ಕಾರ್ಖಾನೆ ತ್ಯಾಜ್ಯಕ್ಕೆ ಗರ್ಭಪಾತ, ಕಿಡ್ನಿವೈಫಲ್ಯ, ಕ್ಯಾನ್ಸರ್

KannadaprabhaNewsNetwork |  
Published : Mar 14, 2026, 02:15 AM IST
13ಕೆಪಿಎಲ್21 ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮಕ್ಕೆ ಭೇಟಿ ನೀಡಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಮೂಗುಮುಚ್ಚಿಕೊಂಡು ಸುತ್ತಾಡುತ್ತಿರುವುದು. | Kannada Prabha

ಸಾರಾಂಶ

ಮಾಧ್ಯಮಗಳಲ್ಲಿ ಆಗಿರುವ ವರದಿ ಗಮನಿಸಿ ಮತ್ತು ತಮ್ಮ ಮಂಡಳಿಯಿಂದಲೂ ಅಧಿಕಾರಿಗಳನ್ನು ಕಳುಹಿಸಿ ವರದಿ ಪಡೆದುಕೊಂಡಿದ್ದ ಅವರು, ಖುದ್ದು ನೋಡಿದ ಮೇಲೆಯಂತೂ ಮನಮಿಡಿದರು

ಸೋಮರಡ್ಡಿ ಅಳವಂಡಿ ಕೊಪ್ಪಳ

ವ್ಯಥೆ 1- ಸೊಸೆಗೆ ಗರ್ಭಪಾತವಾಗಿದೆ, ಪತಿಗೆ ನಡೆಯೋಕಾಗಲ್ಲ, ನನಗೆ ದುಡಿಯೋಕಾಗಲ್ಲ.

ವ್ಯಥೆ -2 ಮಗ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದಾನೆ. ತಂದೆಯ ಆನಾರೋಗ್ಯ ನೋಡಲು ಆಗುತ್ತಿಲ್ಲ. ಇದಕ್ಕೆ ಮಾಡಿದ ₹17 ಲಕ್ಷ ಸಾಲ ತೀರಿಸಲು ಆಗುತ್ತಿಲ್ಲ.

ವ್ಯಥೆ -3 ಧೂಳಿನಿಂದ ನಮ್ಮ ಬದುಕು ಕರಿಬೂದಿಯಾಗಿದೆ. ಉಂಡರೂ ಕರಿಬೂದಿ, ಉಸಿರಾಡಿದರೂ ಕರಿಬೂದಿ. ತಾಯಿಯ ಎದೆಹಾಲು ವಿಷವಾಗಿದೆ.

ಇದು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ನರೇಂದ್ರ ಸ್ವಾಮಿ ಎದುರು ಕಾರ್ಖಾನೆಯ ತ್ಯಾಜ್ಯದ ಕಣ್ಣೀರ ಕತೆ ಹೇಳಿ, ಕಾರ್ಖಾನೆಗಳನ್ನಾದರೂ ಬಂದ್ ಮಾಡಿ, ಇಲ್ಲ ನಮಗೆ ವಿಷವನ್ನಾದರು ಕೊಡಿ ಎಂದು ಸಂತ್ರಸ್ತರು ಗೋಳಿಟ್ಟ ಪರಿ.

ಕಾರ್ಖಾನೆಯ ತ್ಯಾಜ್ಯದಿಂದ ಯಾತನೆ ಅನುಭವಿಸುತ್ತಿರುವ ಹಿರೇಬಗನಾಳ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ತಮ್ಮ ನರಕಯಾತನೆಯನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಎದುರು ಎಳೆ ಎಳೆಯಾಗಿ ಬಿಡಿಸಿಟ್ಟರು. ನಾವು ಬದುಕುತ್ತಿರುವುದು ಈಗ ಅಕ್ಷರಶಃ ನರಕ ಎನ್ನುವುದನ್ನು ಸಹ ತೋರಿಸಿಕೊಟ್ಟರು.

ಕಾರ್ಖಾನೆ ತ್ಯಾಜ್ಯದಿಂದ ನೂರೆಂಟು ಸಮಸ್ಯೆಯಾಗಿದ್ದರಿಂದ ಕಾರ್ಖಾನೆ ತೊಲಗಿಸಿ, ನಮಗೆ ಬದುಕಲು ಬಿಡಿ ಎಂದು ಆಗ್ರಹಿಸಿ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಮತ್ತು ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ಸಮಿತಿಯಿಂದ ಕಳೆದ 134 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಹಾಗೂ ಇತ್ತೀಚಿಗೆ ಹಿರೇಬಗನಾಳ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ತರಾಟೆಗೆ ತೆಗೆದುಕೊಂಡ ಬಳಿಕ ಪರಿಸ್ಥಿತಿ ಕೈ ಮೀರುವಂತಾಗಿರುವುದು ಹಾಗೂ ಗ್ರಾಮಸ್ಥರು ರೊಚ್ಚಿಗೆದ್ದಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಆಗಮಿಸಿ ಹಿರೇಬಗನಾಳ ಗ್ರಾಮ ಮತ್ತು ಇತರ ಪ್ರದೇಶದಲ್ಲಿ ಸುತ್ತಾಡಿಸಲಾಯಿತು. ಮೂಗುಮುಚ್ಚಿಕೊಂಡೇ ಓಡಾಡಿದ್ದು ಅಲ್ಲದೆ ಇಂಥ ಹೀನಾಯ ಸ್ಥಿತಿಯಲ್ಲಿ ಜನರು ಹೇಗೆ ತಾನೇ ಜೀವನ ಮಾಡಲು ಸಾಧ್ಯ ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲ, ಮಾಧ್ಯಮಗಳಲ್ಲಿ ಆಗಿರುವ ವರದಿ ಗಮನಿಸಿ ಮತ್ತು ತಮ್ಮ ಮಂಡಳಿಯಿಂದಲೂ ಅಧಿಕಾರಿಗಳನ್ನು ಕಳುಹಿಸಿ ವರದಿ ಪಡೆದುಕೊಂಡಿದ್ದ ಅವರು, ಖುದ್ದು ನೋಡಿದ ಮೇಲೆಯಂತೂ ಮನಮಿಡಿದರು.

ಹಿರೇಬಗನಾಳ ಗ್ರಾಮದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಮಾಡುವ ವೇಳೆಯಲ್ಲಿ ಗ್ರಾಮಸ್ಥರು ಹೇಳಿದ ಒಂದೊಂದು ಕಣ್ಣೀರ ಕತೆಗಳು ಕಾರ್ಖಾನೆಯ ತ್ಯಾಜ್ಯದ ನರಕ ದರ್ಶನ ತೆರೆದಿಟ್ಟವು.

ಕಿಡ್ನಿ ವೈಫಲ್ಯದಿಂದ ಮಗನನ್ನೇ ಕಳೆದುಕೊಂಡು, ಈಗ ಅನಾರೋಗ್ಯಕ್ಕೆ ತುತ್ತಾಗಿರುವ ತಂದೆಯನ್ನು ನೋಡಿಕೊಳ್ಳುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಲ್ಲದೆ ಇದಕ್ಕಾಗಿ ₹17 ಲಕ್ಷ ಸಾಲ ಮಾಡಿದ್ದು, ಅದರ ಬಡ್ಡಿ ತೀರಿಸಲು ಆಗುತ್ತಿಲ್ಲ ಎಂದು ಮಲ್ಲನಗೌಡ ಹೊಸಮನಿ ತಮ್ಮ ಕರುಣಾಜನಕ ಕತೆ ಹೇಳಿದರು.

ಗವಿಸಿದ್ದಪ್ಪ ಪುಟ್ಟಗಿ ಹೇಳುವುದೇ ಬೇರೆ, ನಮ್ಮ ತಂದೆ, ತಾಯಿಗಳನ್ನು ಇಲ್ಲಿ ಉಳಿಸಿಕೊಳ್ಳಲು ಆಗುತ್ತಿಲ್ಲ, ನಮ್ಮ ಮಕ್ಕಳು ಇಲ್ಲಿದ್ದರೆ ಆಸ್ಪತ್ರೆಯಲ್ಲಿಯೇ ಹೆಚ್ಚು ದಿನ ಇರಬೇಕಾಗುತ್ತದೆ ಎಂದು ದೂರದ ಸಂಬಂಧಿಕರ ಮನೆಯಲ್ಲಿಟ್ಟಿದ್ದೇವೆ. ಕಾರ್ಖಾನೆಯ ಕರಿಬೂದಿ ತಂದೆ ಮಕ್ಕಳನ್ನು ದೂರು ಮಾಡಿದೆ ಎಂದರು.

ಮಹೇಶ ವದಗನಾಳ ಅವರಂತೂ ನನಗೂ ಕಣ್ಣಿನ ಆಪರೇಶನ ಮಾಡಿಸಲು ಹೇಳಿದ್ದಾರೆ. ನನ್ನ ಮಗನಿಗೆ ಉಸಿರಾಟದ ಸಮಸ್ಯೆಯಾಗಿದೆ. ನನ್ನ ತಾಯಿಗೆ ಶಕ್ತಿ ಇಲ್ಲದಾಗಿದೆ. ಹೀಗಾಗಿ, ನಾವು ಬದುಕುವ ಆಸೆ ಕಳೆದುಕೊಂಡಿದ್ದು, ದಯಾಮರಣದ ಭೀಕ್ಷೆ ನೀಡಿ ಎಂದು ಅಂಗಲಾಚಿದರು.

ನಾವು ಊಟ ಮಾಡುವುದು ಕರಿಬೂದಿ, ಮೈತೊಳೆದುಕೊಳ್ಳುವ ನೀರು ಕರಿ ನೀರು, ಕುಡಿಯುವ ನೀರು ಕರಿ ನೀರು. ಹೀಗಾಗಿ, ನಮ್ಮ ಎದೆಯ ಹಾಲು ವಿಷವಾಗಿದೆ. ಕಾರ್ಖಾನೆ ಬಂದ್ ಮಾಡಿಸಿ, ಇಲ್ಲ ನಮಗೆ ವಿಷ ಕೊಟ್ಟು ಪುಣ್ಯಕಟ್ಟಿಕೊಳ್ಳಿ ಎನ್ನುತ್ತಾರೆ ರೇಣುಕಮ್ಮ ಫಲ್ಲೇದ ಅವರು.

ಹೀಗೆ, ಅಳಲು ತೋಡಿಕೊಂಡ ಅಷ್ಟೂ ಜನರ ಗೋಳು ಕಣ್ಣೀರಿನ ಕತೆಯಾಗಿದ್ದವು.

ಇದೆಲ್ಲವನ್ನು ಆಲಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಅವರು, ನನಗೆ ಅಚ್ಚರಿಯಾಗುತ್ತದೆ. ಇಷ್ಟೊಂದು ಸ್ಪಾಂಜ್ ಐರನ್ ಕಾರ್ಖಾನೆ ಒಂದೇ ಜಾಗದಲ್ಲಿ ಹಾಕಿದ್ದೇ ತಪ್ಪು. ನನಗೆ ಸಮಸ್ಯೆ ಅರಿವಾಗಿದೆ. ಖಂಡಿತವಾಗಿಯೂ ನಾನು ಇದರ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇನೆ ಎಂದರು.

ಸಮಸ್ಯೆಯ ಅರಿವು ಆಗಿದೆ. ಇಲ್ಲಿಗೆ ಬರುವುದಕ್ಕೂ ಮುಂಚೆ ನಾನು ಎಲ್ಲವನ್ನು ತಿಳಿದುಕೊಂಡಿದ್ದೇನೆ, ಅಷ್ಟೇ ಅಲ್ಲ, ಕಾರ್ಖಾನೆಗೆ ಮಂಡಳಿಯ ಅಧಿಕಾರಿ ಕಳುಹಿಸಿ, ವರದಿ ತರಿಸಿಕೊಂಡಿದ್ದೇನೆ, ಇದೆಲ್ಲವನ್ನು ನೋಡಿ ಸುಮ್ಮನೇ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ,. ನಿರ್ಧಾಕ್ಷಿಣ್ಯ ಕ್ರಮ ಗ್ಯಾರಂಟಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ತಿಳಿಸಿದ್ದಾರೆ.

ಕಾರ್ಖಾನೆ ವಾಯುಮಾಲಿನ್ಯ, ಜಲಮಾಲಿನ್ಯದಿಂದ ಹಿರೇಬಗನಾಳ ಗ್ರಾಮವೊಂದರಲ್ಲಿಯೇ 122 ಜನರಿಗೆ ಉಸಿರಾಟದ ಸಮಸ್ಯೆ. 49 ಜನರಿಗೆ ಚರ್ಮ ಕಾಯಿಲೆ, 29 ಜನರಿಗೆ ಟಿಬಿ, ಕೆಲವರಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತ್ಯ ಕ್ಷೇತ್ರದಲ್ಲಿ ಕೊಪ್ಪಳ ರಾಜ್ಯಕ್ಕೆ ಮಾದರಿ : ರಮೇಶ ಬನ್ನಿಕೊಪ್ಪ
ತೊಡೆ ತಟ್ಟಿ ಮಣ್ಣು ಮುಕ್ಕಿಸಿದ ಪೈಲ್ವಾನರು!