ಕನ್ನಡಪ್ರಭ ವಾರ್ತೆ ಮೈಸೂರು
ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮ ಹೊಣೆಗಾರಿಕೆ ಅರಿತು ಪರಿಸರ ಸಂರಕ್ಷಣೆ ಹಾಗೂ ದೇಶದ ಸುಸ್ಥಿರ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕರೆ ನೀಡಿದರು.ನಗರದ ಸಿ.ಎಫ್.ಟಿ.ಆರ್.ಐನಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶವು ಸೂಪರ್ ಪವರ್ ರಾಷ್ಟ್ರವಾಗಲು, ಆರ್ಥಿಕತೆಯಲ್ಲಿ ಮುಂದುವರೆಯಲು ಪರಿಸರದ ಸಂರಕ್ಷಣೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಪರಿಸರ ಉತ್ತಮವಾಗಿದ್ದರೆ ದೇಶ- ನಾಡು ಕೂಡ ಉತ್ತಮವಾಗಿ ಇರುತ್ತದೆ ಎಂದರು.
ಮೈಸೂರು ನಗರವು ಹಿಂದೆ ಹಲವು ಸಲ ಸ್ವಚ್ಛನಗರಿ ಕಿರೀಟಿ ಮುಡಿಗೇರಿಸಿಕೊಂಡಿತ್ತು. ಈಗ ಕೆಲವು ವರ್ಷಗಳಿಂದ ಅದು ಕೈ ತಪ್ಪಿ ಹೋಗುತ್ತಿದೆ. ಮತ್ತೆ ಮೈಸೂರಿಗೆ ಪ್ರಶಸ್ತಿ ಬರಲು ಎಲ್ಲರ ಸಹಕಾರ ಅಗತ್ಯವಾಗಿದೆ. ಸ್ವಚ್ಛ ನಗರಿ ಪ್ರಶಸ್ತಿ ಬರಲು ಹಲವಾರು ಮಾನದಂಡಗಳು ಇವೆ. ಮೈಸೂರಿನಲ್ಲಿ ಸ್ವಚ್ಛತೆಗೆ ಹಿಂದಿನಿಂದಲೂ ಆದ್ಯತೆ ನೀಡಲಾಗಿದೆ. ಆದರೆ, ಈಗ ಕಾಮಗಾರಿಗಳು ಹೆಚ್ಚಾಗಿ ಅವುಗಳ ತ್ಯಾಜ್ಯ ಸಾಗಣೆ ದುಸ್ತರವಾಗಿದೆ ಎಂದರು.ಮೈಸೂರು ಸುತ್ತಮುತ್ತ ಬಡಾವಣೆಗಳು ಬೆಳೆದಿವೆ. ಅವುಗಳ ಪ್ರಮಾಣಕ್ಕೆ ಅನುಗುಣವಾಗಿ ಕಸ ಸಂಗ್ರಹಣೆ, ವಿಲೇವಾರಿ ಹಾಗೂ ತ್ಯಾಜ್ಯ ಸಂಸ್ಕರಣೆ ಮಾಡಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಇವುಗಳನ್ನು ಬಲವರ್ಧನೆಗೊಳಿಸಬೇಕಾದ ಅವಶ್ಯಕತೆ ಇದೆ ಎಂದರು.
ಸಿ.ಎಫ್.ಟಿ.ಆರ್.ಐ ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಅಧ್ಯಕ್ಷತೆ ವಹಿಸಿದ್ದರು.ವಸ್ತು ಪ್ರದರ್ಶನ ಉದ್ಘಾಟನೆ:
ಇದೇ ವೇಳೆ ಇಕೋ ಫ್ಯಾಕ್ಟರಿ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಲಾಗಿರುವ ವಸ್ತುಪ್ರದರ್ಶನವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿ, ವೀಕ್ಷಿಸಿದರು.ಈ ಪ್ರದರ್ಶನದಲ್ಲಿ ತ್ಯಾಜ್ಯವನ್ನು ಮರು ಬಳಕೆ ಮಾಡಿಕೊಂಡು ತಯಾರು ಮಾಡಿರುವ ವಸ್ತುಗಳು ಸೇರಿದಂತೆ ವೈವಿಧ್ಯಮಯ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಈ ಪ್ರದರ್ಶನವನ್ನು ಜೂ.8 ರವರೆಗೆ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಶಾಲಾ- ಕಾಲೇಜು ವಿದ್ಯಾರ್ಥಿಗಳು ವೀಕ್ಷಣೆ ಮಾಡಬಹುದು. ಜೂ.7 ಮತ್ತು 8 ರಂದು ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.
ಅಮೃತ ಉದ್ಯಾನಕ್ಕೆ ಚಾಲನೆ:ಸಿ.ಎಫ್.ಟಿ.ಆರ್.ಐ ಸ್ಥಾಪನೆಯಾಗಿ 75 ವರ್ಷಗಳು ಆದ ಹಿನ್ನೆಲೆಯಲ್ಲಿ ವಿಶ್ವ ಪರಿಸರ ದಿನದಂದು ಅಮೃತ ವನ ನಿರ್ಮಾಣಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು. 75 ತರಹದ ಗಿಡಗಳನ್ನು ನೆಡುವ ಮೂಲಕ ಅಮೃತವನವನ್ನು ನಿರ್ಮಿಸಲಾಗುತ್ತಿದೆ.