ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ಅವಧಿ ಮುಗಿದಿದ್ದರೂ ಅವುಗಳನ್ನು ಈ ಹಿಂದೆ ಇದ್ದ ಬಾಡಿಗೆದಾರರು ಈಗಲೂ ಇದ್ದಾರೆ. ಆದ್ದರಿಂದ ಅವಧಿ ಮುಗಿದ ಬಾಡಿಗೆದಾರರರನ್ನು ಹೊರಹಾಕಿ ಮರು ಟೆಂಡರ್ ಕರೆದು ಹೊಸ ಬಾಡಿಗೆದಾರರಿಗೆ ನೀಡಬೇಕು ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಹಾಗೂ ಜಯಕರ್ನಾಟಕ ಸಂಘಟನೆಯ ಸದಸ್ಯರು ಹೊಸ ಬಸ್ ನಿಲ್ದಾಣದ ಎದುರು ಇರುವ ಪುರಸಭೆಯ ಐಡಿಎಸ್ಎಂಟಿಯ ವಾಣಿಜ್ಯ ಮಳಿಗೆ ಎದುರು ಪ್ರತಿಭಟನೆ ನಡೆಸಿ ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಿದರು.
ಇದರಿಂದ ಹೆಚ್ಚಿನ ಬಾಡಿಗೆ ಬರುವುದರಿಂದ ಪುರಸಭೆ ಆದಾಯ ಹೆಚ್ಚಾಗುತ್ತದೆ. ಆದ್ದರಿಂದ 15 ದಿನದಲ್ಲಿ ಅವಧಿ ಮುಗಿದ ಬಾಡಿಗೆದಾರರನ್ನು ಹೊರಹಾಕಬೇಕು. ಇಲ್ಲವಾದಲ್ಲಿ ಪುರಸಭೆಯ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪುರಸಭೆ ಮುಖ್ಯಾಧಿಕಾರಿ ಮನವಿ ಸ್ವೀಕರಿಸಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಪುರಸಭೆಯ ವಾಣಿಜ್ಯ ಮಳಿಗೆಯಲ್ಲಿ ಇರುವ ಬಾಡಿಗೆದಾರರಿಗೆ ನೋಟಿಸ್ ನೀಡಿ ಅಂಗಡಿಗಳನ್ನು ತೆರವು ಮಾಡಿಸಲಾಗುತ್ತದೆ ಎಂದರು.ಈ ವೇಳೆ ಸುರೇಶ ಹಟ್ಟಿ, ಇಸ್ಮಾಯಿಲ್ ಆಡೂರ ಸೇರಿದಂತೆ ಹಲವರು ಮಾತನಾಡಿದರು. ಎಂ.ಎ. ಮುಳಗುಂದ, ಭರಮಣ್ಣ ಶೆರಸೂರಿ, ಇಲಿಯಾಸ್ ಮೀಯಾನವರ, ಮಹಾಂತೇಶ ಶೆರಸೂರಿ, ಮೈಲಾರಿ ಹಗ್ಗಣ್ಣವರ, ಇಸಾಕಬಾಷಾ ಹರಪನಹಳ್ಳಿ, ರಮೇಶ ಹಂಗನಕಟ್ಟಿ, ಮೈನು ಮೋಮಿನ್, ಹಾಲಪ್ಪ ಭಂಡಾರಿ, ನಜೀರ್ ಬಾಗಲಕೋಟಿ, ಬರಕತ್ಅಲಿ ಮುಳಗುಂದ, ದುದ್ದು ರತನಖಾನವರ, ನೂರಅಹ್ಮದ್ ಮಕಾಂದಾರ ಸೇರಿದಂತೆ ಅನೇಕರು ಇದ್ದರು. ಈ ವೇಳೆ ಪುರಸಭೆಯ ಕಂದಾಯ ಅಧಿಕಾರಿ ಪೂಜಾರ ಇದ್ದರು.