ಗದಗ: ಭಾರತವು ವಿಜ್ಞಾನ, ತಂತ್ರಜ್ಞಾನ ಹಾಗೂ ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಜಾಗತಿಕ ಮಟ್ಟದಲ್ಲಿ ಬೆಳೆದಿದೆ. ಆದರೆ, ಈ ಆಧುನಿಕ ಯುಗದಲ್ಲೂ ದೇಶದಲ್ಲಿ ಅಸಮಾನತೆ ಹಾಗೂ ಮೌಢ್ಯಾಚರಣೆಗಳು ಬೇರೂರಿವೆ. 21ನೇ ಶತಮಾನದಲ್ಲೂ ಮಾನವರ ನಡುವೆ ಸಮಾನತೆ ಸಾಧಿಸುವಲ್ಲಿ ವಿಫಲರಾಗಿದ್ದೇವೆ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ವಿಷಾದಿಸಿದರು.
ಪ್ರಾಚೀನ ಕಾಲದಿಂದಲೂ ಮಹಾವೀರ, ಬುದ್ಧ, ಬಸವೇಶ್ವರ ಸೇರಿದಂತೆ ಶರಣರು, ನಾರಾಯಣ ಗುರುಗಳು, ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ ಅವರಂಥ ಮಹನೀಯರು ಸಮಾನತೆ ತರಲು ಧಾರ್ಮಿಕ ಆಂದೋಲನಗಳನ್ನು ಮಾಡಿದ್ದಾರೆ. ಆದರೂ ಜಾತಿ, ಲಿಂಗ ಹಾಗೂ ವರ್ಣಗಳ ತಾರತಮ್ಯ ಉಳಿದಿರುವುದು ಖೇದಕರ ಎಂದರು.
ಕೇರಳದಲ್ಲಿ ನಾರಾಯಣ ಗುರುಗಳು ಅಸಮಾನತೆಯನ್ನು ತೊಡೆದುಹಾಕಲು ಶ್ರಮಿಸಿದ ಮಹಾನ್ ಮಾನವತಾವಾದಿ. ಅವರ ಆದರ್ಶಗಳನ್ನು ಸಾರುವ ಈ ಕೃತಿಯನ್ನು ಪ್ರತಿಯೊಬ್ಬರೂ ಓದಿ ಅನುಸರಿಸಬೇಕು ಎಂದರು.ಶರಣರು ಕಂಡ ಅನಾದಿ ಬಸವಣ್ಣ ವಿಷಯ ಕುರಿತು ಪ್ರವಚನ ನೀಡಿದ ಗಿರಿಜಕ್ಕ ಧರ್ಮರೆಡ್ಡಿ, ಬಸವಣ್ಣನವರು ಕೇವಲ ಭಕ್ತಿ ಭಂಡಾರಿಯಷ್ಟೇ ಅಲ್ಲ, ವಿನಯದ ಭಂಡಾರಿಯೂ ಆಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತ ಸೇವೆ ಸಲ್ಲಿಸಿದರು. ಜೀವನ ಯಲಬುರ್ಗಿ ಧರ್ಮಗ್ರಂಥ ಪಠಣ, ಮೇಘಾ ಮುದ್ದಿ ವಚನ ಚಿಂತನ ನಡೆಸಿಕೊಟ್ಟರು. ಕರವೀರಯ್ಯ ಕೋರಿಮಠ ಪರಿವಾರ ಹಾಗೂ ವಿನಾಯಕ ಮಾನ್ವಿ ದಾಸೋಹ ಸೇವೆ ವಹಿಸಿದ್ದರು.