- ಬಿಜೆಪಿ ಪಕ್ಷದಿಂದ ಸೀತೂರಿನ ಸಾವಯವ ರೈತರ ಜಮೀನಿನಲ್ಲಿ ಸಾವಯವ ಕೃಷಿ ಪ್ರಾತ್ಯಕ್ಷಿಕೆ
ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿ ಹಾಳಾಗುತ್ತಿದೆ ರೈತರು ಸಾವಯವ ಕೃಷಿ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಚೈತ್ರಶ್ರೀ ಸಲಹೆ ನೀಡಿದರು.
ಗುರುವಾರ ತಾಲೂಕು ಬಿಜೆಪಿ ಮಂಡಲದಿಂದ ಸೀತೂರು ಸಾವಯವ ಕೃಷಿಕ ಮದ್ವರಾಜ್ ಅವರ ಕೃಷಿ ಭೂಮಿಯಲ್ಲಿ ಸಾವಯವ ಕೃಷಿ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ರೈತರು ಸಾಂಪ್ರಾದಾಯಿಕ ಬೆಳೆಗಳಾದ ಅಡಕೆ, ಭತ್ತದ ಜೊತೆಗೆ ಮಿಶ್ರ ಬೆಳೆಯಬೇಕು. ಮೊದಲು ರೈತರು ಮಣ್ಣು ಪರೀಕ್ಷೆ ಮಾಡಿಸಿ ಅದರ ಆಧಾರದ ಮೇಲೆ ಗೊಬ್ಬರ ನೀಡಬೇಕು. ಕೃಷಿ ಜೊತೆಗೆ ಹಸು ಸಾಕಾಣಿಕೆ, ಅಣಬೆ ಕೃಷಿ, ತರಕಾರಿ ಬೆಳೆಗಳನ್ನು ಬೆಳೆಯಿರಿ. ಜಿಲ್ಲಾ ಪಂಚಾಯಿತಿಯಲ್ಲಿ ರೈತರಿಗೆ ತರಬೇತಿ ಕಾರ್ಯಕ್ರಮವಿದ್ದು ಇದನ್ನು ಉಪಯೋಗಿಸಿಕೊಳ್ಳಿ. ಸೋಲಾರ್ ಅಳವಡಿಸಿದರೆ ಕೇಂದ್ರ ಸರ್ಕಾರದಿಂದ ಶೇ.90 ರಷ್ಟು ರಿಯಾಯಾತಿ ಸಿಗಲಿದೆ.ನಾವು ರೈತರು ಎಂಬ ಕೀಳರಿಮೆ ಬಿಡಬೇಕು ಎಂದು ಸಲಹೆ ನೀಡಿದರು.ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅರುಣಕುಮಾರ್ ಮಾತನಾಡಿ, ದೇಶದಲ್ಲಿ ಅತಿ ಹೆಚ್ಚು ದಿನ ಪ್ರಧಾನಿಯಾದ ನರೇಂದ್ರ ಮೋದಿ ಯವರ ಆಶಯದಂತೆ ಪ್ರತಿ ತಾಲೂಕಿನಲ್ಲಿ ಬಿಜೆಪಿ ಪಕ್ಷದಿಂದ ಸಾವಯವ ಕೃಷಿ ಪದ್ಧತಿ ಮಾಡುತ್ತಿರುವ ಕೃಷಿಕರ ಜಮೀನಿನಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳುತ್ತಿದ್ದೇವೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದು ಪ್ರಥಮ ಕಾರ್ಯಕ್ರಮವಾಗಿದೆ ಎಂದರು.
ಸಭೆಯಲ್ಲಿ ಸೀತೂರಿನ ಸಾವಯವ ಕೃಷಿಕ ಮದ್ವರಾಜ್, ತಾಲೂಕು ಬಿಜೆಪಿ ಉಪಾಧ್ಯಕ್ಷರಾದ ಎಚ್.ಇ.ದಿವಾಕರ, ಜಗದೀಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಕೆಸವಿ ಮಂಜುನಾಥ್, ಹೋಬಳಿ ಅಧ್ಯಕ್ಷ ಎಚ್.ಡಿ.ಲೋಕೇಶ್, ತಾಲೂಕು ರೈತ ಮೋರ್ಚದ ಪ್ರಧಾನ ಕಾರ್ಯದರ್ಶಿ ಕಣಬೈಲು ರಾಮಣ್ಣ ಮತ್ತಿತರರು ಇದ್ದರು.