ರಬಕವಿ-ಬನಹಟ್ಟಿ : ಕಾಂಗ್ರೆಸ್ ವಿರುದ್ಧ ಜನ್ಮಾಂತರದ ದ್ವೇಷವಿದ್ದಂತೆ ವರ್ತಿಸುತ್ತಿರುವ ಸಿಎಂ ಸಿದ್ದರಾಮಯ್ಯ, ಉತ್ತರ ಭಾರತದಲ್ಲಿ ನೆಲೆಯಿಲ್ಲದ ಪಕ್ಷಕ್ಕೆ ಕರ್ನಾಟಕದಲ್ಲಿಯೂ ಇನ್ನೆಂದೂ ಅಧಿಕಾರ ಸಿಗದಂತೆ ಬಡವರ, ಮಧ್ಯಮ ವರ್ಗದವರ ಕಿಸೆಗೆ ಕನ್ನ ಹಾಕುತ್ತ ಕೌರವರ ವಿನಾಶಕ್ಕೆ ಭಾಷ್ಯ ಬರೆದ ಶಕುನಿಯಂತೆ ವರ್ತಿಸುತ್ತಿದ್ದಾರೆಂದು ಶಾಸಕ ಸಿದ್ದು ಸವದಿ ಕಿಡಿಕಾರಿದರು.
ರಬಕವಿ-ಬನಹಟ್ಟಿ ಸಮುದಾಯ ಆರೋಗ್ಯಕೇಂದ್ರದೆದುರು ಶನಿವಾರ ಸಂಜೆ ತೇರದಾಳ ಕ್ಷೇತ್ರವ್ಯಾಪ್ತಿ ಕಾರ್ಯಕರ್ತರೊಡನೆ ಸರ್ಕಾರದ ವಿರುದ್ಧ ಮೌನ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಪಂಚಭಾಗ್ಯ ಕರುಣಿಸಿ ದಿನಕ್ಕೊಂದರಂತೆ ಬೆಲೆ ಏರಿಕೆ ಸುಲಿಗೆ ಮಾಡುತ್ತಾ ರಾಜ್ಯದ ಜನತೆ ಸಂಯಮ ಕೆಣಕುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದ ಕಡಿಮೆ ಬೆಲೆ, ಗುಣಮಟ್ಟದ ಔಷಧಿ ನೀಡುತ್ತಿದ್ದ ಜನೌಷಧಿ ಕೇಂದ್ರಗಳನ್ನು ಬಂದ್ ಮಾಡುವ ಮೂಲಕ ಮೆಡಿಕಲ್ ಮಾಫಿಯಾ ಪ್ರಭಾವಕ್ಕೀಡಾಗಿ ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಬಡವರಿಗೆ ಆಹಾರ ನೀಡುವ ಇಂದಿರಾ ಕ್ಯಾಂಟೀನ್ಗಳು ಬಂದ್ ಆಗಿವೆ. ಕೇವಲ ಕಾಂಗ್ರೆಸ್ ಪ್ರಚಾರದ ಪರಿಕರಗಳಾಗಿವೆ. ಅತಿವೃಷ್ಠಿಯಿಂದ ಬಡವರು ಮನೆ ಕಳೆದುಕೊಂಡಿದ್ದು, ರೈತರ ಬೆಳೆ ಹಾನಿಯಾಗಿದ್ದು ಪರಿಹಾರ ನೀಡಿಕೆಯಾಗಿಲ್ಲ.
ಪೌರ ಕಾರ್ಮಿಕರಿಗೆ ಸರ್ಕಾರದಿಂದ ವೇತನ ಪಾವತಿಯಾಗುತ್ತಿದ್ದನ್ನು ತಡೆದು ಸ್ಥಳೀಯ ಸಂಸ್ಥೆಗಳೇ ಭರಿಸುವ ಹುಚ್ಚು ಆದೇಶದಿಂದ ಸ್ಥಳೀಯ ಆಡಳಿತೆಯ ಆರ್ಥಿಕತೆ ಹದಗೆಡಿಸಿ ಅಭಿವೃದ್ಧಿ ಕೆಲಸಗಳಿಗೆ ನಯಾಪೈಸೆ ಇಲ್ಲದಂತೆ ಮಾಡಲಾಗಿದೆ. ರಾಜ್ಯದಲ್ಲಿ ರಾಮರಾಜ್ಯ ಮಾಡುವ ಭರವಸೆ ನೀಡಿದ್ದ ಕಾಂಗ್ರೆಸ್ ರಾವಣರಾಜ್ಯ ಮಾಡಿದ್ದು, ಕಾನೂನು ಸುವ್ಯವಸ್ಥೆ ಮಲಗಿಸಿದೆ. ಜನೌಷಧಿ ಕೇಂದ್ರಗಳಲ್ಲಿನ ಪ್ರಧಾನಿ ಮೋದಿ ಭಾವಚಿತ್ರ ತೆಗೆದು ನಿಮ್ಮ ಭಾವಚಿತ್ರ ಅಳವಡಿಸಿಯಾದರೂ ಬಡವರಿಗೆ ಸುಲಭ ದರದ, ಗುಣಮಟ್ಟದ ಔಷಧಿಗಳನ್ನು ನೀಡಲು ಮರು ಆದೇಶ ಹೊರಡಿಸಬೇಕೆಂದು ಸವದಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಗರಾಧ್ಯಕ್ಷೆ ವಿದ್ಯಾ ದಬಾಡಿ, ಶ್ರೀಶೈಲ ಬೀಳಗಿ, ಶಿವಾನಂದ ಗಾಯಕವಾಡ, ಧರೆಪ್ಪ ಉಳ್ಳಾಗಡ್ಡಿ, ಸಂಜಯ ತೆಗ್ಗಿ, ಭುಜಬಲಿ ವೆಂಕಟಾಪುರ, ಪ್ರಭು ಪಾಲಭಾಂವಿ, ಸಚಿನ್ ಕೊಡತೆ, ಯಲ್ಲಪ್ಪ ಕಟಗಿ, ಶ್ರೀಶೈಲ ಯಾದವಾಡ, ಶಿವಾನಂದ ಬುದ್ನಿ, ಮಾರುತಿ ಗಾಡಿವಡ್ಡರ, ಮಹಾವೀರ ಕೊಕಟನೂರ, ಯುನೂಸ್ ಚೌಗಲಾ, ಪ್ರಭಾಕರ ಮೊಳೇದ, ಗೌರಿ ಮಿಳ್ಳಿ, ದುರ್ಗವ್ವ ಹರಿಜನ, ಮಹಾನಂದಾ ಹೊರಟ್ಟಿ, ವೈಷ್ಣವಿ ಬಾಗೇವಾಡಿ, ಭಾರತಿ ಸಾಳುಂಕೆ, ಸವಿತಾ ಹೊಸೂರ, ಪಾಂಡುರಂಗ ಸಾಲ್ಗುಡೆ, ನಿಂಗಪ್ಪ ನಾಯಕ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.