ಬಳ್ಳಾರಿ ವಿವಿಯಲ್ಲಿ ನಕಲಿ ಘಟಿಕೋತ್ಸವ ಪ್ರಮಾಣ ಪತ್ರ ವಿತರಣೆ; ತನಿಖಾ ಸಮಿತಿ ರಚನೆ

KannadaprabhaNewsNetwork |  
Published : Feb 23, 2025, 12:35 AM IST
ಸಸಸಸ | Kannada Prabha

ಸಾರಾಂಶ

ವಿಶ್ವವಿದ್ಯಾಲಯದ ಕೆಲ ಗುತ್ತಿಗೆ ನೌಕರರು, ವಿವಿ ಕುಲಪತಿ ಸೇರಿದಂತೆ ಇತರರ ನಕಲಿ ಸಹಿ ಮಾಡಿ 60 ಕ್ಕೂ ಹೆಚ್ಚು ಜನರಿಗೆ ಘಟಿಕೋತ್ಸವ ಪ್ರಮಾಣಪತ್ರ ವಿತರಣೆ ಮಾಡಿರುವ ಪ್ರಕರಣ

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಪತಿಗಳು ಸೇರಿದಂತೆ ಇತರರ ಸಹಿ ನಕಲು ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಹಣಕಾಸು ಅಧಿಕಾರಿ, ಆಡಳಿತ ಕುಲಸಚಿವರು ಸೇರಿದಂತೆ 9 ಜನರ ತನಿಖಾ ಸಮಿತಿ ರಚಿಸಲಾಗಿದೆ. ತನಿಖೆಯನ್ನು ಫೆ. 28ರೊಳಗೆ ಪೂರ್ಣಗೊಳಿಸಿ ವರದಿ ನೀಡುವಂತೆ ಸೂಚಿಸಲಾಗಿದೆ.

ವಿಶ್ವವಿದ್ಯಾಲಯದ ಕೆಲ ಗುತ್ತಿಗೆ ನೌಕರರು, ವಿವಿ ಕುಲಪತಿ ಸೇರಿದಂತೆ ಇತರರ ನಕಲಿ ಸಹಿ ಮಾಡಿ 60 ಕ್ಕೂ ಹೆಚ್ಚು ಜನರಿಗೆ ಘಟಿಕೋತ್ಸವ ಪ್ರಮಾಣಪತ್ರ ವಿತರಣೆ ಮಾಡಿರುವ ಪ್ರಕರಣ ಶುಕ್ರವಾರ ಹೊರ ಬರುತ್ತಿದ್ದಂತೆಯೇ ಕುಲಪತಿಗಳ ಸೂಚನೆ ಮೇರೆಗೆ ಮೌಲ್ಯಮಾಪನ ಕುಲಸಚಿವರು ತನಿಖಾ ಸಮಿತಿ ರಚಿಸಿದ್ದು, ಸಮಿತಿ ನೀಡುವ ವರದಿಯನ್ನಾಧರಿಸಿ ವಿಶ್ವವಿದ್ಯಾಲಯ ಸೂಕ್ತ ಕಾನೂನು ಕ್ರಮ ಜರುಗಿಸಲಿದೆ. ಸದ್ಯಕ್ಕೆ 60 ಜನರಿಗೆ ಮಾತ್ರ ಪ್ರಮಾಣಪತ್ರ ವಿತರಣೆ ಮಾಡಿರುವುದು ಗೊತ್ತಾಗಿದ್ದು, ತನಿಖೆಯ ಬಳಿಕ ಇನ್ನೂ ಎಷ್ಟು ಜನರಿಗೆ ಈ ರೀತಿಯ ವಂಚನೆ ಮಾಡಲಾಗಿದೆ ಎಂಬುದು ಹೊರ ಬರುವ ಸಾಧ್ಯತೆಯಿದೆ.

ವಿಶ್ವವಿದ್ಯಾಲಯದ ಗುತ್ತಿಗೆ ನೌಕರರೊಬ್ಬರು ವಿದ್ಯಾರ್ಥಿನಿಯೊಬ್ಬರಿಂದ ಹಣ ಪಡೆದು ನಕಲಿ ಸಹಿ ಬಳಸಿ ಘಟಿಕೋತ್ಸವ ಪ್ರಮಾಣಪತ್ರ ವಿತರಣೆ ಮಾಡಿದ್ದು, ಘಟಿಕೋತ್ಸವ ಪ್ರಮಾಣಪತ್ರ ಪಡೆದ ಬಳಿಕ ಹಣ ಪಾವತಿಸಿದ ಶುಲ್ಕ ಪಾವತಿಯ ರಶೀದಿ ನೀಡದ ಗುತ್ತಿಗೆ ನೌಕರನ ನಡೆಯಿಂದ ಅನುಮಾನಗೊಂಡ ವಿದ್ಯಾರ್ಥಿನಿ ವಿಶ್ವವಿದ್ಯಾಲಯಕ್ಕೆ ಆಗಮಿಸಿದಾಗ ಪ್ರಕರಣ ಹೊರ ಬಿದ್ದಿದೆ.

2021/22 ರಿಂದ ವಿತರಣೆ ಮಾಡಲಾದ ಘಟಿಕೋತ್ಸವ ಪ್ರಮಾಣಪತ್ರ ಪರಿಶೀಲಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಫೆ. 28ರೊಳಗೆ ವರದಿ ನೀಡುವಂತೆ ತನಿಖಾ ಸಮಿತಿಗೆ ಸೂಚನೆ ನೀಡಲಾಗಿದೆ. ವರದಿ ಬರುತ್ತಿದ್ದಂತೆಯೇ ಮತ್ತೊಂದು ಸಮಿತಿಯಿಂದ ತನಿಖೆ ಮಾಡಲಾಗುವುದು. ಬಳಿಕ ಆರೋಪಿತರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗುವುದು ಎಂದು ವಿವಿ ಕುಲಪತಿ ಪ್ರೊ. ಮುನಿರಾಜು ಕನ್ನಡಪ್ರಭಕ್ಕೆ ತಿಳಿಸಿದರು.

ಕುಲಪತಿಗಳು ಹಾಗೂ ಕುಲಸಚಿವರ ಸಹಿ ಹೊಂದಿರುವ ನಕಲಿ ಸೀಲ್‌ ಬಳಸಿ ಘಟಿಕೋತ್ಸವ ಪ್ರಮಾಣಪತ್ರ ವಿತರಣೆ ಮಾಡಲಾಗಿದ್ದು, ತನಿಖೆಯ ಬಳಿಕ ಇನ್ನೂ ಅನೇಕ ಸಂಗತಿಗಳು ಹೊರ ಬರುವ ಸಾಧ್ಯತೆಗಳಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು