ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಜಮೀನು ದಾಖಲೆ ನೀಡದಕ್ಕೆ ಮಾಜಿ ಯೋಧನ ಪತ್ನಿ ಸಾವು

KannadaprabhaNewsNetwork | Updated : Jun 01 2025, 08:40 AM IST

ಕಳೆದ 40 ವರ್ಷದಿಂದ ತನ್ನ ಪತಿಗೆ ಸರ್ಕಾರ ಮಂಜೂರು ಮಾಡಿದ್ದ ಜಮೀನಿಗಾಗಿ ಹೋರಾಟ ಮಾಡಿ ಕೊನೆಗೆ ಶನಿವಾರ ಮಾಜಿ ಯೋಧನ ಪತ್ನಿ ಮೃತಪಟ್ಟ ಹಿನ್ನೆಲೆ ಮೃತಳ ಸಂಬಂಧಿಕರು ಶವವನ್ನು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬಂದು ಪ್ರತಿಭಟನೆ ಮಾಡಲು ಮುಂದಾದ ಘಟನೆ ನಡೆದಿದೆ.

  ಕೋಲಾರ  : ಕಳೆದ 40 ವರ್ಷದಿಂದ ತನ್ನ ಪತಿಗೆ ಸರ್ಕಾರ ಮಂಜೂರು ಮಾಡಿದ್ದ ಜಮೀನಿಗಾಗಿ ಹೋರಾಟ ಮಾಡಿ ಕೊನೆಗೆ ಶನಿವಾರ ಮಾಜಿ ಯೋಧನ ಪತ್ನಿ ಮೃತಪಟ್ಟ ಹಿನ್ನೆಲೆ ಮೃತಳ ಸಂಬಂಧಿಕರು ಶವವನ್ನು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬಂದು ಪ್ರತಿಭಟನೆ ಮಾಡಲು ಮುಂದಾದ ಘಟನೆ ನಡೆದಿದೆ.ಕೆಜಿಎಫ್ ತಾಲೂಕಿನ ಪಾರಂಡಹಳ್ಳಿಯ ಮಾಜಿ ಯೋಧ ಕೆಂಚಪ್ಪ ಸೋಮಣ್ಣರ ಪತ್ನಿ ಶಾಂತಮ್ಮ ಮೃತ ದುರ್ದೈವಿ. ಘಟನಾ ಸ್ಥಳಕ್ಕೆ ಪೊಲೀಸರು ಮಧ್ಯ ಪ್ರವೇಶ ಮಾಡಿ ನ್ಯಾಯ ಕೊಡಿಸುವ ಭರವಸೆ ನೀಡಿದರು. ಅಪರ ಜಿಲ್ಲಾಧಿಕಾರಿ ಮಂಗಳ ಸೋಮವಾರವೇ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನ ನೀಡುವ ಭರವಸೆ ಬೆನ್ನಲ್ಲೆ ಮೃತ ಯೋಧನ ಪತ್ನಿಯ ಅಂತ್ಯ ಸಂಸ್ಕಾರಕ್ಕೆ ಮುಂದಾದರು.

ಮಾಜಿ ಯೋಧ ಸೋಮಣ್ಣ ಭಾರತ ಪಾಕಿಸ್ತಾನ ಯುದ್ದದಲ್ಲಿ ಪಾಲ್ಗೊಂಡಿದ್ದ, ಇವರು ಯುದ್ದದಲ್ಲಿ ಮೃತಪಟ್ಟ ನಂತರ ಕಳೆದ ಹಲವು ವರ್ಷದಿಂದ ತಮ್ಮ ಪಾಲಿನ ಪರಿಹಾರದ ಭೂಮಿಗೆ ಶಾಂತಮ್ಮ ಪ್ರಯತ್ನಿಸುತ್ತಿದ್ದರು. ಆದರೆ ಸರ್ಕಾರದಿಂದ ಇದುವರೆಗೂ ದಾಖಲೆ ನೀಡಿರಲಿಲ್ಲ, ಐದು ಎಕರೆ ಭೂಮಿಯನ್ನು ಸರ್ವೇ ಮಾಡಿ ದಾಖಲೆ ನೀಡುವಂತೆ ಹಲವು ದಿನಗಳಿಂದ ಶಾಂತಮ್ಮ ಮನವಿ ಮಾಡಿಕೊಂಡಿದರೂ ಪ್ರಯೋಜನವಾಗಿರಲಿಲ್ಲ. 40  ವರ್ಷದಿಂದ ಕಚೇರಿಗಳಿಗೆ ಓಡಾಡಿ ಸುತ್ತಾಡಿ ಅನಾರೋಗ್ಯ ಪೀಡತರಾದ ಶಾಂತಮ್ಮ ಕೊನೆಯುಸಿರೆಳೆದರು. ಇದರಿಂದ ಆಕ್ರೋಶಗೊಂಡ ಸಂಬಂಧಿಕರು ಶವವನ್ನು ತಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲು ಮುಂದಾದರು.

ಕಳೆದ ನಲವತ್ತು ವರ್ಷದಿಂದ ತಮ್ಮ ಭೂಮಿಯ ದಾಖಲೆಗಳಿಗೆ ಹೋರಾಟ ಮಾಡಿದರೂ ಅಧಿಕಾರಿಗಳು ದಾಖಲೆ ನೀಡಿಲ್ಲವೆಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಮನಗೊಂಡ ಕೋಲಾರ ಗ್ರಾಮಾಂತರ ಪೊಲೀಸರು ಅಪರ ಜಿಲ್ಲಾಧಿಕಾರಿ ಮಂಗಳಾ ಅವರ ಬಳಿ ಕರೆಯಿಸಿ ಶಾಂತಮ್ಮ ಸಂಬಂಧಿಕರನ್ನು ಸಮಾಧಾನ ಪಡಿಸಿ ಕೂಡಲೇ ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರಲ್ಲದೆ ಯೋಧನ ಜಮೀನು ನೀಡುವ ಭರವಸೆ ಬಳಿಕ ಸಂಬಂಧಿಕರು ಶಾಂತಮ್ಮ ಅಂತ್ಯ ಸಂಸ್ಕಾರ ಮಾಡಲು ಮುಂದಾದರು.

Read more Articles on