ಮಂಗಳೂರು: ವಿದ್ಯಾರ್ಥಿಗಳು ಇಂದು ಪಡೆಯುವ ಜ್ಞಾನ, ಉತ್ತಮ ಅಭ್ಯಾಸಗಳು ಮತ್ತು ಮೌಲ್ಯಗಳೇ ಅವರ ಭವಿಷ್ಯವನ್ನು ರೂಪಿಸುತ್ತವೆ. ಪ್ರತಿದಿನ ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ಮತ್ತು ಪರಿಶ್ರಮ ಬೆಳೆಸಿಕೊಂಡಾಗ ಅವರು ನಾಳೆ ಆತ್ಮ ವಿಶ್ವಾಸದಿಂದ ಸಮಾಜವನ್ನು ಮುನ್ನಡೆಸುವ ನಾಯಕರಾಗುತ್ತಾರೆ ಎಂದು ಎಕ್ಸ್ಪರ್ಟ್ ಶಿಕ್ಷಣ ಮತ್ತು ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಹೇಳಿದರು.
ವಿದ್ಯಾರ್ಥಿಗಳಲ್ಲಿ ಶಿಸ್ತಿನ ಕೊರತೆ ತಮ್ಮ ಜೀವನದ ಅಪೂರ್ಣತೆಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಹಾಗೂ ವೃತ್ತಿ ಜೀವನದ ಮುಂದಿನ ಸವಾಲುಗಳನ್ನು ಎದುರಿಸುವಲ್ಲಿ ಮಾನಸಿಕವಾಗಿ ಸಿದ್ದರಾಗಬೇಕು. ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಧೃಡ ಸಂಕಲ್ಪದೊಂದಿಗೆ ಮುನ್ನಡೆಯಬೇಕು. ಸಕಾರಾತ್ಮಕ ಮನೋಭಾವ, ಸ್ಪಷ್ಟವಾದ ಗುರಿ ಮತ್ತು ಪರಿಶ್ರಮದಿಂದ ವಿದ್ಯಾರ್ಥಿಗಳು ಯಶಸ್ಸಿನ ಶಿಖರ ತಲುಪಬಹುದು ಎಂದರು.
ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್.ನಾಯಕ್ ವಿದ್ಯಾರ್ಥಿಗಳಿಗೆ ಪ್ರಮಾನ ವಚನ ಬೋಧಿಸಿ, ವಿದ್ಯಾರ್ಥಿಗಳು ವಿನಯತೆ, ಪ್ರಾಮಾಣಿಕತೆ ಹಾಗೂ ಶಿಸ್ತನ್ನು ಜೀವನದ ಮೌಲ್ಯಗಳಾಗಿ ಅಳವಡಿಸಿಕೊಳ್ಳಬೇಕು. ಶಿಸ್ತಿನ ಜೀವನವೇ ಯಶಸ್ಸಿನ ದಾರಿಯನ್ನು ಬೆಳಗುತ್ತದೆ. ಮಕ್ಕಳ ನಡೆ-ನುಡಿ, ಶಿಸ್ತು ಮತ್ತು ಮೌಲ್ಯಗಳಲ್ಲಿ ಪೋಷಕರ ಆದರ್ಶ ಸ್ಪಷ್ಟವಾಗಿ ಕಾಣಿಸುತ್ತದೆ. ಉತ್ತಮ ಶಿಕ್ಷಣ ಮತ್ತು ಜೀವನಾನುಭವ ನಿರ್ಮಾಣದಲ್ಲಿ ಪೋಷಕರು, ಶಿಕ್ಷಣ ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಸಮನ್ವಯ ಹಾಗೂ ಸಹಕಾರ ಅತ್ಯಂತ ಮುಖ್ಯ. ಆಗ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ. ಕನಸು ಕಾಣುವುದು ಯಶಸ್ಸಿ ಮೊದಲ ಹೆಜ್ಜೆಯಾಗಿದ್ದು ಅದನ್ನು ನನಸಾಗಿಸಲು ದೃಢ ಸಂಕಲ್ಪ ಪ್ರತಿಯೊಬ್ಬರಲ್ಲೂ ಇರಬೇಕು ಎಂದರು.ಕಾಲೇಜಿನ ಶೈಕ್ಷಣಿಕ ಸಮಿತಿ ಸದಸ್ಯ ಬಿ.ವಿನಯ್ ಕುಮಾರ್ ಶೈಕ್ಷಣಿಕ ಯೋಜನೆ, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಹಾಗೂ ಅಧ್ಯಯನ ಕ್ರಮಗಳ ಕುರಿತು ಮಾಹಿತಿ ನೀಡಿದರು. ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ-ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್ ಎನ್. ನಾಯಕ್, ತಂತ್ರಜ್ಞಾನ ಆಧಾರಿತ ಶಿಕ್ಷಣ ವ್ಯವಸ್ಥೆ, ಡಿಜಿಟಲ್ ಕಲಿಕಾ ವಿಧಾನಗಳು ಹಾಗೂ ಆನ್ಲೈನ್ ಅಧ್ಯಯನದ ಮಹತ್ವ ವಿವರಿಸಿದರು.ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್ ಪ್ರಾಸ್ತಾವಿಕ ಮಾತನಾಡಿ, ಪದವಿಪೂರ್ವ ಹಂತ ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಮಹತ್ತರ ಘಟ್ಟವಾಗಿದ್ದು, ಈ ಸಮಯದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಕಾಲೇಜಿನ ಶೈಕ್ಷಣಿಕ ವಾತಾವರಣವನ್ನು ಕಾಪಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಸ್ತನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಹಾಗೂ ಪೋಷಕರು ಕಡ್ಡಾಯವಾಗಿ ಅನುಸರಿಸಬೇಕಾದ ಕೆಲವೊಂದು ನಿಬಂಧನೆಗಳನ್ನು ತಿಳಿಸಿದರು.ಕಾರ್ಯಕ್ರಮ ಸಂಯೋಜಕಿ, ಭತಶಾಸ್ತ್ರ ವಿಭಾಗದ ಉಪನ್ಯಾಸಕಿ ರಾಧಿಕಾ ಭಟ್ ಮತ್ತಿತರರು ಇದ್ದರು.ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಉಜ್ವಲ್ ಪ್ರದೀಪ್ ನಿರೂಪಿಸಿದರು. ಉಪನ್ಯಾಸಕ ಭರತ್ಚಂದ್ರ ಎಲ್. ವಂದಿಸಿದರು.