ಕೋಮು ಭಾವನೆ ಕೆರಳಿಸುವ ಸಂದೇಶ, ಕ್ರಮಕ್ಕೆ ಮಾಜಿ ಶಾಸಕಿ ರೂಪಾಲಿ ಆಗ್ರಹ

KannadaprabhaNewsNetwork | Published : Jan 23, 2024 1:48 AM

ಸಾರಾಂಶ

ಕೋಮು ಭಾವನೆ ಕೆರಳಿಸುವ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಅಪ್ರಾಪ್ತ ಬಾಲಕನ್ನು ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಿ ಕಳಿಸಲಾಗಿದೆ. ಇನ್ಟಾಗ್ರಾಮ್‌ನಲ್ಲಿ ಬಾಬ್ರಿ ಮಸೀದಿ ಫೋಟೋ ಹಾಕಿ ಉದ್ರೇಕಕಾರಿ ಸಂದೇಶವನ್ನು ಅಪ್ರಾಪ್ತ ಬಾಲಕ ಹಾಕಿದ್ದನು.

ಕಾರವಾರ:

ಕೋಮು ಭಾವನೆ ಕೆರಳಿಸುವ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಅಪ್ರಾಪ್ತ ಬಾಲಕನ್ನು ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಿ ಕಳಿಸಲಾಗಿದೆ. ಇನ್ಟಾಗ್ರಾಮ್‌ನಲ್ಲಿ ಬಾಬ್ರಿ ಮಸೀದಿ ಫೋಟೋ ಹಾಕಿ ಉದ್ರೇಕಕಾರಿ ಸಂದೇಶವನ್ನು ಅಪ್ರಾಪ್ತ ಬಾಲಕ ಹಾಕಿದ್ದನು. ಇದರಿಂದ ಕೋಪಗೊಂಡ ಜಮಾಯಿಸಿದ ಹಿಂದೂ ಸಮುದಾಯದವರು ಮುಸ್ಲಿಂ ಯುವಕನ ವಿರುದ್ಧ ಆಕ್ರೋಶ ಹೊರಹಾಕಿದರು. ಹೀಗಾಗಿ ತಾಲೂಕಿನ ಚಿತ್ತಾಕುಲ ಪೊಲೀಸ್ ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಿ ಬಿಡಲಾಗಿದೆ. ವಿರೋಧ ವ್ಯಕ್ತವಾದ ಬಳಿಕ, ಪೊಲೀಸರು ಎಚ್ಚರಿಕೆ ನೀಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ತಪ್ಪೊಪ್ಪಿಗೆ ಸಂದೇಶವನ್ನು ಅಪ್ರಾಪ್ತ ಯುವಕ ಹಾಕಿದ್ದಾನೆ. ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಾಗಿದೆ.ಕಾನೂನು ಕ್ರಮ ಕೈಗೊಳ್ಳಿ:ಹಿಂದೂ ದೇವರ ಅವಹೇಳನ, ಕೋಮು ಪ್ರಚೋದಿತ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಘಟನೆಯನ್ನು ಮಾಜಿ ಶಾಸಕಿ ರೂಪಾಲಿ ನಾಯ್ಕ ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಾಮರಸ್ಯದಿಂದ ಇರುವ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿ ಕದಡುವ ಇಂತಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಚಿತ್ತಾಕುಲ ಠಾಣೆಯ ಪೊಲೀಸರು ಕಾನೂನು ಕ್ರಮಕೈಗೊಳ್ಳಬೇಕು. ಅಯೋಧ್ಯೆಯಲ್ಲೂ ಕೂಡ ಶ್ರೀರಾಮ ಮಂದಿರ ಲೋಕಾರ್ಪಣೆಗೆ ಎಲ್ಲ ಧರ್ಮೀಯರು ಸಹಕಾರ ಕೊಟ್ಟಿದ್ದಾರೆ. ಹಾಗಿರುವಾಗ ಇಲ್ಲಿ ಯಾಕೆ ಹೀಗಾಗುತ್ತಿದೆ ಎಂಬ ಬಗ್ಗೆ ತನಿಖೆ ಆಗಬೇಕು. ಇಂತಹ ಹೇಳಿಕೆಗಳು ಇನ್ನು ಮುಂದೆ ಯಾವುದೇ ಕಾರಣಕ್ಕೂ ಬರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿವೆ. ಯಾವುದೇ ಕಾರಣಕ್ಕೂ ಇವುಗಳನ್ನು ಸಹಿಸಲು ಸಾಧ್ಯವಿಲ್ಲ. ಇನ್ನು ಮುಂದೆ ಈ ರೀತಿ ಆಗದಂತೆ ಜಿಲ್ಲಾ ಪೊಲೀಸ್ ವರಿಷ್ಠರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ ಎಂದಿದ್ದಾರೆ.

Share this article