- ಜೇಸಿಯಿಂದ ಜೀವನ್ ಜ್ಯೋತಿ ಪ್ರೌಢ ಶಾಲೆಯಲ್ಲಿ ಪ್ರಥಮ ಚಿಕಿತ್ಸೆ ಅರಿವು, ಅಗ್ನಿ ಅವಘಡದ ನಿಯಂತ್ರಣ ಕಾರ್ಯಕ್ರಮ
ಯಾವುದೇ ಅವಘಡ ಸಂಭವಿಸಿದಾಗ ಪ್ರಥಮ ಚಿಕಿತ್ಸೆ ಬಹಳ ಮುಖ್ಯ. ಪ್ರಥಮ ಚಿಕಿತ್ಸೆ ಬಗ್ಗೆ ಪ್ರತಿಯೊಬ್ಬರೂ ತಿಳಿದು ಕೊಂಡಿರ ಬೇಕು ಎಂದು ಜೀವನ್ ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢ ಶಾಲೆಆಡಳಿತ ಮಂಡಳಿ ಉಪಾಧ್ಯಕ್ಷ ರೆ.ಫಾ. ಬೆನ್ನಿ ಮ್ಯಾಥ್ಯೂ ತಿಳಿಸಿದರು.
ಶುಕ್ರವಾರ ಪಟ್ಟಣದ ಜೀವನ್ ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢ ಶಾಲೆಯಲ್ಲಿ ಜೇಸಿ ಸಂಸ್ಥೆ, ಆರೋಗ್ಯ ಇಲಾಖೆ ಹಾಗೂ ಅಗ್ನಿ ಶ್ಯಾಮಕ ದಳದ ಸಂಯುಕ್ತ ಆಶ್ರಯದಲ್ಲಿ ಜೇಸಿ ಸಪ್ತಾಹದ 5 ನೇ ದಿನದ ಕಾರ್ಯಕ್ರಮದಲ್ಲಿ ಪ್ರಥಮ ಚಿಕಿತ್ಸೆ ಅರಿವು ಹಾಗೂ ಅಗ್ನಿ ಅವಘಡಗಳ ನಿಯಂತ್ರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅತಿಥಿಯಾಗಿದ್ದ ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ವಿನಯ್ ಮಾತನಾಡಿ, ಯಾವುದೇ ಅವಘಡ ಸಂಭವಿಸಿದಾಗ ಹತ್ತಿರ ಇರುವುವರು ತಕ್ಷಣ ಸ್ಪಂದಿಸಿ ಚಿಕಿತ್ಸೆ ನೀಡುವುದೇ ಪ್ರಥಮ ಚಿಕಿತ್ಸೆ ಎನ್ನಲಾಗುತ್ತದೆ. ನಾಯಿ ಅಥವಾ ಯಾವುದೇ ಪ್ರಾಣಿ ಕಚ್ಚಿದಾಗ ಹರಿಯುವ ನೀರಿನಲ್ಲಿ ತೊಳೆದು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆ ತರಬೇಕು. ಅಪಘಾತ ಸಂಭವಿಸಿ ಗಾಯಗಳಾದ, ಮೂಳೆ ಮುರಿದಾಗ, ಹಾವು ಕಚ್ಚಿದಾಗ, ವಿದ್ಯುತ್ ಅವಘಡ ಸಂಭವಿಸಿದಾಗ ಅನುಸರಿಸಬೇಕಾದ ಪ್ರಥಮ ಚಿಕಿತ್ಸೆ ಬಗ್ಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ ಜೇಸಿ ಸಂಸ್ಥೆಯಿಂದ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿ ಅಗ್ನಿ ಶ್ಯಾಮಕ ದಳದ ಮುಖ್ಯಸ್ಥ ಎಂ.ಕೆ.ರಾಘವೇಂದ್ರ, ಮುತ್ತಿನಕೊಪ್ಪ ಪ್ರಾಥಮಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿನಯ್ ಅವರನ್ನು ಸನ್ಮಾನಿಸಲಾಯಿತು. ಜೀವನ್ ಜ್ಯೋತಿ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಟಿ.ಎಲ್ದೋ ಅವರನ್ನು ಗೌರವಿಸಲಾಯಿತು.