ಪಾಂಡವಪುರ: ಅಧಿಕಾರ ದಾಹ, ಸ್ವಾರ್ಥಕ್ಕಾಗಿ ಕಾಂಗ್ರೆಸ್ ಸರ್ಕಾರ ರೈತರನ್ನು ಬಲಿ ಕೊಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿನಲ್ಲಿ 60 ಟಿಎಂಸಿ ನೀರಿದ್ದರೂ ಸಹ ರಾಜ್ಯದ ಕಾಂಗ್ರೆಸ್ ಸರಕಾರ ತಮಿಳುನಾಡಿನಲ್ಲಿರುವ ಕಾಂಗ್ರೆಸ್ ಒಕ್ಕೂಟದ ದೋಸ್ತಿ ಸರಕಾರಕ್ಕಾಗಿ ಕಾವೇರಿ ನೀರು ಹರಿಬಿಟ್ಟಿತು. ವಿದ್ಯುತ್ ಸಮಸ್ಯೆಯಂತ ಹೇಳತೀರದಾಗಿದೆ. ವಿದ್ಯುತ್ ಸಮಸ್ಯೆಯಿಂದ ರೈತ ಸಂಕುಲ, ಕೈಗಾರಿಕೆ, ಉದ್ಯಮಗಳು ನಲುಗಿ ಹೋಗಿವೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಕೇಂದ್ರದ ಎನ್ಡಿಆರ್ಎಫ್ ಅನುದಾನ ನೀಡಿಲ್ಲ ಎಂದು ಆರೋಪಿಸುತ್ತಿದೆ. ಶೀಘ್ರವೇ ಎನ್ಡಿಆರ್ಎಫ್ ಅನುದಾನ ಬಿಡುಗಡೆ ಮಾಡಿಸಲಾಗುವುದು. ರಾಜ್ಯ ಸರಕಾರ ಬರಕ್ಕಾಗಿ ರಾಜ್ಯದ 31 ಜಿಲ್ಲೆಗೆ 302 ಕೋಟಿ ಮೀಸಲಿಟ್ಟಿದೆ. ಎನ್ಡಿಆರ್ಎಫ್ ಅನುದಾನ ಬರುವ ತನಕ ಬೇರೆಡೆಯಿಂದ ಬರಕ್ಕಾಗಿ 1 ಸಾವಿರ ಕೋಟಿ ಹಣವನ್ನು ಎತ್ತಿಟ್ಟು ಸಮಸ್ಯೆ ಬಗೆಹರಿಸಿಕೊಳ್ಳಬೇಕು, ಎನ್ಡಿಆರ್ಎಫ್ ಅನುದಾನ ಬಂದ ಬಳಿಕ ಅನುದಾನ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ರಾಜ್ಯದಲ್ಲಿ ಎದುರಾಗಿರುವ ಬರದ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡುವ ಆಲೋಚನೆ ಇಲ್ಲದೆ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ. ಬಿಜೆಪಿ ಪಕ್ಷ ಬರ ಸ್ಥಿತಿಗತಿ ಅಧ್ಯಯನ ಮಾಡಿ ರಾಜ್ಯ, ಕೇಂದ್ರ ಸರಕಾರಕ್ಕೆ ಗ್ರೌಂಡ್ ರಿಪೋರ್ಟ್ ಸಲ್ಲಿಸಲು ರಾಜ್ಯದ 31 ಜಿಲ್ಲೆಯಲ್ಲಿ 16 ತಂಡ ಕೆಲಸ ಮಾಡುತ್ತಿದೆ ಎಂದರು.
ಪ್ರಚಾರಕ್ಕಾಗಿ ಅಧ್ಯಯನ ನಡೆಸುತ್ತಿಲ್ಲ. ಅಧ್ಯಯನದ ವೇಳೆ ಸಂಗ್ರಹಿಸಲಾದ ಎಲ್ಲಾ ವರದಿಯನ್ನು ನಮ್ಮ ಕೇಂದ್ರ ಸರಕಾರಕ್ಕೂ ಸಹ ಸೂಕ್ತ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.ಮಂಡ್ಯ ಜಿಲ್ಲೆಗೆ ಸರಕಾರ 10.50 ಕೋಟಿ ಅನುದಾನ ನೀಡಿದೆ. ಆದರೆ, ಆ ಅನುದಾನವನ್ನು ಹೇಗೆ ಬಳಕೆ ಮಾಡಬೇಕು ಎನ್ನುವ ಮಾರ್ಗಸೂಚಿಯನ್ನೇ ನೀಡಿಲ್ಲ. ಕೇಂದ್ರ ಕಿಸಾನ್ ಸನ್ಮಾನ್ ಯೋಜನೆಯ ಜತೆಗೆ ರಾಜ್ಯದಿಂದ ನೀಡಲಾಗುತ್ತಿದ್ದ 4 ಸಾವಿರ ಕಡಿತಗೊಳಿಸಿದೆ. ವಿದ್ಯಾಸಿರಿ ಯೋಜನೆ ಸ್ಥಗಿತಗೊಳಿಸಿ ಎಂದು ಕಿಡಿಕಾರಿದರು.
ಬಳಿಕ ರೈತರೊಂದಿಗೆ ಸಂವಾದ ನಡೆಸಿದರು. ರೈತರು, ಆಲೆಮನೆ, ರೈಸ್ಮಿಲ್ ಮಾಲೀಕರು ಹಲವು ಸಮಸ್ಯೆಗಳನ್ನು ಬರ ಅಧ್ಯಾಯನ ತಂಡದ ಸದಸ್ಯರ ಬಳಿ ಹೇಳಿಕೊಂಡರು. ಅಧ್ಯಯನದ ವರದಿಯನ್ನು ರಾಜ್ಯ, ಕೇಂದ್ರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.ಈ ವೇಳೆ ಸಕಲೇಶ್ವರ ಶಾಸಕ ಮಂಜು, ಮಾಜಿ ಶಾಸಕ ಪ್ರೀತಂಗೌಡ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಉಮೇಶ್, ಸಚ್ಚಿದಾನಂದ, ಮದ್ದೂರು ಸ್ವಾಮಿ, ಈ.ಸಿ.ನಿಂಗರಾಜೇಗೌಡ, ಡಾ.ಸದಾನಂದ್, ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಎಚ್.ಎನ್.ಮಂಜುನಾಥ್, ಅಶೋಕ್, ತಾಪಂ ಮಾಜಿ ಸದಸ್ಯೆ ಮಂಗಳನವೀನ್, ಧನಂಜಯ್, ಚಿಕ್ಕಮರಳಿ ನವೀನ್ ಸೇರಿದಂತೆ ಹಲವರು ಭಾಗವಹಿಸಿದ್ದರು.