ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಪಿಎಸ್ಐ ನಿರಂಜನಗೌಡ ಕರೆ
ಮತಾದನ ಮಾಡುವುದು ನಮ್ಮ ಹಕ್ಕಾಗಿದ್ದು ಪ್ರತಿಯೊಬ್ಬರೂ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಪೊಲೀಸ್ ಠಾಣಾಧಿಕಾರಿ ನಿರಂಜನ ಗೌಡ ಕರೆ ನೀಡಿದರು. ಬುಧವಾರ ಪಟ್ಟಣ ಪಂಚಾಯಿತಿ ಮುಂಭಾಗದ ರಸ್ತೆಯ ಸರ್ಕಲ್ ನಲ್ಲಿ ಪಪಂ ನಿಂದ ಆಯೋಜನೆ ಮಾಡಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾವಂತರಿಗಿಂತ ಅವಿದ್ಯಾವಂತರೇ ಹೆಚ್ಚು ಮತ ನೀಡುತ್ತಾರೆ. ಗ್ರಾಮೀಣ ಭಾಗದ ಜನರು ತಪ್ಪದೆ ಮತ ನೀಡುತ್ತಾರೆ. ಆದರೆ, ಪಟ್ಟಣದ ಜನರು ಮತದಾನದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಇದು ಸರಿಯಲ್ಲ ಎಂದರು.
ಎಲ್ಲರೂ ತೆರಿಗೆ ಕಟ್ಟುತ್ತೇವೆ. ಪ್ರತಿಯೊಬ್ಬರೂ ಮತದಾನ ಮಾಡಿ ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಸೂಕ್ತ ನಾಯಕನನ್ನು ಆರಿಸಬೇಕು. ಸರ್ಕಾರಿ ನೌಕರರಿಗೆ ವೇತನ ನೀಡಿ ರಜೆ ಸಹ ನೀಡಲಾಗುತ್ತದೆ. ಮತದಾರರು ಯಾವುದೇ ಆಮಿಷಗಳಿಗೆ ಬಲಿಯಾಗದೆ ಮುಕ್ತವಾಗಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕು. ಈ ಬಾರಿ ಶೇ. 100 ರಷ್ಟು ಮತದಾನ ಮಾಡುವ ಮೂಲಕ ಇತರ ಜಿಲ್ಲೆಗಳಿಗೆ ಮಾದರಿಯಾಗೋಣ ಎಂದರು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಮಾತನಾಡಿ, ಪಟ್ಟಣದಲ್ಲಿ ವಾಹನದ ಮೂಲಕ ಪ್ರಚಾರ ಮಾಡಿ ಮತದಾರರಿಗೆ ಜಾಗೃತಿ ಮೂಡಿಸುತ್ತಿದ್ದೇವೆ. ಪಟ್ಟಣದ ವಿವಿಧ ವಾರ್ಡಿನಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ನಡೆಸುತ್ತೇವೆ. ಶೇ. 100 ರಷ್ಟು ಮತದಾನ ಆಗಬೇಕು ಎಂಬುದೇ ಈ ಪ್ರಚಾರದ ಮುಖ್ಯ ಉದ್ದೇಶವಾಗಿದೆ ಎಂದರು.