ಕೌಟುಂಬಿಕ ಸ್ನೇಹ ಸಮ್ಮಿಲನದಿಂದ ಮನಸ್ಸಿಗೆ ಬಲ: ನವೀನ್ ಕುಮಾರ್ ಎಂ.

KannadaprabhaNewsNetwork |  
Published : May 04, 2026, 02:00 AM IST
ಕನ್ನಡ ಪುಸ್ತಕ ಪ್ರಾಧಿಕಾರದ ಗೌರವಕ್ಕೆ ಪಾತ್ರರಾದ ಯುವ ಲೇಖಕ ನವೀನ್ ಕುಮಾರ್ ಎಂ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಪಟ್ಟಣ ಪ್ರದೇಶಗಳಲ್ಲಿ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವ್ಯಕ್ತಿಗಳಿಗೆ ಅನಾಥ ಭಾವನೆ ಕಾಡುತ್ತಿದೆ. ಇಂತಹ ಸಂದರ್ಭಗಳಲ್ಲಿ ಕೌಟುಂಬಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮಗಳು ಮನಸ್ಸಿಗೆ ಬಲ ನೀಡುತ್ತವೆ ಎಂದು ಲೇಖಕ ಹಾಗೂ ಉದ್ಯಮ ಮಿತ್ರ ಸಂಸ್ಥೆಯ ಸ್ಥಾಪಕ ತಾ.ಕಾ.ಪರ್ತಕರ್ತರ ಸಂಘದ ಅಧ್ಯಕ್ಷ ನವೀನ್ ಕುಮಾರ್ ಎಂ. ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಪಟ್ಟಣ ಪ್ರದೇಶಗಳಲ್ಲಿ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವ್ಯಕ್ತಿಗಳಿಗೆ ಅನಾಥ ಭಾವನೆ ಕಾಡುತ್ತಿದೆ. ಇಂತಹ ಸಂದರ್ಭಗಳಲ್ಲಿ ಕೌಟುಂಬಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮಗಳು ಮನಸ್ಸಿಗೆ ಬಲ ನೀಡುತ್ತವೆ ಎಂದು ಲೇಖಕ ಹಾಗೂ ಉದ್ಯಮ ಮಿತ್ರ ಸಂಸ್ಥೆಯ ಸ್ಥಾಪಕ ತಾ.ಕಾ.ಪರ್ತಕರ್ತರ ಸಂಘದ ಅಧ್ಯಕ್ಷ ನವೀನ್ ಕುಮಾರ್ ಎಂ. ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀಗಂಧ ಬಳಗ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮಿಲನ ಮಹೋತ್ಸವದಲ್ಲಿ ಮಾತನಾಡಿ, ಪ್ರತಿಯೊಬ್ಬರಿಗೂ ಆರೋಗ್ಯ ಭದ್ರತೆ ಹಾಗೂ ಆರ್ಥಿಕ ಭದ್ರತೆ ಅಗತ್ಯವಿದ್ದು, ಕುಟುಂಬಗಳು ಆರೋಗ್ಯ ವಿಮೆ ಸೇರಿದಂತೆ ವಿವಿಧ ಭದ್ರತಾ ಯೋಜನೆಗಳತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಶ್ರೀಗಂಧ ಬಳಗದ ಸದಸ್ಯರು ಸರ್ಕಾರದ ವಿವಿಧ ಸಬ್ಸಿಡಿ ಸಾಲಗಳ ಸದುಪಯೋಗ ಪಡೆದುಕೊಂಡು ತಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳಲು ಹಾಗೂ ಹೊಸ ಉದ್ಯಮ ಆರಂಭಿಸಲು ಅವಕಾಶಗಳಿವೆ ಎಂದು ತಿಳಿಸಿದರು.

ಮನರಂಜನೆಯ ಜೊತೆಗೆ ಮನೋವಿಕಾಸ ಹಾಗೂ ಕುಟುಂಬದ ಭದ್ರತೆಯನ್ನು ಬಲಪಡಿಸುವಲ್ಲಿ ಇಂತಹ ಸಮ್ಮಿಲನ ಕಾರ್ಯಕ್ರಮಗಳು ಮಹತ್ವದ್ದಾಗಿವೆ ಎಂದರು.

ಇದೇ ವೇಳೆ, ಶಿಕಾರಿಪುರ ಪ್ರದೇಶದ ಐತಿಹಾಸಿಕ ಮಹತ್ವವನ್ನು ಉಲ್ಲೇಖಿಸಿದ ಅವರು, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಅನೇಕ ಶಿವಶರಣರು ಈ ಮಣ್ಣಿನಲ್ಲಿ ಹುಟ್ಟಿದ್ದು ವಿಶೇಷ. ಕನ್ನಡದ ಮೊದಲ ದೊರೆ ಮಯೂರ ವರ್ಮ ಹುಟ್ಟಿದ ಈ ನಾಡಿನಲ್ಲಿ ಪ್ರಾಚೀನ ಶಿಲ್ಪಕಲೆ ಹಾಗೂ ವೈಜ್ಞಾನಿಕ ಪರಂಪರೆಯ ಅವಶೇಷಗಳನ್ನು ಕಾಣಬಹುದಾಗಿದೆ ಎಂದು ಹೇಳಿದರು.

ಸಂಸ್ಥಾಪಕ ಅಧ್ಯಕ್ಷ ಗಂಗಾಧರ ಪ್ರಾಸ್ತಾವಿಕವಾಗಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಸಣ್ಣ ವ್ಯಾಪಾರಿಗಳು ಮತ್ತು ವೃತ್ತಿದಾರರು ಸೇರಿ ಶ್ರೀಗಂಧ ಬಳಗದ ಮೂಲಕ ಸಂಘಟಿತರಾಗಿದ್ದು, ಸದಸ್ಯರಿಗೆ ತೊಂದರೆ ಉಂಟಾದಲ್ಲಿ ಎಲ್ಲರೂ ಕುಟುಂಬ ಸದಸ್ಯರ ರೀತಿ ನೆರವಾಗುತ್ತಿರುವುದು ಸಂಘದ ವಿಶೇಷ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷ ನಾಗರಾಜ್ ಎಂ.ಬಿ. ಮಾತನಾಡಿ, ರಾಜಕೀಯ ಹಿತಾಸಕ್ತಿಯಿಂದ ಹೊರತಾಗಿ ಸ್ನೇಹಿತರು ಮತ್ತು ಕುಟುಂಬಗಳ ಒಗ್ಗಟ್ಟಿನ ಬದುಕಿಗಾಗಿ ಸಂಘದ ಮೂಲಕ ಸಂಘಟಿತರಾಗಿ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು, ಸಮಾಜ ಸೇವೆಗೆ ಪ್ರತಿಯೊಬ್ಬರ ಪರಸ್ಪರ ಸಹಕಾರ ಸ್ಮರಣೀಯ ಎಂದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಏಕಾಂತ ಎಸ್.ಎಂ., ಕಾರ್ಯದರ್ಶಿ ಶ್ರವಣಕುಮಾರ್, ಮಾಜಿ ಅಧ್ಯಕ್ಷ ಕೆ.ರುದ್ರೇಶ್, ಹರೀಶ್ ಜಿ.ಸಿ., ಷಡಕ್ಷರಿ ಎಂ.ಬಿ., ಬಸವರಾಜ್, ವೀರೇಶ್ ಎಂ.ಎಚ್, ಮಂಜುನಾಥ್ ಪೂಜಾರ್, ಶಿವಕುಮಾರ ಸ್ವಾಮಿ, ಚನ್ನಬಸಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗೀತಾ ರುದ್ರೇಶ್ ಪ್ರಾರ್ಥಿಸಿ, ಪ್ರಭು ನೆಲೋಗಲ್ ಸ್ವಾಗತಿಸಿ, ಮಾಜಿ ಕಾರ್ಯದರ್ಶಿ ಶರತ್ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಗಿಲು ತೆರೆಯದ ಬಹು ನಿರೀಕ್ಷಿತ ಕ್ರೀಡಾ ಸಂಕೀರ್ಣ!
ಬಿಎಸ್‌ವೈ ಅಭಿಮಾನೋತ್ಸವಕ್ಕೆ ಜಿಲ್ಲೆಯಿಂದ ೫೦ ಸಾವಿರ ಅಭಿಮಾನಿಗಳು