ಋತುಬಂಧವನ್ನು ಮನೋಸ್ಥೈರ್ಯದಿಂದ ಎದುರಿಸಿ

KannadaprabhaNewsNetwork |  
Published : Oct 27, 2024, 02:23 AM IST
ಪೊಟೋ: 26ಎಸ್‌ಎಂಜಿಕೆಪಿ02ಶಿವಮೊಗ್ಗ ತಾಲೂಕಿನ ನಿದಿಗೆಯಲ್ಲಿರುವ ಟಿಎಂಎಇಎಸ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶುಕ್ರವಾರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ ಋತುಬಂಧ ಕುರಿತ ಮಾಹಿತಿ ಕಾರ್ಯಾಗಾರ ನಡೆಯಿತು. | Kannada Prabha

ಸಾರಾಂಶ

ಋತುಬಂಧ (ಮೋನೋಪಾಸ್) ನೈಸರ್ಗಿಕ ಹಾಗೂ ಜೈವಿಕ ಪ್ರಕ್ರಿಯೆಯಾಗಿದ್ದು, ಸುಮಾರು 40 ವರ್ಷ ನಂತರದ ಮಹಿಳೆಯರಲ್ಲಿ ಇದು ಸಾಮಾನ್ಯ. ಋತುಬಂಧದ ಸಮಯದಲ್ಲಿ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಸಹಜ. ಮನೋಸಾಮರ್ಥ್ಯದಿಂದ ಇದನ್ನು ಎದುರಿಸಬೇಕು ಎಂದು ಟಿಎಂಎಇಎಸ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಜಿ.ಎ. ಹಿರೇಮಠ ಹೇಳಿದರು

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಋತುಬಂಧ (ಮೋನೋಪಾಸ್) ನೈಸರ್ಗಿಕ ಹಾಗೂ ಜೈವಿಕ ಪ್ರಕ್ರಿಯೆಯಾಗಿದ್ದು, ಸುಮಾರು 40 ವರ್ಷ ನಂತರದ ಮಹಿಳೆಯರಲ್ಲಿ ಇದು ಸಾಮಾನ್ಯ. ಋತುಬಂಧದ ಸಮಯದಲ್ಲಿ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಸಹಜ. ಮನೋಸಾಮರ್ಥ್ಯದಿಂದ ಇದನ್ನು ಎದುರಿಸಬೇಕು ಎಂದು ಟಿಎಂಎಇಎಸ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಜಿ.ಎ. ಹಿರೇಮಠ ಹೇಳಿದರು.ತಾಲೂಕಿನ ನಿದಿಗೆಯಲ್ಲಿರುವ ಟಿಎಂಎಇಎಸ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ ಋತುಬಂಧ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮೋನೋಪಾಸ್ ಸಂದರ್ಭದಲ್ಲಿ ಕೀಲು ನೋವು, ದೇಹದ ತೂಕ ಹೆಚ್ಚಳ, ಮಾನಸಿಕ ಕಿರಿಕಿರಿ ಸಾಮಾನ್ಯ. ಅಕಾಲಿಕ ಋತುಬಂಧವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಯುರ್ವೇದದಲ್ಲಿ ಇದಕ್ಕೆ ಉತ್ತಮ ಚಿಕಿತ್ಸೆ ಇದೆ ಎಂದು ತಿಳಿಸಿದರು.

ಆಧುನಿಕ ಜೀವನ ಪದ್ಧತಿ, ರಾಸಾಯನಿಕ ಆಹಾರ, ಕುಸಿಯುತ್ತಿರುವ ರೋಗನಿರೋಧಕ ಶಕ್ತಿ ಮತ್ತಿತರೆ ಕಾರಣಗಳಿಂದಾಗಿ ಮನುಕುಲದ ವಿವಿಧ ಖಾಯಿಲೆಗಳಿಗೆ ಸುಲಭವಾಗಿ ತುತ್ತಾಗುತ್ತಿದೆ. ಆಯುರ್ವೇದವು ಪ್ರಾಚೀನ ವೈದ್ಯಕೀಯ ಪದ್ಧತಿಯಾಗಿದ್ದು, ಅಡ್ಡ ಪರಿಣಾಮವಿಲ್ಲದ ಚಿಕಿತ್ಸೆ ಪಡೆಯಬಹುದು ಎಂದರು.

ವಿದ್ಯೆ ಅಮೂಲ್ಯವಾದ ಸಂಪತ್ತು. ಆಸ್ತಿಯಂತೆ ವಿದ್ಯೆಯನ್ನು ಭಾಗ ಮಾಡಲು ಸಾಧ್ಯವಿಲ್ಲ. ಅಲ್ಲದೆ ಕದಿಯಲೂ ಸಹ ಆಗುವುದಿಲ್ಲ. ಸಾಧನೆ ಸಾಧಕರ ಸೊತ್ತು. ವಿದ್ಯಾರ್ಥಿಗಳು ಪರಿಶ್ರಮದಿಂದ ವಿದ್ಯೆ ಕಲಿತು ಉತ್ತಮ ವೈದ್ಯರಾಗಬೇಕು ಎಂದು ಹಾರೈಸಿದರು.

ಪೋಷಕರಾದ ಹುಸೇನ್‍ಬೇಗ್ ಮಾತನಾಡಿ, ಆಡಳಿತಾಧಿಕಾರಿ ಹಿರೇಮಠ ಮತ್ತವರ ಸಿಬ್ಬಂದಿ ಶೈಕ್ಷಣಿಕ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದು, ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಪೂರಕ ವಾತಾವರಣ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಯುರ್ವೇದದ ಹಿರಿಯ ವಿದ್ಯಾರ್ಥಿಗಳು ಋತುಬಂಧ ಕುರಿತು ವಿವರಿಸಿದರು. ಉಪ ಪ್ರಾಂಶುಪಾಲ ಡಾ. ಸದಾನಂದ ಜೋಷಿ, ಡಾ. ಎಸ್.ಪಿ. ಪ್ರಶಾಂತ್, ಡಾ. ಬಿ.ಎನ್. ಸುಷ್ಮಾ, ಡಾ. ಮೈತಿಲಿ, ಡಾ. ಮಲ್ಲಿಕಾರ್ಜುನ್, ಡಾ. ಅನುಷಾ, ಸಂಸ್ಕೃತ ಅಧ್ಯಾಪಕ ರವಿ, ಡಾ. ಧಾತ್ರಿ ದತ್ತ, ಡಾ. ಅನುಷಾ, ಡಾ. ಅರ್ಪಿತಾ, ಡಾ. ಕಾಂಚನಾ ಕುಲಕರ್ಣಿ, ಡಾ. ಪ್ರಕೃತಿ ಮಂಚಾಲೆ, ಡಾ. ಅಕ್ಷಯ, ಪ್ರಥಮ ವರ್ಷದ ವಿದ್ಯಾರ್ಥಿಗಳ ಪೋಷಕರು, ಕಾಲೇಜು ಮತ್ತು ಆಸ್ಪತ್ರೆಯ ಸಿಬ್ಬಂದಿ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ