- 22 ಕಿ.ಮೀ.ಮಾರ್ಗಕ್ಕೆ ಇದ್ದರೂ ಒಪ್ಪಿಗೆ ಯೋಜನೆ ಮರೀಚಿಕೆ । ಬಯಲು ಸೀಮೆಗೆ ನೀರು ಕೊಟ್ಟು ಅರ್ಧ ಮುಳುಗಿದ ಎನ್.ಆರ್.ಪುರ ಪ್ರವಾಸೋದ್ಯಮಕ್ಕೆ ರೈಲು ಅನಿವಾರ್ಯ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಹಲವು ವರ್ಷಗಳಿಂದ ಈ ಭಾಗದ ಜನರ ಒತ್ತಾಸೆಯಾಗಿದ್ದ ಶಿವಮೊಗ್ಗ- ನರಸಿಂಹರಾಜಪುರ- ಕೊಪ್ಪ- ಶೃಂಗೇರಿ ಮೂಲಕ ಮಂಗಳೂರು ತಲುಪುವ ರೈಲು ಮಾರ್ಗ ಇದೀಗ ಮರೀಚಿಕೆಯಾಗುವ ಲಕ್ಷಣದಿಂದ ಎನ್.ಆರ್.ಪುರ, ಕೊಪ್ಪ ಜನರಲ್ಲಿ ನಿರಾಸೆ ಕಾರ್ಮೋಡ ಕವಿದಿದೆ.2018ರಲ್ಲಿ ಸದಾನಂದ ಗೌಡರು ರೈಲ್ವೆ ಮಂತ್ರಿಯಾಗಿದ್ದಾಗ ಶಿವಮೊಗ್ಗ- ಎನ್.ಆರ್.ಪುರ- ಕೊಪ್ಪ- ಶೃಂಗೇರಿ ಮೂಲಕ ಮಂಗಳೂರು ಮಾರ್ಗದ ರೈಲು ಸಂಚಾರದ ಬಗ್ಗೆ ಲೋಕಸಭೆಯಲ್ಲಿ ಮಾಡಿದ್ದ ಪ್ರಸ್ತಾವನೆ ಈ ಭಾಗದ ಜನರಲ್ಲಿ ಆಶಾಭಾವನೆ ಮೂಡಿಸಿತ್ತು. ಜಯಪ್ರಕಾಶ ಹೆಗಡೆ ಸಂಸದರಾಗಿದ್ದಾಗಲೂ ಇದೇ ರೈಲು ಮಾರ್ಗದ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದರು. ಈ ಮಾರ್ಗದಿಂದ ಜನ ಸಂಚಾರ ಜತೆ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದಲೂ ಉತ್ತಮ ಎಂಬುದು ಸುಳ್ಳಲ್ಲ. ಹಾಗಾಗಿ ಸಾಕಷ್ಟು ಭರವಸೆ ಮೂಡಿಸಿದ್ದ ಈ ಯೋಜನೆ ಇದೀಗ ಶಿವಮೊಗ್ಗ- ಅರಸಾಳು,ಹೊಸನಗರ- ರಿಪ್ಪಿನಪೇಟೆ, ತೀರ್ಥಹಳ್ಳಿ-ಕೋಣಂದೂರು-ಕಮ್ಮರಡಿ, ಶೃಂಗೇರಿ- ಕೆರಕಟ್ಟೆ ಮಾರ್ಗವಾಗಿ ಮಂಗಳೂರು ತಲಪುವ ಯೋಜನೆಯಾಗುವ ಮಾಹಿತಿ ತಿಳಿದು ಸ್ಥಳಿಯರಲ್ಲಿ ನಿರಾಸೆ ತಂದಿದೆ.
80 ವರ್ಷಗಳ ಹಿಂದಿತ್ತು 2 ರೈಲು
ಈ ರೈಲು ಭದ್ರಾವತಿಯಿಂದ 22 ಕಿ.ಮೀ.ದೂರದ ಜಂಕ್ಷನ್-ಕಣಗಲಸರ- ಮಾರಿದಿಬ್ಬ, ನೆಲಗದ್ದೆ-ಕೋಡಿಹಳ್ಳಿ, ಮುತ್ತಿನಕೊಪ್ಪ- ಆರಂಬಳ್ಳಿಗೆ 1970 ರವರೆಗೂ ಕಾರ್ಯನಿರ್ವಹಿಸಿತ್ತು. ನಂತರ ಸ್ಥಗಿತಗೊಂಡಿತ್ತು. ಕಾಲ ಕ್ರಮೇಣ ರೈಲು ಹಳಿಯೂ ಇಲ್ಲವಾಗಿದೆ. ಆದರೆ, ಈಗಲೂ ಪಹಣಿಯಲ್ಲಿ ಆ ರೈಲು ಮಾರ್ಗ ಇದೆ. ಅದೇ ಮಾರ್ಗದಲ್ಲಿ ಮತ್ತೆ ರೈಲು ಓಡಿಸಿ ಎಂಬುದೇ ಎನ್.ಆರ್.ಪುರ, ಕೊಪ್ಪ, ಶೃಂಗೇರಿ ಜನರ ಪ್ರಮುಖ ಆಗ್ರಹವಾಗಿದೆ.
-- ಬಾಕ್ಸ್ --
ಭದ್ರಾವತಿಯಿಂದ ನರಸಿಂಹರಾಜಪುರದ ಆರಂಬಳ್ಳಿವರೆಗಿನ 22 ಕಿ.ಮೀ. ದೂರದ ಹಳೆಯ ರೈಲು ಮಾರ್ಗಕ್ಕೆ ಅರಣ್ಯ ಇಲಾಖೆ ಒಪ್ಪಿಗೆಯೂ ಇದೆ. ಭೂ ಸ್ವಾಧೀನವೂ ಆಗಿದೆ. ಇಲ್ಲಿಂದ ಮುಂದೆ ಕೊಪ್ಪ ಮಾರ್ಗವಾಗಿ ಕೇವಲ 55 ಕಿಮೀ.ದೂರ ಕ್ರಮಿಸಿದರೆ ಶೃಂಗೇರಿ ತಲುಪಬಹುದು. ಈ ಮಾರ್ಗದಲ್ಲಿ ಹೆಚ್ಚು ಅರಣ್ಯ ನಾಶದ ಚಿಂತೆಯೂ ಇಲ್ಲ. ಎನ್.ಆರ್.ಪುರ ಸಿಂಹನ ಗದ್ದೆ ಬಸ್ತಿಮಠ, ಕೊಪ್ಪದ ಹರಿಹರಪುರ ಮಠ, ಬಂಡಿಗಡಿ ಮಠ ಈ ಮಾರ್ಗದಲ್ಲಿ ಸಿಗುವುದರಿಂದ ಈ ಮಠಗಳಿಗೆ ಪ್ರತಿ ದಿನ ಬರುವ ಸಾವಿರಾರು ಭಕ್ತರಿಗೆ ಅನುಕೂಲ. ರಸ್ತೆ ಮಾರ್ಗವನ್ನೇ ಆಶ್ರಯಿಸಿರುವ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಈ ಮಾರ್ಗ ಹೆಚ್ಚು ಉಪಯುಕ್ತ.
-- ಬಾಕ್ಸ್ --
ಜನಾಂದೋಲನ ಅಗತ್ಯಶಿವಮೊಗ್ಗದಿಂದ ಎನ್.ಆರ್.ಪುರ, ಕೊಪ್ಪ, ಶೃಂಗೇರಿ ಮಾರ್ಗವಾಗಿ ಮಂಗಳೂರಿಗೆ ತೆರಳುವ ರೈಲು ಮಾರ್ಗದ ಪ್ರಸ್ತಾವನೆ ಬದಲಾಗದಂತೆ ತಡೆಯಲು ಪ್ರಮುಖವಾಗಿ ಚಿಕ್ಕಮಗಳೂರು ಸಂಸದರು, ಶಾಸಕರು ಹಾಗೂ ಮಾಜಿ ಸಚಿವರು ಒತ್ತಡ ತಂದು ಎನ್.ಆರ್.ಪುರ, ಕೊಪ್ಪ ಮಾರ್ಗದಲ್ಲೇ ಈ ರೈಲು ಬರುವಂತೆ ಮಾಡಲು ಜನಾಂದೋಲನ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳ ಒತ್ತಡ ಹೆಚ್ಚಿ ಪ್ರಸ್ತಾವಿತ ಈ ರೇಲ್ವೆ ಮಾರ್ಗ ಕೈ ತಪ್ಪದಿರಲು ಸ್ಥಳೀಯ ಜನಪ್ರತಿ ನಿಧಿಗಳು ಎಚ್ಚೆತ್ತು ಯೋಜನೆ ಜಾರಿಗೆ ಒತ್ತಡ ತರಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
-- ಕೋಟ್ --ಶಿವಮೊಗ್ಗದಿಂದ ನರಸಿಂಹರಾಜಪುರ, ಕೊಪ್ಪ ಮಾರ್ಗದ ರೈಲಿನಿಂದ ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ. 22 ಕಿ.ಮೀ.ರೈಲು ಮಾರ್ಗವೂ ಇರುವುದರಿಂದ ಸುಲಭವಾಗಲಿದೆ.
ಎಂ.ಶ್ರೀನಿವಾಸ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷ--ಕೋಟ್ ---
ಈ ಮಾರ್ಗದ ರೈಲು ಸಂಚಾರ ಪ್ರಾರಂಭವಾದರೆ ರೈತರು ಬೆಳೆದ ಬೆಳೆಗಳ ಬೆಲೆ ಏರಿಕೆ ಸಾಧ್ಯತೆ ಇದ್ದು ಬೆಂಗಳೂರು ಹಾಗೂ ಇತರ ದೊಡ್ಡ ನಗರಗಳ ಸಂಪರ್ಕಕ್ಕೂ ರಹದಾರಿಯಾಗಲಿದೆ. ಇದೇ ಮಾರ್ಗದಲ್ಲಿ ರೈಲು ಆರಂಭಕ್ಕೆ ಒತ್ತಾಯಿಸಿ ಆಂದೋಲನ ನಡೆಯಬೇಕಿದೆ.- ಸುಧಾಕರ ಎಸ್ ಶೆಟ್ಟಿ, ಜೆಡಿಎಸ್ ರಾಷ್ಟ್ರೀಯ ವಕ್ತಾರ, ತುಮಕಾನೆ, ಕೊಪ್ಪ ತಾಲೂಕು
-- ಕೋಟ್--ಮುಂದಿನ 1 ವಾರದಲ್ಲಿ ರೇಲ್ವೆ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲರಿಗೂ ಅನುಕೂಲವಾಗುವ ರೈಲು ಸಂಚಾರ ಯೋಜನೆಗೆ ಒತ್ತಾಯಿಸುತ್ತೇನೆ.
- ಕೋಟಾ ಶ್ರೀನಿವಾಸ ಪೂಜಾರಿ, ಸಂಸದ