ಪ್ರತಿ ಹೆಣ್ಣುಮಗಳೂ ಹುಟ್ಟಿನಿಂದಲೇ ನಾಯಕಿ: ಡಾ.ನಾಗಲಕ್ಷ್ಮೀ ಚೌಧರಿ

KannadaprabhaNewsNetwork |  
Published : Aug 09, 2026, 02:00 AM IST
ಕ್ಯಾಪ್ಷನ8ಕೆಡಿವಿಜಿ31 ದಾವಣಗೆರೆಯಲ್ಲಿಂದು ನಡೆದ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಾ.ನಾಗಲಕ್ಷ್ಮಿ ಚೌಧರಿ ಉದ್ಘಾಟಿಸಿದರು. ಹರಿಹರ ಶಾಸಕ ಬಿ.ಪಿ.ಹರೀಶ್, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಇತರರು ಇದ್ದರು...........ಕ್ಯಾಪ್ಷನ8ಕೆಡಿವಿಜಿ32 ದಾವಣಗೆರೆಯಲ್ಲಿಂದು ನಡೆದ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಾ.ನಾಗಲಕ್ಷ್ಮಿ ಚೌಧರಿ ಉದ್ಘಾಟಿಸಿ ಮಾತನಾಡಿದರು.......ಕ್ಯಾಪ್ಷನ8ಕೆಡಿವಿಜಿ33 ದಾವಣಗೆರೆಯಲ್ಲಿಂದು ನಡೆದ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಡಾ.ನಾಗಲಕ್ಷ್ಮಿ ಚೌಧರಿ ಇತರೆ ಗಣ್ಯರು ಮಹಿಳಾ ನುಡಿ ತೇರು ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿದರು. | Kannada Prabha

ಸಾರಾಂಶ

ಈ ನಾಡಿನ ಪ್ರತಿಯೊಬ್ಬ ಹೆಣ್ಣುಮಗಳೂ ಹುಟ್ಟಿನಿಂದಲೇ ನಾಯಕಿ. ಅವರಿಗೆ ಅವಕಾಶಗಳು ಸಿಗಬೇಕು ಅಷ್ಟೇ. ಅವಕಾಶ ಸಿಕ್ಕರೆ ತೊಟ್ಟಿಲು ತೂಗುವ ಕೈ ಜಗವನ್ನೇ ಆಳುತ್ತೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.

- ದಾವಣಗೆರೆ ಜಿಲ್ಲಾ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ।

- ರಾಜ್ಯ ಮಹಿಳಾ ಅಧ್ಯಕ್ಷರಿಂದ ಉದ್ಘಾಟನೆ

- - -

ಕನ್ನಡ ಪ್ರಭ ವಾರ್ತೆ ದಾವಣಗೆರೆ

ಈ ನಾಡಿನ ಪ್ರತಿಯೊಬ್ಬ ಹೆಣ್ಣುಮಗಳೂ ಹುಟ್ಟಿನಿಂದಲೇ ನಾಯಕಿ. ಅವರಿಗೆ ಅವಕಾಶಗಳು ಸಿಗಬೇಕು ಅಷ್ಟೇ. ಅವಕಾಶ ಸಿಕ್ಕರೆ ತೊಟ್ಟಿಲು ತೂಗುವ ಕೈ ಜಗವನ್ನೇ ಆಳುತ್ತೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ನಡೆದ ದಾವಣಗೆರೆ ಜಿಲ್ಲಾ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತಿ ಜಿ.ಎಸ್. ಶಿವರುದ್ರಪ್ಪನವರ ಸ್ತ್ರೀ ಅಂದರೆ ಅಷ್ಟೇ ಸಾಕೆ... ಎಂಬ ಗೀತೆಯನ್ನು ಉದಾಹರಿಸಿ ಮಾತನಾಡಿ ಅವರು, ತಂದೆ, ಗಂಡ, ಮಗನನ್ನು ಎಲ್ಲರನ್ನೂ ತನ್ನ ಮಗನಾಗಿ ಅಪ್ಪುವಂತಹ ಆಕೆಗೆ ಸ್ತ್ರೀ ಅಂದರೆ ಅಷ್ಟೇ ಸಾಕೆ. ಅಮ್ಮನ ಪ್ರೀತಿ, ಹಾರೈಕೆ, ಸೃಷ್ಠಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಸಾಹಿತಿಗಳೆಲ್ಲಾ ಇಲ್ಲಿದ್ದೀರಿ, ಲೇಖನಿ ಖಡ್ಗಕ್ಕಿಂತ ಕಠೋರ, ಶಕ್ತಿ ಇರುತ್ತದೆ. ನಿಮ್ಮ ಲೇಖನಿ ಇನ್ನಷ್ಟು ಕಠೋರವಾಗಿ ಬರೆಯಲಿ, ಇನ್ನಷ್ಟು ಶಕ್ತಿಯನ್ನು ತುಂಬಲಿ ಎಂದರು.

ದಾವಣಗೆರೆಯಲ್ಲಿ ಭ್ರೂಣಹತ್ಯೆ, ಬಾಲ್ಯವಿವಾಹ, ಪೋಕ್ಸೋ ಕೇಸುಗಳು, ಕೊಲ್ಲುವಂಥ ಘಟನೆಗಳು ನಡೆಯುತ್ತಿವೆ. ಇಂದು ಜನನ ಪ್ರಮಾಣ ನೋಡಿದರೆ ಗಂಡುಮಕ್ಕಳೇ ಜಾಸ್ತಿ. ಪ್ರಕೃತಿಗೆ ವಿರುದ್ಧವಾದ ವ್ಯವಸ್ಥೆ ಸೃಷ್ಟಿ ಮಾಡಿದ್ದೇವೆ. ನಮ್ಮ ತಾಯಂದಿರು, ಮಹಿಳಾ ಸಾಹಿತಿಗಳ ಲೇಖನಿಯಲ್ಲಿ ಕ್ರಾಂತಿಯನ್ನು ಮೂಡಲಿ, ಆ ಹೆಣ್ಣುಮಗಳ ಹೊಟ್ಟೆಯಲ್ಲಿ ಸಾಯುವ ಕುಡಿಗೆ ಜೀವವನ್ನು ಕೊಡುವಂತಾಗಲಿ ಎಂದು ಆಶಿಸಿದರು.

ಪ್ರತಿ ಗ್ರಾಮ, ಊರುಗಳಲ್ಲಿ ಗ್ರಾಮ ದೇವತೆ, ನಗರದೇವತೆ ಗುಡಿಗಳಿವೆ. ಎಲ್ಲಿಯೂ ನಗರ ದೇವ, ಗ್ರಾಮ ದೇವ ಅಂತಾ ಇರಲ್ಲ. ದುರ್ಗಮ್ಮ ಗುಡಿಯಲ್ಲಿ ಇಲ್ಲ, ನಿಮ್ಮ ಪ್ರತಿಯೊಬ್ಬರಲ್ಲೂ ಇದ್ದಾರೆ. ನೀವು ಆ ದುರ್ಗಿಯನ್ನು ಎದ್ದೇಳಿಸಬೇಕು. ನಿಮ್ಮ ಶಕ್ತಿಗೆ ಮೀರಿದ್ದು ಯಾವುದೂ ಇಲ್ಲ. ಎಂತಹ ಅಪಮಾನ, ಅವಮಾನ, ಸವಾಲುಗಳು ಬರಲಿ ಅವುಗಳನ್ನು ಎದುರಿಸಬೇಕವ್ವ. ನೀವು ಕನಸು ಕಂಡ ದಿಕ್ಕಿನಲ್ಲಿ ಹೋರಾಟ ಮಾಡಿದರೆ, ನಿಮ್ಮಲ್ಲಿ ಸತ್ಯ ಇದ್ದರೆ ಗುರಿ ಸಾಧಿಸುತ್ತೀರಿ. ನೀವು ಏನು ಅಂದುಕೊಳ್ಳುತ್ತೀರೋ, ಏನು ಯೋಚನೆ ಮಾಡುತ್ತೀರೋ ಅದು ನೀವು ಆಗುತ್ತೀರಿ. ನಮಗೆ ಅಕ್ಕ ಮಹಾದೇವಿ ರೋಲ್ ಮಾಡೆಲ್. ಅಕ್ಕ ಮಹಾದೇವಿ ಶಕ್ತಿಯಾಗಿದ್ದಾರೆ ಎಂದರು.

ಗಂಡಸ್ಥನ ಅಂದರೆ ನಾನು ಹೆಚ್ಚು, ನಾನು ಮುಂದೆ ಅಂತಲ್ಲ. ನಿಜವಾದ ಗಂಡಸ್ಥನ ಮಾತೃಹೃದಯ, ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹ ನೀಡುವುದಾಗಿದೆ. ಶಿವ-ಪಾರ್ವತಿಯರ ತರಹ ಅರ್ಧನಾರೀಶ್ವರರಂತೆ ಒಂದಾಗಿ ಇರುವುದೇ ಗಂಡಸ್ಥನ. ವಿಶ್ವ ಕನ್ನಡ ಸಮ್ಮೇಳನ ಖಂಡಿತವಾಗಿಯೂ ದಾವಣಗೆರೆಯಲ್ಲಿ ಆಗಬೇಕು. ಈ ಬಗ್ಗೆ ನಾನೂ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡುವೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಹರಿಹರ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಜಿಲ್ಲಾ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ದಾವಣಗೆರೆಯ ಪ್ರಪ್ರಥಮ ಶಾಸಕಿ ಬಳ್ಳಾರಿ ಸಿದ್ದಮ್ಮ ಎನ್ನುವುದು ನಮಗೆ ಹೆಮ್ಮೆ. ನಮ್ಮ ಜಿಲ್ಲೆಗೆ ಮಹಿಳೆಯರ ಕೊಡುಗೆ ಸಾಕಷ್ಟು ಇದೆ. ಈ ಸಾಹಿತ್ಯ ಸಮ್ಮೇಳನ ದಾವಣಗೆರೆಯಲ್ಲಿ 2 ದಿನಗಳ ಕಾಲ ಸಂಭ್ರಮದಿಂದ ನಡೆಯುತ್ತಿದೆ. ಇದು ರಾಜ್ಯದಲ್ಲಿಯೇ ಪ್ರಪ್ರಥಮವಾಗಿದೆ ಎಂದರು.

ಗಿರಿಜಮ್ಮ ಹೆಸರಿನವರಿಗೆ ಶಕ್ತಿ:

ನಾಗಮ್ಮ ಕೇಶವಮೂರ್ತಿ ಅವರು 3-4 ಬಾರಿ ದಾವಣಗೆರೆ, ಮಾಯಕೊಂಡ ಕ್ಷೇತ್ರದ ಶಾಸಕರಾಗಿ, ಸಚಿವರಾಗಿಯೂ ಮಹಿಳಾ ತಂಡ ಕಟ್ಟುವುದರಲ್ಲಿ ಶ್ರಮಿಸಿದ್ದಾರೆ. ಜಿಲ್ಲೆಯಲ್ಲಿ ಗಿರಿಜಮ್ಮ ಅನ್ನುವವರಿಗೆ ಶಕ್ತಿ ಇದೆ. ಕಿರುವಾಡಿ ಗಿರಿಜಮ್ಮ, ಸಾಹಿತಿ ಟಿ.ಗಿರಿಜಮ್ಮ, ಹರಿಹರದ ಡಾ.ಗಿರಿಜಮ್ಮ ಅವರು ಸಾಕಷ್ಟು ಕನ್ನಡ ಸಾಹಿತ್ಯಕ್ಕೆ ಕೊಡುಗೆಗಳ ಕೊಟ್ಟಿದ್ದಾರೆ. ಇನ್ನು ಮುಂದೆ ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಅವರಿಗೆ 78 ವರ್ಷ. ಅವರು ಈ ಮಹಿಳಾ ಶಕ್ತಿಯನ್ನು ಸಮಾಜಮುಖಿ ಸೇವೆಯಲ್ಲಿ ತೊಡಗಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚು ಪ್ರಯತ್ನ ಮಾಡಬೇಕು ಎಂದರು.

ಯಾವುದಾದರೂ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ವಯಸ್ಸು ಅಡ್ಡ ಬರಲ್ಲ. ನಾವು ಏನೂ ಮಾಡದೇ ಮನೆಯಲ್ಲಿದ್ದಾಗ ಮಾತ್ರ ವಯಸ್ಸು ಅಡ್ಡ ಬರುತ್ತದೆ. ಏನಾದರೂ ಸಾಧನೆ ಮಾಡಬೇಕು ಅಂದುಕೊಂಡಾಗ ವಯಸ್ಸು ಅಡ್ಡ ಬರಲ್ಲ. ಇದಕ್ಕೆ ಸಾಕ್ಷಿ ತುಮಕೂರು ಡಾ.ಸಿದ್ಧಗಂಗಾ ಶ್ರೀಗಳು. ನಾವು ಗಮನ ಕೊಡಬೇಕಾದದ್ದು ನಮ್ಮ ಮುಂದಿನ ಸಾಧನೆ, ಗುರಿ ಬಗ್ಗೆ. ನಾವೆಲ್ಲಾ ಮುಂದೆ ಗುರಿ ಇಟ್ಟುಕೊಂಡು ಸಾಗೋಣ. ಕ.ಸಾ.ಪ. ಅಧ್ಯಕ್ಷರ ಆಶಯದಂತೆ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮ ದಾವಣಗೆರೆಯಲ್ಲಿಯೇ ಆಗಬೇಕೆಂಬ ಮಹದಾಸೆ ಇದೆ. ಅದು ಆದಷ್ಟು ಬೇಗ ಈಡೇರಲಿ. ಇದರಿಂದ ದಾವಣಗೆರೆಗೆ ಸಾಕಷ್ಟು ಯೋಜನೆಗಳು ಬರಲಿ ಎಂದು ಆಶಿಸಿದರು.

ಎಲ್ಲರ ಸಹಕಾರ ಅತ್ಯವಶ್ಯಕ:

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ದಿಕ್ಸೂಚಿ ಭಾಷಣ ಮಾಡುತ್ತ, ಕನ್ನಡ ಭಾಷೆ ಸುಂದರವಾದ ಭಾಷೆ, ವಿನೋಬಾ ಭಾವೆ ಹೇಳಿದಂತೆ ಕನ್ನಡ ವಿಶ್ವದ ಎಲ್ಲ ಲಿಪಿಗಳಿಗಿಂದ ಸುಂದರವಾಗಿ ಕಂಗೊಳಿಸುವಂತಹ ಲಿಪಿ. ಕನ್ನಡ ಭಾಷೆಗೆ ಹೆಚ್ಚಿನ ಮಹತ್ವ ಕೊಡಬೇಕು. ಎಲ್ಲ ಮಹಿಳೆಯರನ್ನು ಉತ್ಕೃಷ್ಟಗೊಳಿಸಿ ಅವರಿಗೆ ಸಂಗೀತ, ಸಾಹಿತ್ಯ, ನೃತ್ಯ ಕ್ಷೇತ್ರ, ಜಾನಪದ ಕಲೆ, ಎಲ್ಲ ಪ್ರಕಾರಗಳನ್ನು ಪರಿಚಯಿಸುವ ಕನ್ನಡದ ಕೆಲಸವನ್ನು ಈ ಸಮ್ಮೇಳನ ಮಾಡುತ್ತಾ ಇದೆ. ಇಲ್ಲಿ ಕೈಗೊಳ್ಳುವ ತೀರ್ಮಾನಗಳು ಇಡೀ ನಾಡಿಗೇ ದಿಕ್ಸೂಚಿಯಾಗಲಿ. ನನ್ನ ನಾಲ್ಕು ವರ್ಷ ಎಂಟು ತಿಂಗಳ ಅವಧಿಯಲ್ಲಿ ಸಾಕಷ್ಟು ಕನ್ನಡಪರ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಅವಧಿ ಇನ್ನು ಕೆಲವೇ ತಿಂಗಳುಗಳಿವೆ, ಅದರಲ್ಲಿ ಇನ್ನೂ ಸಾಕಷ್ಟು ಕನ್ನಡಪರ ಕೆಲಸಗಳನ್ನು ಮಾಡಲು ಆಸಕ್ತನಾಗಿದ್ದೇನೆ. ಎಲ್ಲರ ಸಹಕಾರ ಅತ್ಯವಶ್ಯಕ ಎಂದರು.

ವೇದಿಕೆಯಲ್ಲಿ ಗಣ್ಯರು ಮಹಿಳಾ ನುಡಿತೇರು ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿದರು. ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಲೀಲಾಜಿ, ಸಮ್ಮೇಳನದ ಪ್ರಧಾನ ಸಂಚಾಲಕಿ ವೀಣಾ ಕೃಷ್ಣಮೂರ್ತಿ, ತಾಲೂಕು ಕ.ಸಾ.ಪ. ಅಧ್ಯಕ್ಷೆ ಸುಮತಿ ಜಯಪ್ಪ, ಜಗಳೂರಿನ ತಿಪ್ಪಮ್ಮ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಸಾರಿಕಾ ಗಂಗಾಧರ ಸ್ವಾಮಿ, ವಿನುತಾ ಎಚ್.ಟಿ. ಶೇಖರ್, ಡಾ.ಸಮೃದ್ಧಿ ಗಿತ್ತೆ ಮಾಧವ ವಿಠ್ಠಲ ರಾವ್, ಡಾ.ನೀತಾ ರಂಗಸ್ವಾಮಿ, ಹೊನ್ನಾಳಿಯ ರತ್ನಮ್ಮ ಡಿ.ಜಿ.ಶಾಂತನಗೌಡ್ರು, ಕಿರುವಾಡಿ ಗಿರಿಜಮ್ಮ, ಹೇಮಾ ಶಾಂತಪ್ಪ ಪೂಜಾರಿ, ನೀಲಗುಂದ ಜಯಮ್ಮ, ಗೀತಾ ದಿಳ್ಯಪ್ಪ, ವೀಣಾ ನಂಜಪ್ಪ, ಬಿ.ವಿ.ಪರಿಮಳ ಜಗದೀಶ ಕೂಲಂಬಿ, ಸಪ್ನಾ ವೀರೇಶ ಒಡೆಯರ್, ರೇಷ್ಮಾ ಕೌಸರ್, ಜಿಲ್ಲಾ, ತಾಲೂಕು ಕಸಾಪ ಪದಾಧಿಕಾರಿಗಳು, ಇತರರು ಇದ್ದರು.

ಸುಗಮ ಸಂಗೀತ ತಂಡದವರು ನಾಡಗೀತೆ, ಸಾಧನಾ ಗೀತೆ, ರೈತ ಗೀತೆಯನ್ನು ಹಾಡಿದರು. ತಾ.ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಸ್ವಾಗತಿಸಿದರೆ, ಸೌಭಾಗ್ಯ ಹಿರೇಮಠ, ಹೇಮಾ ಗಣೇಶ ಶೇಠ್ ನಿರೂಪಿಸಿದರು. ಇಂದಿರಾ ರಂಗನಾಥ ರೆಡ್ಡಿ ವಂದಿಸಿದರು. ಸಮ್ಮೇಳನದ ಅಂಗವಾಗಿ ನಡೆದ ತಾಯಿ ಭುವನೇಶ್ವರಿ, ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿ ಶುಭ ಕೋರಿದರು.

- - -

-8ಕೆಡಿವಿಜಿ31: ದಾವಣಗೆರೆಯಲ್ಲಿ ಶನಿವಾರ ನಡೆದ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಾ.ನಾಗಲಕ್ಷ್ಮೀ ಚೌಧರಿ ಉದ್ಘಾಟಿಸಿದರು. ಹರಿಹರ ಶಾಸಕ ಬಿ.ಪಿ.ಹರೀಶ್, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಇತರರು ಇದ್ದರು.

-8ಕೆಡಿವಿಜಿ32: ದಾವಣಗೆರೆಯಲ್ಲಿ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಾ.ನಾಗಲಕ್ಷ್ಮೀ ಚೌಧರಿ ಉದ್ಘಾಟಿಸಿ ಮಾತನಾಡಿದರು.

-8ಕೆಡಿವಿಜಿ33: ದಾವಣಗೆರೆಯಲ್ಲಿ ನಡೆದ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ನಾಗಲಕ್ಷ್ಮೀ ಚೌಧರಿ, ಇತರೆ ಗಣ್ಯರು ಮಹಿಳಾ ನುಡಿತೇರು ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿದರು.

- - -

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿನ ಹೃದಯಾಘಾತಕ್ಕೆ ರಕ್ತನಾಳ ಸವೆತ ಕಾರಣ!
ಇಂದಿನಿಂದ 3 ದಿನ ಜೆಡಿಎಸ್‌ ‘ಬಿಡದಿ ಪಾದಯಾತ್ರೆ’