ಧಾರವಾಡ:
ಶುಕ್ರವಾರ ರಾತ್ರಿ ಮಾಳಾಪುರ ಹಾಶ್ಮಿನಗರ 4ನೇ ಕ್ರಾಸ್ನಲ್ಲಿ ಇರುವ ಫೈರೋಜ್ ಮನೆಗೆ ನುಗ್ಗಿದ ನಾಲ್ವರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿ ಆಗಿದ್ದರು. ಹತ್ಯೆ ವೀಡಿಯೋ ವೈರಲ್ ಆಗಿತ್ತು. ಕೊಲೆ ಆರೋಪಿಗಳು ಯಾರೆಂಬುದು ಗೊತ್ತಿದ್ದರೂ ಪೊಲೀಸರು ಅವರನ್ನು ಬಂಧಿಸಿಲ್ಲ ಎಂದು ಮೃತನ ಬೆಂಬಲಿಗರು ಪೊಲೀಸ್ ಠಾಣೆ ಎದುರು ಮೃತದೇಹ ಇಟ್ಟು ಪ್ರತಿಭಟಿಸಲು ಮುಂದಾಗಿದ್ದರು. ಇದರಿಂದ ಕೆಲ ಹೊತ್ತು ಗೊಂದಲ ನಿರ್ಮಾಣ ಆಗಿತ್ತು.
ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ನಂತರ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗದೆ ಪೊಲೀಸ್ ಠಾಣೆಯತ್ತ ಆ್ಯಂಬುಲೆನ್ಸ್ ತಿರುಗಿಸಲಾಯಿತು. ಆಗ ಕೆಸಿ ಪಾರ್ಕ್ ಬಳಿ ವಾಹನ ತಡೆದ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಲಿಲ್ಲ. ಈ ವೇಳೆ ಪೊಲೀಸರು ಮತ್ತು ಮೃತರ ಬೆಂಬಲಿಗರ ಮಧ್ಯೆ ವಾಗ್ವಾದ ನಡೆಯಿತು. ಮಧ್ಯಪ್ರವೇಶಿಸಿದ ಹಿರಿಯ ಅಧಿಕಾರಿಗಳು, ನಾವು ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ. ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ ನಂತರ ಮೃತದೇಹವನ್ನು ಅವರ ಮನೆಗೆ ತೆಗೆದುಕೊಂಡು ಹೋಗಲಾಯಿತು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮೃತನ ಆಪ್ತ ಅಬ್ದುಲ್ ದೇಸಾಯಿ, ಆರು ತಿಂಗಳ ಹಿಂದೆಯೇ ಫೈರೋಜ್ ಹಾಗೂ ನನಗೆ ಜೀವ ಬೆದರಿಕೆ ಇದೆ ಎಂದು ಪೊಲೀಸರಿಗೆ ದೂರು ನೀಡಿದ್ದೇವೆ. ಈ ಬಗ್ಗೆ ಗೃಹ ಸಚಿವರಿಗೂ ಪತ್ರ ಬರೆಯಲಾಗಿತ್ತು. ಆದರೆ ರಕ್ಷಣೆ ನೀಡಿರಲಿಲ್ಲ. ಹೀಗಾಗಿ ಕೊಲೆ ಆಗಿದೆ. ರಾಜಕೀಯ ದ್ವೇಷ ಹಾಗೂ ಒಂದೇ ಸಮಾಜದ ಮತ್ತೊಬ್ಬ ವ್ಯಕ್ತಿ ಬೆಳೆಯಬಾರದು ಎಂದು ಈ ರೀತಿ ಕೊಲೆ ಮಾಡಲಾಗಿದೆ. ಇದರ ಹಿಂದೆ ಮುಸ್ಲಿಂ ಸಮುದಾಯದ ಹಿರಿಯ ಮುಖಂಡರೊಬ್ಬರ ಕೈವಾಡ ಇದೆ ಎಂದು ಆರೋಪಿಸಿದರು.
ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ರಕ್ಷಣೆ ಕೋರಿ ಆರು ತಿಂಗಳ ಹಿಂದೆಯೇ ದೂರು ಬಂದಿರುವ ಬಗ್ಗೆ ನಾನು ಪರಿಶೀಲಿಸುತ್ತೇನೆ. ಹತ್ಯೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವುದಾಗಿ ಹೇಳಿದರು. ಮುಂಜಾಗ್ರತೆ ಕ್ರಮವಾಗಿ ಹಾಶ್ಮಿನಗರ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.