ಹಾನಗಲ್ಲ: ಬಾಳಂಬೀಡ ಏತ ನೀರಾವರಿ ಯೋಜನೆ ಆರಂಭಿಸುವಲ್ಲಿ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು, ನೀರು ಹರಿಸುವಂತೆ ಮಾಡಬೇಕು ಎಂದು ಒತ್ತಾಯಿಸಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಬೃಹತ್ ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಲೂಟಿ ಆದ ಮೇಲೆ ಕ್ಯಾಟಿ ಕದಾ ಹಾಕಿದಂತಾಗಿದೆ. ನದಿಯಲ್ಲಿ ಕಳೆದ ೧೫ ದಿನಗಳಿಂದ ಉತ್ತಮವಾಗಿ ನೀರು ಹರಿಯುತ್ತಿದ್ದರೂ ಅದನ್ನು ರೈತರ ಸಹಾಯಕ್ಕಾಗಿ ಕೆರೆಗಳಿಗೆ ತುಂಬಿಸುವಲ್ಲಿ ವಿಫಲಾಗಿದ್ದಾರೆ. ಇದರಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯೇ ಇರುವುದರಿಂದ ಅವರನ್ನು ಅಮಾನತುಗೊಳಿಸಿ, ಜವಾಬ್ದಾರಿಯುತ ಅಧಿಕಾರಿಗಳನ್ನು ನೇಮಿಸಬೇಕು. ಜನಪ್ರತಿನಿಧಿಗಳು ರೈತರ ಸಂಕಷ್ಟಕ್ಕೆ ನಿಲ್ಲುವ ಸಂದರ್ಭದಲ್ಲಿ ಅಧಿಕಾರಿಗಳ ದಾರಿ ತಪ್ಪಿಸುವ ಹೇಳಿಕೆಗಳಿಗೆ ಕಿವಿಗೊಡಬಾರದು. ರೈತರಿಗಾಗಿ ನೂರಾರು ಕೋಟಿ ಹಣದಲ್ಲಿ ಆರಂಭವಾದ ನೀರಾವರಿ ಯೋಜನೆ ರೈತರಿಗೆ ಸಕಾಲಿಕವಾಗಿಲ್ಲ, ಪ್ರಯೋಜನಕ್ಕೆ ಬರದಿರುವುದು ವಿಷಾದದ ಸಂಗತಿ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ಒಂದು ತಿಂಗಳ ಹಿಂದೆಯೇ ಎಲ್ಲ ನೀರಾವರಿ ಯೋಜನೆಗಳು ಸಕಾಲಿಕವಾಗಿ ಆರಂಭಿಸಲು ಗಮನ ಸೆಳೆದಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರು ಕೈ ಕೈ ಹಿಸುಕಿಕೊಳ್ಳುವಚಿತಾಗಿದೆ. ನೀರು ಹೋಯಿತು. ಮತ್ತೆ ಮಳೆ ಬರುವ ನಿರೀಕ್ಷೆ ಕಡಿಮೆ ಎಂದು ಹವಾಮಾನ ಇಲಾಖೆ ಹೇಳುತ್ತಿದೆ. ಬರಗಾಲದ ಸೂಚನೆ ಕೊಡುತ್ತಿದೆ. ಇಂತಹದ್ದರಲ್ಲಿ ಅಧಿಕಾರಿಗಳು ರೈತರನ್ನು ನಿರ್ಲಕ್ಷಿಸಿರುವುದು ಅಕ್ಷಮ್ಯ ಅಪರಾಧ ಎಂದರು.ಪ್ರತಿಭಟನಾಕಾರರಿಗೆ ಉತ್ತರಿಸಿದ ಬೃಹತ್ ನೀರಾವರಿ ಯೋಜನೆ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ, ವಿದ್ಯುತ್ ಸಮಸ್ಯೆಗೆ ಕಾರಣ ಯಾವುದೇ ಸೂಚನೆ ನೀಡದೇ ವಿದ್ಯುತ್ ನಿರ್ವಹಿಸುವ ಆರ್ಆರ್ ಕಂಪನಿ ವಿದ್ಯುತ್ ಕಡಿತಗೊಳಿಸಿ ಮತ್ತೆ ಅದೇ ರೀತಿ ಸೂಚನೆ ನೀಡದೇ ಮತ್ತೆ ವಿದ್ಯುತ್ ಹರಿಸಿದ್ದೇ ಇದಕ್ಕೆ ಕಾರಣವಾಗಿದೆ. ಒಂದೆರಡು ದಿನದಲ್ಲಿ ನೀರು ಹರಿಸಲು ಆರಂಭಿಸಲಾಗುತ್ತದೆ ಎಂದರು.