ಪೂಜೆ ಹೆಸ್ರಲ್ಲಿ ವೃದ್ಧೆಗೆ40 ಲಕ್ಷದ ರು.ಚಿನ್ನ ವಂಚಿಸಿದ ನಕಲಿ ಜ್ಯೋತಿಷಿ!

KannadaprabhaNewsNetwork |  
Published : Sep 17, 2026, 03:45 AM IST
ಪಿವಿಆರ್‌ | Kannada Prabha

ಸಾರಾಂಶ

ಪೂಜೆ ನೆಪದಲ್ಲಿ ವೃದ್ಧೆ ಬಳಿ 40 ಲಕ್ಷ ರು.ಮೌಲ್ಯದ ಚಿನ್ನಾಭರಣ ಪಡೆದು ನಕಲಿ ಜ್ಯೋತಿಷಿಯೊಬ್ಬ ವಂಚಿಸಿ ಪರಾರಿ ಆಗಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪೂಜೆ ನೆಪದಲ್ಲಿ ವೃದ್ಧೆ ಬಳಿ 40 ಲಕ್ಷ ರು.ಮೌಲ್ಯದ ಚಿನ್ನಾಭರಣ ಪಡೆದು ನಕಲಿ ಜ್ಯೋತಿಷಿಯೊಬ್ಬ ವಂಚಿಸಿ ಪರಾರಿ ಆಗಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ. ಗಿರಿನಗರದ ಜಿ.ಸಿ.ಶಾಂತಮ್ಮ ಮೋಸ ಹೋಗಿದ್ದು, ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ನಕಲಿ ಜ್ಯೋತಿಷಿ ವೆಂಕಟೇಶ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಕೆಲ ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆ ಬಳಿ ಫುಟ್‌ಪಾತ್‌ನಲ್ಲಿ ಜ್ಯೋತಿಷ್ಯ ಹೇಳುವಾಗ ಶಾಂತಮ್ಮ ಅವರಿಗೆ ವೆಂಕಟೇಶ್ ಪರಿಚಯವಾಗಿದೆ. ಅನಾರೋಗ್ಯ ಹಿನ್ನೆಲೆ ಚಿಕಿತ್ಸೆಗೆ ಆಸ್ಪತ್ರೆಗೆ ಶಾಂತಮ್ಮ ಬಂದಿದ್ದರು. ಬಳಿಕ ನಿಮ್ಮ ಆರೋಗ್ಯ ಹಾಗೂ ಕೌಟುಂಬಿಕ ಕಷ್ಟಗಳಿಗೆ ತಾನು ಹೇಳಿದಂತೆ ಚೌಡೇಶ್ವರಿ ದೇವಿಯ ಪೂಜೆ ಮಾಡಿಸಿದರೆ ಪರಿಹಾರ ಸಿಗಲಿದೆ ಎಂದಿದ್ದ. ಈ ಮಾತು ನಂಬಿದ ಶಾಂತಮ್ಮ, ಮನೆಗೆ ಬಂದು ಪೂಜೆ ಮಾಡುವಂತೆ ಕೋರಿದ್ದರು. ಅಂತೆಯೇ ಮೊದಲ ದಿನ ಅವರ ಮನೆಗೆ ಹೋದ ಆರೋಪಿ, ನಿಂಬೆಹಣ್ಣು ಮಂತ್ರಿಸಿ ಕೊಟ್ಟು ಮರಳಿದ್ದ.

ಅದೇ ಹೊತ್ತಿಗೆ ಕಾಕಾತಾಳಿಯ ಎನ್ನುವಂತೆ ಶಾಂತಮ್ಮ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಇದರಿಂದ ಮತ್ತಷ್ಟು ವಿಶ್ವಾಸಗೊಂಡ ಅವರು, ಮತ್ತೆ ಜ್ಯೋತಿಷಿಯನ್ನು ಸಂಪರ್ಕಿಸಿದ್ದರು. ಆಗ ನಿಮ್ಮ ಮನೆಯಲ್ಲಿ ಚೌಡೇಶ್ವರಿ ದೇವಿ ಪೂಜೆ ಮಾಡಿಸುವಂತೆ ಪ್ರಸ್ತಾಪಿಸಿದ ಆತ, ಆ ಪೂಜೆಗೆ ಆಭರಣ ನೀಡುವಂತೆ ದೂರುದಾರರಿಗೆ ಸೂಚಿಸಿದ್ದ. ಇದಕ್ಕೊಪ್ಪಿದ ನಂತರ ಸಂತ್ರಸ್ತೆ ಮನೆಗೆ ತೆರಳಿ ವೆಂಕಟೇಶ್, ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಲ್ಲಿ ವಿಶೇಷ ಪೂಜೆ ನೆಪದಲ್ಲಿ ಹಂತ ಹಂತವಾಗಿ ಶಾಂತಮ್ಮ ಅವರಿಂದ ಚಿನ್ನಾಭರಣ ಪಡೆದಿದ್ದಾನೆ.

ಈತನ ವರ್ತನೆಯಿಂದ ಶಂಕೆಗೊಂಡ ಅವರು, ತಾವು ನೀಡಿದ ಆಭರಣ ಮರಳಿಸುವಂತೆ ಒತ್ತಾಯಿಸಿದ್ದಾರೆ. ಆಗ ತನಗೆ ಅಪಘಾತವಾಗಿದೆ ಎಂದು ಎಐ ಫೋಟೋ ಕಳುಹಿಸಿ ವೆಂಕಟೇಶ್ ಸಂಪರ್ಕ ಕಡಿತಗೊಳಿಸಿದ್ದಾನೆ. ಕೊನೆಗೆ ತಾವು ಮೋಸ ಹೋಗಿರುವುದು ಅರಿವಾಗಿ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವಾಹಿತೆಯ ಅಪಹರಣ: ದುಷ್ಕರ್ಮಿಗಳಿಗೆ ಥಳಿಸಿದ ಸ್ಥಳೀಯರು
ಪಿವಿಆರ್ ಸಿನಿಮಾಸ್‌ಗೆ 75,000 ರು.ದಂಡ