- ಸಂಚಾರ ನಿಯಮ, ಸ್ವಚ್ಛತೆ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಬೈಕ್ ರ್ಯಾಲಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ಅಪಘಾತ, ಸಾವು- ನೋವುಗಳನ್ನು ತಡೆಯಬಹುದು ಎಂಬ ಬಗ್ಗೆ ಅರಿವು ಮೂಡಿಸಲು ಜ.1ರಿಂದ 31ರವರೆಗೆ ಇಡೀ ತಿಂಗಳು ರಸ್ತೆ ಸುರಕ್ಷತಾ ಮಾಸ ಆಚರಿಸುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಹೇಳಿದರು.ನಗರದ ಶ್ರೀ ಜಯದೇವ ವೃತ್ತದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ವಿವಿಧ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ, ಸ್ವಚ್ಛತಾ ಅರಿವು ಜಾಗೃತಿಯ ಬೈಕ್ ರ್ಯಾಲಿಗೆ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿ ಶಾಲಾ-ಕಾಲೇಜುಗಳು, ವಾಹನ ಚಾಲಕರಲ್ಲಿ ಸಂಚಾರ ನಿಯಮಗಳ ಅರಿವು ಮೂಡಿಸುವ ಜೊತೆಗೆ ಅವುಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಲಾಗಿದೆ ಎಂದರು.
ಕೆಲ ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಧರಿಸುತ್ತಿಲ್ಲ. ಹೆಲ್ಮೆಟ್ ಧರಿಸಿದ್ದರೂ ಅವು ಐಎಸ್ಐ ಮಾರ್ಕ್ನ, ಗುಣಮಟ್ಟದ ಪೂರ್ಣ ಹೆಲ್ಮೆಟ್ ಆಗಿರುವುದಿಲ್ಲ. ಇದೇ ಕಾರಣ ಸಾಕಷ್ಟು ಅಪಘಾತ, ಸಾವು, ನೋವು ಸಂಭವಿಸುತ್ತಿವೆ. ಯಾರೇ ಆಗಿರಲಿ, ಗುಣಮಟ್ಟದ, ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಬಾರದು. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಸಂದೇಶ ನೀಡಲು, ಜೊತೆಗೆ ಪಾಲಿಕೆಯಿಂದ ಸ್ವಚ್ಛತಾ ಅಭಿಯಾನ ಸಹ ಬೈಕ್ ರ್ಯಾಲಿ ಮೂಲಕ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.ಅರ್ಧ ಹೆಲ್ಮೆಟ್ ಧರಿಸುವುದನ್ನು ಈಗಾಗಲೇ ಸಾಕಷ್ಟು ನಿಯಂತ್ರಿಸಿದ್ದೇವೆ. ಮುಂದೆಯೂ ಈ ಬಗ್ಗೆ ಕಾರ್ಯಾಚರಣೆ ಮುಂದುವರಿಸುತ್ತೇವೆ. ಹೆಲ್ಮೆಟ್ ಧರಿಸದವರಿಗೆ ಕೇಸ್ ಮಾಡುತ್ತೇವೆ. ಪೊಲೀಸರು ಹೆಲ್ಮೆಟ್ ಧರಿಸದಿದ್ದರೆ ಕೇಸ್ ಮಾಡುತ್ತಾರೆ, ದಂಡ ವಿಧಿಸುತ್ತಾರೆಂಬ ಕಾರಣಕ್ಕೆ ಹೆಲ್ಮೆಟ್ ಧರಿಸುವುದಲ್ಲ. ನಿಮ್ಮ ಅಮೂಲ್ಯ ಜೀವಗಳನ್ನು ಕಾಪಾಡಿಕೊಳ್ಳಲು, ನಿಮ್ಮನ್ನೇ ನಂಬಿರುವ ಕುಟುಂಬದ ಹಿತಕ್ಕಾಗಿ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ, ಸ್ವಯಂ ಪ್ರೇರಣೆಯಿಂದ ಹೆಲ್ಮೆಟ್ ಧರಿಸಬೇಕು ಎಂದು ಎಸ್ಪಿ ಅವರು ತಿಳಿಸಿದರು.
ಜಾಥಾ ಸಾಗಿದ್ದು ಎಲ್ಲೆಲ್ಲಿ?:ನಗರ ಡಿವೈಎಸ್ಪಿ ಬಿ.ಶರಣ ಬಸವೇಶ್ವರ, ಇನ್ಸ್ಪೆಕ್ಟರ್ಗಳಾದ ಮಂಜುನಾಥ, ಗಾಯತ್ರಿ, ಶೈಲಜಾ, ಪ್ರಮೀಳಮ್ಮ, ಮಹದೇವ ಭತ್ತೆ, ಶಕುಂತಲ, ಜಯಶೀಲ, ಪೊಲೀಸ್ ಹಾಗೂ ಪಾಲಿಕೆ ಅಧಿಕಾರಿ, ಸಿಬ್ಬಂದಿ, ಸಂಘ- ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿ, ಯುವಜನರು ಇದ್ದರು. ಶ್ರೀ ಜಯದೇವ ವೃತ್ತದಿಂದ ಆರಂಭವಾದ ಬೈಕ್ ರ್ಯಾಲಿ ಕುವೆಂಪು ರಸ್ತೆ, ಈರುಳ್ಳಿ ಮಾರ್ಕೆಟ್ ರಸ್ತೆ, ಬಂಬೂ ಬಜಾರ್, ಶ್ರೀ ವೆಂಕಟೇಶ್ವರ ವೃತ್ತ, ಅರಳಿಮರ ವೃತ್ತ, ಹಳೆ ಬೇತೂರು ರಸ್ತೆ- ಹಗೇದಿಬ್ಬ ವೃತ್ತ, ಶ್ರೀ ದುರ್ಗಾಂಬಿಕಾ ದೇವಸ್ಥಾನ, ವೀರ ಮದಕರಿ ನಾಯಕ ವೃತ್ತ, ವೀರ ರಾಣಿ ಕಿತ್ತೂರು ಚನ್ನಮ್ಮ ವೃತ್ತ, ಹಳೆ ಪಿಬಿ ರಸ್ತೆ, ವಿನೋಬ ನಗರ 2 ನೇ ಮುಖ್ಯ ರಸ್ತೆ, ಶಾಬನೂರು ರಸ್ತೆ, ಬಾಪೂಜಿ ಶಾಲೆ, ಬಿಐಇಟಿ ರಸ್ತೆ, ನೂತನ ಕಾಲೇಜು ರಸ್ತೆ, ವಿದ್ಯಾನಗರ ಮುಖ್ಯ ರಸ್ತೆ, ಡೆಂಟಲ್ ಕಾಲೇಜು ರಸ್ತೆ, ಶಾಬನೂರು ರಸ್ತೆ, ವರ್ತುಲ ರಸ್ತೆ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಎಸ್ಪಿ ಕಚೇರಿ ಆವರಣದಲ್ಲಿ ಬೈಕ್ ರ್ಯಾಲಿ ಮುಕ್ತಾಯವಾಯಿತು.
- - -(ಬಾಕ್ಸ್) * ಸ್ವಚ್ಛ ದಾವಣಗೆರೆ ಸಾಧನೆಗೆ ಜನರ ಸಹಕಾರ ಅತಿ ಮುಖ್ಯ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, 2024-25ನೇ ಸಾಲಿನ ಸ್ವಚ್ಛತಾ ಸ್ಪರ್ಧೆಯಲ್ಲಿ ದಾವಣಗೆರೆ ಪಾಲಿಕೆ ಇಡೀ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ರಾಷ್ಟ್ರಮಟ್ಟದಲ್ಲಿ 32ನೇ ಸ್ಥಾನದಲ್ಲಿದೆ. 2025-26ನೇ ಸಾಲಿನಲ್ಲೂ ನಾವು ಸ್ಪರ್ಧೆ ಆಯೋಜಿಸಿದ್ದೇವೆ. ಈ ಮೂಲಕ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು, ಬ್ಲಾಕ್ ಸ್ಪಾಟ್ ಕಡಿಮೆ ಆಗಬೇಕೆಂಬ ಉದ್ದೇಶವಿದೆ. ಸ್ವಚ್ಛತೆ ಅಭಿಯಾನ 100ಕ್ಕೆ 100ರಷ್ಟು ಮನೆ ಮನೆಗೂ ತಲುಪಬೇಕು. ಇದರ ಭಾಗವಾಗಿ ಬೈಕ್ ರ್ಯಾಲಿ ಮೂಲಕ ಪೊಲೀಸ್ ಇಲಾಖೆ ಸಹಯೋಗದಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಊರಿನ ಸ್ವಚ್ಛತೆಗೆ ಜನರ ಸ್ಪಂದನೆ, ಸಹಕಾರವೂ ಅತಿ ಮುಖ್ಯ ಎಂದು ಮನವಿ ಮಾಡಿದರು.
- - -(ಕೋಟ್) ಪ್ರಯಾಣಿಕರ ಆಟೋ ರಿಕ್ಷಾಗಳಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು, ಸಿಗ್ನಲ್ ಜಂಪ್ ಮಾಡಿ, ಸಂಚಾರ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ. ಇಂಥ ಆಟೋ ಚಾಲಕರ ಮೇಲೆಯೂ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕಟ್ಟಿಟ್ಟ ಬುತ್ತಿ.
- ಉಮಾ ಪ್ರಶಾಂತ, ಜಿಲ್ಲಾ ಎಸ್ಪಿ.- - -
-28ಕೆಡಿವಿಜಿ7: ದಾವಣಗೆರೆಯಲ್ಲಿ ಬುಧವಾರ ರಸ್ತೆ ಸುರಕ್ಷತಾ ಸಪ್ತಾಹ, ಸ್ವಚ್ಛತಾ ಅರಿವು ಜಾಗೃತಿಯ ಬೈಕ್ ರ್ಯಾಲಿಗೆ ಜಿಲ್ಲಾ ಎಸ್ಪಿ ಉಮಾ ಪ್ರಶಾಂತ ಹಸಿರು ನಿಶಾನೆ ತೋರಿದರು. ಪಾಲಿಕೆ ಆಯುಕ್ತೆ ರೇಣುಕಾ ಇತರರು ಇದ್ದರು. -28ಕೆಡಿವಿಜಿ1, 2, 3, 4:ದಾವಣಗೆರೆಯಲ್ಲಿ ಬುಧವಾರ ರಸ್ತೆ ಸುರಕ್ಷತಾ ಸಪ್ತಾಹ, ಸ್ವಚ್ಛತಾ ಅರಿವು ಜಾಗೃತಿಯ ಬೈಕ್ ರ್ಯಾಲಿಯಲ್ಲಿ ಎಸ್ಪಿ ಉಮಾ ಪ್ರಶಾಂತ, ಪಾಲಿಕೆ ಆಯುಕ್ತೆ ರೇಣುಕಾ, ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ಪಾಲ್ಗೊಂಡರು. -28ಕೆಡಿವಿಜಿ5, 6:
ದಾವಣಗೆರೆಯಲ್ಲಿ ಬುಧವಾರ ಜಿಲ್ಲಾ ಪೊಲೀಸ್ ಇಲಾಖೆ, ನಗರ ಪಾಲಿಕೆ, ಸಂಘ-ಸಂಸ್ಥೆಗಳಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ, ಸ್ವಚ್ಛತಾ ಅರಿವು ಜಾಗೃತಿಯಲ್ಲಿ ಎಸ್ಪಿ ಉಮಾ ಪ್ರಶಾಂತ, ಪಾಲಿಕೆ ಆಯುಕ್ತೆ ರೇಣುಕಾ ಇತರೆ ಅಧಿಕಾರಿ, ಸಿಬ್ಬಂದಿ.- - -