ್ಥೆಯ ನಿರ್ದೇಶಕ ಡಿಯೋನ್ ಮೊಂತೇರೊ ಮಾತನಾಡಿ, ಮಂಗಳೂರಿನ ಜನತೆಗೆ ವಿಶ್ವಮಟ್ಟದ ಅನುಭವವನ್ನು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ನಗರದ ಜನರಿಂದ ದೊರೆತ ಅಭೂತಪೂರ್ವ ಸ್ಪಂದನೆ ಕಾರ್ಯಕ್ರಮವನ್ನು ಸಂಸ್ಥೆಯ ಪಯಣದ ಅತ್ಯಂತ ಸ್ಮರಣೀಯ ಘಟ್ಟವನ್ನಾಗಿ ರೂಪಿಸಿದೆ ಎಂದರು.ನಂತರ ನಡೆದ ವಿಶೇಷ ಸಂವಾದದಲ್ಲಿ ಶಾರುಖ್ ಖಾನ್, ಡಾ.ರೋಹನ್ ಮೊಂತೇರೊ ಹಾಗೂ ಡಿಯೋನ್ ಮೊಂತೇರೊ ಅವರು ಮಹತ್ವಾಕಾಂಕ್ಷೆ, ನಾಯಕತ್ವ, ಉದ್ಯಮಶೀಲತೆ, ಪರಿಶ್ರಮ ಮತ್ತು ಯಶಸ್ಸಿನ ಪಯಣದ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು.ಸಾಂಸ್ಕೃತಿಕ ಕಾರ್ಯಕ್ರಮ: ಕರಾವಳಿಯ ಕಲಾತಂಡಗಳ ವೈವಿಧ್ಯಮಯ ಪ್ರದರ್ಶನ, ಇಂಡಿಯನ್ ಐಡಲ್ ಖ್ಯಾತಿಯ ಗಾಯಕ ಸಲ್ಮಾನ್ ಅಲಿ ಅವರ ಗಾಯನ ಕಾರ್ಯಕ್ರಮ ನಡೆಯಿತು.ಅಡ್ಯಾರ್ ಗಾರ್ಡನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯಮ ವಲಯದ ಗಣ್ಯರು, ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳು, ಸಮಾಜದ ಪ್ರತಿನಿಧಿಗಳು, ವಿಶೇಷ ಆಹ್ವಾನಿತರು, ರೋಹನ್ ಕಾರ್ಪೊರೇಶನ್ನ ಹಿತೈಷಿಗಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು. ಸಾಹಿಲ್ ಜಹೀರ್ ಹಾಗೂ ಆರ್ಜೆ ಡೋನಾ ನಿರೂಪಿಸಿದರು.
ಮಂಗಳೂರು ವಿಮಾನ ನಿಲ್ದಾಣದ ಮೂಲಕ ನಗರಕ್ಕೆ ಆಗಮಿಸಿದ ನಟ ಶಾರುಖ್ ಖಾನ್ ಅವರನ್ನು ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಶಾರುಖ್ ಖಾನ್ರನ್ನು ನೋಡಲು ಬಾರೀ ಸಂಖ್ಯೆಯ ಅಭಿಮಾನಿಗಳು ನಿಲ್ದಾಣದ ಬಳಿ ಆಗಮಿಸಿದ್ದರು. ಅಭಿಮಾನಿಗಳತ್ತ ಶಾರುಖ್ ಕೈಬೀಸಿ ಆತ್ಮೀಯತೆ ಹಂಚಿಕೊಂಡರು. ಬಳಿಕ ಕಾರ್ಯಕ್ರಮದತ್ತ ಪ್ರಯಾಣಿಸಿದರು.