ಕೊಪ್ಪಳ: ಜಾತ್ರೆಗಳು ಮನಸ್ಸಿನ ಅಂಧಕಾರ, ಹಾಹಾಕಾರ ತೊಳೆಯುವ ಕಾರ್ಯಕ್ರಮಗಳಾಗಿದ್ದು, ಅದಕ್ಕೆ ಸಾಕ್ಷಿಯೆ ಕಾತರಕಿ ಜಾತ್ರೆಯಾಗಿದ್ದು, ಇದು ಒಗ್ಗಟ್ಟಿನ ಸಂದೇಶ ನೀಡಿದೆ ಸದಾ ದುಡಿಮೆಯಲ್ಲಿರುವ ಇವರು ಯಾವಾಗಲೂ ಕ್ರೀಯಾಶೀಲರಾಗಿ ಕೆಲಸ ಮಾಡುತ್ತಾರೆ. ಇಲ್ಲಿಯ ಹಿರಿಯ ವ್ಯಕ್ತಿಗಳು ಬಸವಣ್ಣನ ಅನುಭಾವಿಕ ಚಿಂತನೆ ಅಳವಡಿಸಿಕೊಂಡಿದ್ದಾರೆ ಎಂದು ಹಡಗಲಿ ಡಾ. ಹಿರಿಶಾಂತವೀರ ಮಹಾಸ್ವಾಮೀಜಿ ಹೇಳಿದರು.
ಮಾಂಸ ಪಿಂಡ ಶರೀರ ಹೋಗಿ ಮಂತ್ರ ಪಿಂಡ ಶರೀರವಾಗಬೇಕಾದರೆ ಗುರುಗಳ ಸ್ಮರಣೆ ಮಾಡಬೇಕು. ಎಲ್ಲರಲ್ಲೂ ಪ್ರಸನ್ನತೆಯ ಗುಣ ಕಂಡಕೊಳ್ಳಲು ಭಕ್ತಿಯ ಭಾವ ಸಿಗುತ್ತದೆ. ಈ ದೃಷ್ಡಿಯಿಂದ ಸಾಮರಸ್ಯದ ಜಾತ್ರೆಯಾಗಬೇಕು. ಇದು ಆದರ್ಶಮಯವಾದ ಜಾತ್ರೆ. ನಾವು ಮಾಡುವ ಕಾರ್ಯ ಜನಪ್ರೀಯಗಿಂತ ಮನಪ್ರೀಯತೆಯಾಗಿರಬೇಕು. ಈ ಧಾರ್ಮಿಕ ಭಾವನೆ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಹಾಗೂ ಎಲ್ಲ ಮಕ್ಕಳಿಗೆ ಶಿಕ್ಷಣ ಹಾಗೂ ನೈತಿಕ ಮೌಲ್ಯ ನೀಡಬೇಕಾಗಿದೆ. ಈ ವೇಳೆ ವೃದ್ಧರನ್ನು ಸತ್ಕರಿಸಿರುವ ಸಾಮಾಜಿಕ ಬದುಕಿನ ಭಾವನೆ ಶ್ರೇಷ್ಟವಾದುದು. ಇದು ಮುಂದಿನ ಯುವ ಪೀಳಿಗೆ ಮಾರ್ಗದರ್ಶನವಿದ್ದಂತೆ. ಮೊದಲು ಮನೆಯ ಶಿಕ್ಷಣ ಪ್ರೀತಿಸಬೇಕು. ಇಂದು ಅವಿಭಕ್ತ ಕುಟುಂಬಗಳ ಸಂಖ್ಯೆ ಕ್ಷೀಣಿಸುತ್ತಿದೆ. ಹೀಗಾಗಿ ಕೂಡುವಿಕೆಗೆ ಪ್ರೇರಣೆ ನೀಡಬೇಕು ಎಂದರು.
ಮೈನಹಳ್ಳಿ-ಬಿಗನಹಳ್ಳಿ ಸಿದ್ದೇಶ್ವರ ಸ್ವಾಮೀಜಿಗಳು ಮಾತನಾಡಿ, ಮೂರು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ಕಾರ್ಯಕ್ರಮ ಜರುಗಿದೆ. ಪ್ರೀತಿ, ಪ್ರೇಮ ಹಾಗೂ ವೈಭವದ ಜಾತ್ರೆ ಇದಾಗಿದೆ. ಪ್ರತಿಯೊಬ್ಬರೂ ಕೃಷಿಯಾಧರಿತ ಬದುಕು ಸಾಗಿಸಬೇಕು. ಸಂಸಾರ ಹಾಗೂ ಕೃಷಿ ಕಾಯಕದಲ್ಲಿ ಯಾರೂ ಮೋಬೈಲ್ ಮೂಲಕ ಸಮಯ ನೋಡದೇ ನಿಷ್ಠೆಯ ಕಾಯಕ ಮಾಡಬೇಕು. ಇದರಿಂದ ನಿರೀಕ್ಷೆಗಿಂತ ಹೆಚ್ಚು ಫಲ ದೊರಕುತ್ತದೆ. ಕೃಷಿಯ ಜತೆಗೆ ಹೈನುಗಾರಿಕೆ ಎಂಬ ಉಪಕಸುಬು ಮಾಡಬೇಕು. ದೇಶಿಯ ತಳಿಯ ಆಕಳು ಸಾಕಾಣಿಕೆ ಮಾಡುವುದರಿಂದ ಗುಣಮಟ್ಟದ ಗೊಬ್ಬರ ಹಾಗೂ ಹೆಚ್ಚು ಆದಾಯ ಗಳಿಸಬಹುದು. ಹೀಗಾಗಿ ಮನೆಗೊಂದು ದೇಶಿ ಆಕಳು ಸಾಕಿ, ಆದರಿಂದ ಸ್ವಾವಲಂಬಿ ಜೀವನ ನಡೆಸಿ ಒಡೆದ ಮನಸ್ಸುಗಳನ್ನು ಬೆಸೆಯುವುದೇ ಜಾತ್ರೆಯ ಸಂದೇಶವಾಗಿದೆ. ಹೃದಯ ಸಿರಿವಂತಿಕೆ ಹೊಂದಿರುವ ಇಲ್ಲಿಯ ಹಿರಿಯರು ಅತ್ಯಂತ ವೈಭವದಿಂದ ಜಾತ್ರೆ ಹಮ್ಮಿಕೊಂಡಿದ್ದಾರೆ ಎಂದರು.ವಿರುಪಾಕ್ಷಗೌಡ್ರ ಪಾಟೀಲ್, ಶ್ರೀನಿವಾಸ ಜೋಶಿ, ವಿರುಪಾಕ್ಷಸ್ವಾಮಿ ಹಿರೇಮಠ ಮಾತನಾಡಿದರು. ಈ ವೇಳೆ ಯೋಧರು, ಹಿರಿಯರು, ಅಂಗವಿಕಲರನ್ನು ಸೇರಿದಂತೆ ವಿವಿಧ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ನೀವೃತ್ತ ನ್ಯಾಯಾಧೀಶ ಪಿ.ಎಸ್. ಹಿರೇಮಠ, ನಾಗರತ್ನಮ್ಮ ಹಿರೇಮಠ, ಕೊಟ್ರಯ್ಯಸ್ವಾಮಿ ಹಿರೇಮಠ, ವೀರಣ್ಣನವರ ನಂದಣ್ಣವರ, ಶಂಕರಗೌಡ ಹಿರೇಗೌಡ್ರ, ವಿರುಪಾಕ್ಷಗೌಡ ಪಾಟೀಲ್, ಶ್ರೀನಿವಾಸ ಜೋಶಿ, ವಸಂತ ಮಾದವಜೋಶಿ, ಶಿವಮ್ಮ ಬೈರಂಗಿ, ಮಲ್ಲಣ್ಣ ಗುಗ್ಗಿ, ಹನುಮಂತಪ್ಪ ಪೂಜಾರ, ವಿನಾಯಕ ಜೋಶಿ, ವಿಶ್ವನಾಥ, ಈಶಪ್ಪ ಹೊಳೆಯಪ್ಪನವರ, ವೆಂಕಣ್ಣ ಚಳ್ಳಾರಿ, ಸುರೇಶ ಹುರಕಡ್ಲಿ, ಮಲ್ಲಪ್ಪ ಮೇಗಳಮನಿ, ಹುಲಿಗೆಮ್ಮ, ಲಕ್ಷ್ಮಮ್ಮ ಇಡಿಗಲ್, ಶಾಂತಮ್ಮ, ಯಮನಮ್ಮ, ಸುರೇಶ ತಳವಾರ, ಬಸವರಾಜ ಉಳ್ಳಾಗಡ್ಡಿ ಸೇರಿದಂತೆ ಇತರರು ಇದ್ದರು.ವೆಂಕನಗೌಡ ಹಿರೇಗೌಡ್ರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮೆರವಣಿಗೆಯಲ್ಲಿ ಗ್ರಾಮದೇವತೆಯ ಭಾವಚಿತ್ರ ಇಟ್ಟುಕೊಂಡು ಗ್ರಾಮದ ಚೌಕಿ ಕಟ್ಟಿಯಿಂದ ಚಾಲನೆಗೊಂಡು ವಿವಿಧ ವಾದ್ಯಮೇಳಗಳೊಂದಿಗೆ ಅದ್ದೂರಿಯಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನದ ಆವರಣಕ್ಕೆ ತಲುಪಿತು.