ಫೈನಾನ್ಸ್ ಸಿಬ್ಬಂದಿ ಕಿರುಕುಳದಿಂದ ರೈತ ಮಲ್ಲಿಕಾರ್ಜುನ ಆತ್ಮಹತ್ಯೆ

KannadaprabhaNewsNetwork |  
Published : Oct 26, 2025, 02:00 AM IST
25ಡಿಡಬ್ಲೂಡಿ2ಆತ್ಮಹತ್ಯೆಗೆ ಒಳಗಾದ ಮಲ್ಲಿಕಾರ್ಜುನ | Kannada Prabha

ಸಾರಾಂಶ

ಆತ್ಮಹತ್ಯೆಗೆ ಒಳಗಾದ ಮಲ್ಲಿಕಾರ್ಜುನ, ಟಿವಿಎಸ್‌ ಕ್ರೆಡಿಟ್‌ ಫೈನಾನ್ಸ್‌ನಿಂದ ಸ್ಕೂಟಿ ಖರೀದಿಸಿದ್ದ. ಆ ಸ್ಕೂಟಿಯ ಕಂತು ಕಟ್ಟುವಂತೆ ಫೈನಾನ್ಸ್ ಸಿಬ್ಬಂದಿ ಆತನಿಗೆ ಒತ್ತಡ ಹೇರುತ್ತಿದ್ದರು. ಕಳೆದ ಎರಡು ತಿಂಗಳ ಹಿಂದೆ ಕಿಡ್ನಿ ಸ್ಟೋನ್ ಶಸ್ತ್ರ ಚಿಕಿತ್ಸೆಯಾಗಿ ಮನೆಯಲ್ಲಿದ್ದನು. ಹೀಗಾಗಿ ಸ್ಕೂಟಿಯ ಕಂತು ಕಟ್ಟಲು ಆಗಿರಲಿಲ್ಲ.

ಧಾರವಾಡ:

ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನೋರ್ವ ಫೈನಾನ್ಸ್‌ ಕಂಪನಿಯೊಂದರ ಸಿಬ್ಬಂದಿಯ ಕಿರುಕುಳ ಹಾಗೂ ಪ್ರಚೋದನೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಹೆಬ್ಬಳ್ಳಿಯ ಮಲ್ಲಿಕಾರ್ಜುನ ಶಿರಗುಪ್ಪಿ (33) ಸೆ. 30ರಂದು ಹೆಬ್ಬಳ್ಳಿಯ ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಪ್ರಾಥಮಿಕ ತನಿಖೆಯಲ್ಲಿ ಬ್ಯಾಂಕ್‌ ಸಾಲ ಹಾಗೂ ಕೈಗಡ ಸಾಲದಿಂದ ಬೇಸತ್ತು ರೈತ ಆತ್ಮಹತ್ಯೆ ಎಂದು ಪರಿಗಣಿಸಲಾಗಿತ್ತು. ಆದರೆ, ಆತ್ಮಹತ್ಯೆಯ ನೈಜ ಕಾರಣ ಫೈನಾನ್ಸ್‌ ಕಂಪನಿಯೊಂದರ ಸಿಬ್ಬಂದಿ ಕಿರುಕುಳ ಎಂಬುದು ತನಿಖೆಯ ನಂತರ ಬಯಲಾಗಿದ್ದು, ಟಿವಿಎಸ್‌ ಕ್ರೆಡಿಟ್‌ ಫೈನಾನ್ಸ್‌ನ ಗುರು ಉರ್ಫ ವೀರು ಹಿರೇಮಠ ಹಾಗೂ ಬಸವರಾಜ ಎಂಬುವರ ವಿರುದ್ಧ ಗ್ರಾಮೀಣ ಪೊಲೀಸ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.

ಏನಿದು ಪ್ರಕರಣ:

ಆತ್ಮಹತ್ಯೆಗೆ ಒಳಗಾದ ಮಲ್ಲಿಕಾರ್ಜುನ, ಟಿವಿಎಸ್‌ ಕ್ರೆಡಿಟ್‌ ಫೈನಾನ್ಸ್‌ನಿಂದ ಸ್ಕೂಟಿ ಖರೀದಿಸಿದ್ದ. ಆ ಸ್ಕೂಟಿಯ ಕಂತು ಕಟ್ಟುವಂತೆ ಫೈನಾನ್ಸ್ ಸಿಬ್ಬಂದಿ ಆತನಿಗೆ ಒತ್ತಡ ಹೇರುತ್ತಿದ್ದರು. ಕಳೆದ ಎರಡು ತಿಂಗಳ ಹಿಂದೆ ಕಿಡ್ನಿ ಸ್ಟೋನ್ ಶಸ್ತ್ರ ಚಿಕಿತ್ಸೆಯಾಗಿ ಮನೆಯಲ್ಲಿದ್ದನು. ಹೀಗಾಗಿ ಸ್ಕೂಟಿಯ ಕಂತು ಕಟ್ಟಲು ಆಗಿರಲಿಲ್ಲ. ಫೈನಾನ್ಸ್ ಸಿಬ್ಬಂದಿ ಮಲ್ಲಿಕಾರ್ಜುನನಿಗೆ ಕರೆ ಮಾಡಿ ಕಂತು ಕಟ್ಟುವಂತೆ ಒತ್ತಡ ಹೇರಿದ್ದಾರೆ. ಅಲ್ಲದೇ ಕಂತು ಕಟ್ಟಲಾಗದೇ ನೇಣು ಹಾಕಿಕೊಳ್ಳುವುದಾದರೆ ನಮ್ಮ ಮ್ಯಾನೇಜರ್ ಹೆಸರು ಬರೆದಿಟ್ಟು ಸಾಯಿರಿ ಎಂದು ಪ್ರಚೋದನೆ ಮಾಡಿದ್ದರು ಎಂಬ ಸಂಗತಿ ಮಲ್ಲಿಕಾರ್ಜುನ ಅವರ ಮೊಬೈಲ್‌ ಮೂಲಕ ಕುಟುಂಬಸ್ಥರಿಗೆ ಗೊತ್ತಾಗಿದೆ. ಈ ವಿಷಯ ಅರಿತ ಕುಟುಂಬದ ಸದಸ್ಯರು ಶುಕ್ರವಾರ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಹಾಗೂ ₹ 25 ಲಕ್ಷ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಧಾರವಾಡ ಗ್ರಾಮೀಣ ಠಾಣೆಯಲ್ಲಿ ಇದೀಗ ಅಧಿಕೃತ ದೂರು ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಮಾಡಿ ಪೂರ್ವಾಪರ ವಿಚಾರಣೆ ಮಾಡಿ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸುವ ಭರವಸೆಯನ್ನು ಪೊಲೀಸರ ವರಿಷ್ಠಾಧಿಕಾರಿ ಗುಂಜನ್‌ ಆರ್ಯ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನಕ್ಷರತೆ ಬಾಲ್ಯ ವಿವಾಹ ಕೇಸ್‌ ರದ್ದತಿಗೆ ಆಧಾರವಾಗದು: ಕೋರ್ಟ್‌
ಕೆಎಸ್‌ಡಿಎಲ್‌ನಿಂದ ₹400ನ ಮಲ್ಲಿಗೆ ಸೋಪ್‌!