ಬಂಟರ ಭವನ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ರಾಜೇಗೌಡ
ಕಾಂಗ್ರೆಸ್ ಪಕ್ಷಕ್ಕೆ ಮಹಾನ್ ಶಕ್ತಿಯಾಗಿದ್ದ ಕುದುರೆಗುಂಡಿ ಆರ್ಡಕ್ ಎಸ್ಟೇಟ್ ಮಾಲೀಕ ದಿ.ವಿಜಯ ಅಜಿಲರಿಗೆ ಕೊಪ್ಪದಲ್ಲಿ ಬಂಟರ ಭವನ ವಾಗಬೇಕೆಂಬ ಕನಸಿತ್ತು. ಅದಕ್ಕಾಗಿ ತುಂಬಾ ಶ್ರಮಿಸಿದ್ದರು. ಅವರ ಪತ್ನಿ ಗೀತಾ ವಿಜಯ ಅಜಿಲ ಮತ್ತು ಬಂಟರ ಸಮುದಾಯ ಸುಸಜ್ಜಿತವಾದ ಭವನ ನಿರ್ಮಿಸುವ ಮೂಲಕ ಅವರ ಕನಸನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾಗಿದ್ದೀರಿ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಬಂಟರ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಬಂಟರ ಭವನಕ್ಕೆ ಇಲ್ಲಿರುವ ಉದ್ಯಮಿಗಳು ತಮ್ಮ ಸ್ವಂತ ದುಡಿಮೆ ಹಣದ ಒಂದು ಭಾಗವನ್ನು ದಾನವಾಗಿ ನೀಡಿದ್ದಾರೆ. ನಾನು ಕೂಡ ಸರ್ಕಾರದಿಂದ ೫೦ ಲಕ್ಷ ಅನುದಾನ ಕೊಡಿಸಿದ್ದೇನೆ. ಅದು ನನ್ನ ಸ್ವಂತ ಹಣ ಅಲ್ಲ. ಎಲ್ಲರ ತೆರಿಗೆ ಪಾಲು ಅದರಲ್ಲಿದೆ ಎಂದರು.ಮುಂದಿನ ದಿನಗಳಲ್ಲಿ ಇದರ ನಿರ್ವಹಣೆ ತುಂಬಾ ಕಷ್ಟಕರವಾಗಲಿದೆ. ಎಲ್ಲಾ ಸಮುದಾಯದವರ ಶುಭ ಕಾರ್ಯಗಳಿಗೂ ಈ ಭವನ ದೊರೆಯುವಂತಾಗಲಿ. ಕೊಪ್ಪದ ಬಂಟರ ಭವನ ಅನನ್ಯ ವಿಜಯ ಅಜಿಲರ ಅವಸ್ಮರಣೀಯ ಗುರುತಾಗಿದೆ. ಅವರ ಆಶೀರ್ವಾದ ನಾನು ಶಾಸಕನಾಗುವಲ್ಲಿಯೂ ಇದೆ ಎಂದು ಸ್ಮರಿಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಬಂಟರ ಸಂಘದ ಮಹಾಪೋಷಕ ಸುಧಾಕರ್ ಎಸ್.ಶೆಟ್ಟಿ ಮಾತನಾಡಿ ಈ ದಿನ ವೇದಿಕೆಯಲ್ಲಿ ದಾನಿಗಳನ್ನು ಮಾತ್ರ ಸನ್ಮಾನಿಸಿದ್ದೇವೆ. ನಮ್ಮ ಇಡೀ ತಂಡವನ್ನು ಸನ್ಮಾನಿಸಿ ಅವರ ಶ್ರಮವನ್ನು ಗುರುತಿಸುವ ಕೆಲಸವಾಗಬೇಕಿದೆ. ಮುಂದಿನ ೨ ತಿಂಗಳಲ್ಲಿ ಇನ್ನೊಂದು ಕಾರ್ಯಕ್ರಮ ರೂಪಿಸಿ ಅವರನ್ನು ಗೌರವಿಸುವ ಕೆಲಸ ಮಾಡುತ್ತೇವೆ ಎಂದರು. ಬೆಂಗಳೂರಿನ ಎಂ.ಆರ್.ಜಿ. ಕಂಪನಿ ಆಡಳಿತ ನಿರ್ದೇಶಕ ಡಾ. ಕೆ.ಪ್ರಕಾಶ್ ಶೆಟ್ಟಿ ಬಂಟರ ಭವನ ಉದ್ಘಾಟಿಸಿದರು. ಕಿಶೋರ್ ಕುಮಾರ್ ಹೆಗ್ಡೆ ಭೋಜನ ಶಾಲೆ, ಡಾ.ಮೋಹನ್ ಶೆಟ್ಟಿ ವಧು ವರರ ಕೊಠಡಿ, ಭದ್ರಾವತಿ ಸುಧಾಕರ್ ಶೆಟ್ಟಿ ಪಾಕಶಾಲೆ ಉದ್ಘಾಟಿಸಿದರು. ಅಯೋಧ್ಯೆ ರಾಮಮಂದಿರದ ಬೆಳಕಿನ ವಿನ್ಯಾಸ ಮತ್ತು ವಿದ್ಯುದ್ದೀಕರಣ ನಿರ್ವಹಿಸಿದ ರಾಜೇಶ್ ಶೆಟ್ಟಿ, ಡಾ. ಪ್ರಕಾಶ್ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ, ಕಾರ್ಯದರ್ಶಿ ಪ್ರಸನ್ನ ಶೆಟ್ಟಿ ಸೇರಿದಂತೆ ಅನೇಕ ದಾನಿಗಳನ್ನು ಸನ್ಮಾನಿಸಲಾಯಿತು.