ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಬಾಪೂಜಿ ವಿದ್ಯಾಸಂಸ್ಥೆಯ ಆರ್.ಎಲ್. ಕಾನೂನು ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದಿಂದ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುವಲ್ಲಿ ಲೋಕಪಾಲ ವ್ಯವಸ್ಥೆಯ ಪಾತ್ರ ವಿಷಯವಾಗಿ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆಗೆ ಪ್ರತಿಯೊಬ್ಬರೂ ಹೋರಾಡಬೇಕು ಎಂದರು.
ಇಡೀ ಸಮಾಜ ಮತ್ತು ಆಡಳಿತ ವ್ಯವಸ್ಥೆಯನ್ನು ಕೊಳೆಸುವ ಮಹಾ ಪಿಡುಗಾಗಿ ಭ್ರಷ್ಟಾಚಾರ ಕಾಡುತ್ತಿದೆ. ಇದು ವ್ಯವಸ್ಥೆಗೆ ಅಂಟಿಕೊಂಡಿರುವ ಕ್ಯಾನ್ಸರ್ ಆಗಿದ್ದು, ಭ್ರಷ್ಟಾಚಾರವಿರುವ ಜಾಗದಲ್ಲಿ ಸಾಮಾಜಿಕ ಸಮಾನತೆ, ನ್ಯಾಯ ಸಿಗಲು ಸಾಧ್ಯವೇ ಇಲ್ಲ. ಹಣ ಕೊಟ್ಟರಷ್ಟೇ ನ್ಯಾಯ ಎಂಬುದು ವ್ಯವಸ್ಥೆಯ ದುರಂತ ಎಂದು ತಿಳಿಸಿದರು.ಸಾರ್ವಜನಿಕರ ಕೆಲಸ, ಕಾರ್ಯಕ್ಕೆ, ನ್ಯಾಯಕ್ಕೆ ಹಣ ಪಾವತಿಸಬೇಕಾದ ಸ್ಥಿತಿ ಬಂದರೆ ಅದನ್ನು ನ್ಯಾಯ ಎನ್ನಲು ಸಾಧ್ಯವಿಲ್ಲ. ಜಾಗತಿಕ ಭ್ರಷ್ಟಾಚಾರದ ಸೂಚ್ಯಂಕದಲ್ಲಿ ಭಾರತ 86ನೇ ಸ್ಥಾನದಲ್ಲಿದೆ. ಇದು ನಾವೆಲ್ಲರೂ ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ ಎಂದರು.
ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಆರ್.ಎಲ್.ಉಮಾಶಂಕರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಚಾರ್ಯ ಬಿ.ಪಿ.ಬಸವನಗೌಡ, ನಿರ್ದೇಶಕ ಎಂ.ಸೋಮಶೇಖರಪ್ಪ, ಸಹಾಯಕ ಪ್ರಾಧ್ಯಾಪಕ ಕೆ.ಎನ್.ಪ್ರದೀಪ, ಸಹಾಯಕ ಪ್ರಾಧ್ಯಾಪಕಿ ಟಿ.ಸಿ.ಪಂಕಜಾ, ಹಿರಿಯ ವಕೀಲ ಹನುಮಂತಪ್ಪ ಇತರರು ಇದ್ದರು.
ಎಲ್.ನಾರಾಯಣಸ್ವಾಮಿ ನ್ಯಾಯಮೂರ್ತಿ
ಹೆಣ್ಣುಮಕ್ಕಳು ಕಾನೂನು ಪದವಿ ಓದುವುದು ಸ್ವಲ್ಪ ಕಷ್ಟವಾಗಬಹುದು. ಆದರೆ, ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿರುವ ಹೆಣ್ಣುಮಕ್ಕಳಿಗೆ ಇದೂ ಸಾಧ್ಯವಾಗಲಿದೆ. ದೇಶದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಕಾನೂನು ಹೋರಾಟ ನಡೆಸಲು ಹೆಚ್ಚಿನ ಮಹಿಳೆಯರು ಕಾನೂನು ವೃತ್ತಿಗೆ ಬರಬೇಕಾದ ಅಗತ್ಯವಿದೆ. ಕಾನೂನು ಕೇವಲ ನ್ಯಾಯಾಲಯಕ್ಕೆ ಸೀಮಿತವಲ್ಲ, ಅದು ಇಡೀ ಸಮಾಜದ ಆರೋಗ್ಯ ಕಾಯುವ ಸಂಜೀವಿನಿ. ಹಾಗಾಗಿ ವಿದ್ಯಾರ್ಥಿಗಳು ದೇಶದ ಸಂವಿಧಾನ ಮತ್ತು ಕಾನೂನನ್ನು ಎತ್ತಿಹಿಡಿಯುವ ಭರವಸೆಯ ನಾಯಕರಾಗಬೇಕು ಎಂದು ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹೇಳಿದರು.