- ಅತಿ ಹಿಂದುಳಿದ ಅರಣ್ಯಾಧಾರಿತ ಬುಡಕಟ್ಟು ವರ್ಗದವರ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ
ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದ ಆಶಯದಂತೆ ಪ್ರತಿಯೊಂದು ಸಮಾಜ ಮತ್ತು ವರ್ಗಕ್ಕೂ ಸರ್ಕಾರದ ಸವಲತ್ತು ಹಾಗೂ ಗೌರವ ಸಿಗಬೇಕು ಎಂದು ಕೇಂದ್ರ ಸರ್ಕಾರದ ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಅತಿ ಹಿಂದುಳಿದ ಅರಣ್ಯಾಧಾರಿತ ಬುಡಕಟ್ಟು ವರ್ಗದವರ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಸಂವಿಧಾನದಡಿ ಎಲ್ಲರಿಗೂ ಸರ್ಕಾರದ ಸೌಲಭ್ಯ ದೊರೆಯಬೇಕು ಎಂಬ ಆಶಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದಿವಾಸಿಗಳು ಈ ದೇಶದ ಮೂಲ ನಿವಾಸಿಗರು, ಅವರನ್ನು ದೇಶದ ಮುಖ್ಯವಾಹಿನಿಗೆ ತರುವುದು ಮತ್ತು ಬದುಕುವ ಶಕ್ತಿ ತುಂಬುವುದು ಅತ್ಯಗತ್ಯ ಎಂದರು.ಪ್ರಸ್ತುತ 4 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವ ಗುರಿ ಸರ್ಕಾರ ಹೊಂದಿದೆ. ಇದು ಕೇವಲ ಕ್ರೀಡಾಕೂಟದದದದದವಲ್ಲ, ಬದಲಾಗಿ ಬುಡಕಟ್ಟು ಸಮುದಾಯಗಳನ್ನು ಒಗ್ಗೂಡಿಸಿ ಅವರಲ್ಲಿ ವಿಶ್ವಾಸ ಮೂಡಿಸಿ ಸಂಘಟನೆ ಬಲಪಡಿಸುವ ವೇದಿಕೆ ಎಂದು ಹೇಳಿದರು.
ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಅತಿ ಹಿಂದುಳಿದ ಬುಡಕಟ್ಟು ಸಮಾಜದ ಮಕ್ಕಳು ಶಿಕ್ಷಣ ಮತ್ತು ಕ್ರೀಡೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಡಾ. ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಇಂದು ಪ್ರತಿ ವ್ಯಕ್ತಿಗೂ ಗೌರವ ಮತ್ತು ಸಮಾನ ಕಾನೂನು ಅವಕಾಶ ಲಭ್ಯವಾಗುತ್ತಿವೆ. ಬುಡಕಟ್ಟು ಸಮಾಜಕ್ಕೆ ಸಿಗುತ್ತಿರುವ ಇಂತಹ ವೇದಿಕೆಗಳು ಸಂವಿಧಾನದ ಫಲ ಎಂದರು.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಆದರ್ಶ ಸ್ಮರಿಸಿದ ಅವರು, ಹಿಂದುಳಿದ ವರ್ಗದ ಮಕ್ಕಳು ಸಮಾಜದ ಇತರರಂತೆ ಉತ್ತಮ ಬುದ್ಧಿಮತ್ತೆ ಮತ್ತು ಸ್ಥಾನಮಾನ ಪಡೆಯಬೇಕು ಎಂಬುದು ಸರ್ಕಾರದ ಉದ್ದೇಶ. ಇದಕ್ಕಾಗಿ ಇಂತಹ ಕ್ರೀಡಾಕೂಟಗಳು ಸಹಕಾರಿ ಎಂದು ಹೇಳಿದರು.
ಆದಿವಾಸಿ ಗಿರಿಜನ ಹಿತ ರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಮರಿಯಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಅರಣ್ಯ ಆಧಾರಿತ ಬುಡಕಟ್ಟು ಜನರ ಕ್ರೀಡಾಕೂಟ ಕೇವಲ ಆಟಕ್ಕಷ್ಟೇ ಸೀಮಿತವಾಗದೆ ಸಮುದಾಯದ ಅಸ್ಮಿತೆ ಮತ್ತು ಇತಿಹಾಸ ನೆನಪಿಸುವ ವೇದಿಕೆ ಎಂದು ಅಭಿಪ್ರಾಯಪಟ್ಟರು.ಬ್ರಿಟಿಷರ ವಿರುದ್ಧ ಮೊದಲ ಬಾರಿಗೆ ಹೋರಾಡಿದ ಕ್ರಾಂತಿಕಾರಿ ಬಿರ್ಸಾ ಮುಂಡಾ ಜೀವನ ಚರಿತ್ರೆಯನ್ನು ಕ್ರೀಡಾಕೂಟದಲ್ಲಿ ವಿತರಿಸಲಾಗುತ್ತಿದೆ. ಸಾಮಾನ್ಯವಾಗಿ ಚಾಮರಾಜನಗರ ಅಥವಾ ಮಡಿಕೇರಿಯಲ್ಲಿ ನಡೆಯುತ್ತಿದ್ದ ಇಂತಹ ಕಾರ್ಯಕ್ರಮ ಈ ಬಾರಿ ಚಿಕ್ಕಮಗಳೂರು ಜಿಲ್ಲೆಯಲ್ಲೇ ಆಯೋಜಿಸಿರುವುದು ಜಿಲ್ಲೆಯ ಬುಡಕಟ್ಟು ಜನರಿಗೆ ಸಂದ ಗೌರವ ಎಂದು ಹರ್ಷ ವ್ಯಕ್ತಪಡಿಸಿದರು.ರಾಷ್ಟ್ರೀಯ ಆದಿವಾಸಿ ಆಂದೋಲನ ಸದಸ್ಯೆ ಜ್ಯೋತಿ ವಿಠಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್, ಕ್ರೀಡಾ ಇಲಾಖೆ ಉಪನಿರ್ದೇಶಕಿ ಎಚ್.ಪಿ.ಮಂಜುಳಾ ಹುಲ್ಲಹಳ್ಳಿ, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ, ಹುಣಸೇಮಕ್ಕಿ ಲಕ್ಷ್ಮಣ್ ಪಿ.ರಾಜೇಶ್ ಮೊದಲಾದವರಿದ್ದರು.ಫೋಟೊ
ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ನಡೆದ ಬುಡಕಟ್ಟು ವರ್ಗದವರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗೆ ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಚಾಲನೆ ನೀಡಿದರು. ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಮರಿಯಪ್ಪ, ಎಚ್.ಪಿ.ಮಂಜುಳಾ ಹುಲ್ಲಹಳ್ಳಿ,ಜ್ಯೋತಿ ವಿಠಲ್, ರಮೇಶ್ ಮೊದಲಾದವರಿದ್ದರು.