ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ತಾಲೂಕಿನ ಬೇರಂಬಾಡಿ ಸುತ್ತಲೂ ಕಳೆದ ಕೆಲ ತಿಂಗಳಿಂದ ಹುಲಿ ಮತ್ತು ಚಿರತೆ ಕಾಣಿಸಿಕೊಳ್ಳುತ್ತಿದ್ದರೂ ಅರಣ್ಯ ಇಲಾಖೆ ಗೊತ್ತಿದ್ದೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಸಾಮೂಹಿಕ ನಾಯಕತ್ವದ ರೈತ ಸಂಘದ ಕಾರ್ಯಕರ್ತರು ಮದ್ದೂರು ವಲಯ ಕಚೇರಿ ಮುಂದೆ ಗುಂಡ್ಲುಪೇಟೆ-ಕೇರಳ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.ಹೆದ್ದಾರಿಯಲ್ಲಿ ರೈತಸಂಘ ಕಾರ್ಯಕರ್ತರು ಧರಣಿ ಕುಳಿತ ಬಳಿಕ ಅರಣ್ಯ ಸಚಿವ, ಶಾಸಕ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದರು.
ರೈತ ಸಂಘದ ಷಣ್ಮುಖಸ್ವಾಮಿ ಮಾತನಾಡಿ, ಶಾಸಕರು ತಮ್ಮ ಸಂಬಳ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆದರೆ ರೈತರ ಜಾನುವಾರುಗಳು, ಮೇಕೆ, ಕುರಿ ಸತ್ತರೆ ನಾಲ್ಕೈದು ಸಾವಿರ ರು. ಪರಿಹಾರ ಕೊಡ್ತೀರಾ? ಅದು ಸಕಾಲದಲ್ಲಿ ಪರಿಹಾರ ಸಿಗುತ್ತಿಲ್ಲ ಎಂದು ಆರೋಪಿಸಿದರು.ಅರಣ್ಯ ಇಲಾಖೆ ಜಾನುವಾರು, ಮೇಕೆ, ಕುರಿ ಕಾಡು ಪ್ರಾಣಿಗಳಿಗೆ ಸಾವನ್ನಪ್ಪಿದಾಗ ನೀಡುವ ಪರಿಹಾರದ ಬದಲು ನಷ್ಟ ತುಂಬಿಕೊಡಬೇಕು. ಅರಣ್ಯ ಅಧಿಕಾರಿಗಳಿಗೆ ಕಾಡು ಪ್ರಾಣಿಗಳ ಹಾವಳಿ ಬಗ್ಗೆ ತಿಳಿಸಿದ್ದರೂ ಸ್ಪಂದಿಸುತ್ತಿಲ್ಲ. ಚೆಕ್ ಪೋಸ್ಟ್ನಲ್ಲಿ ಕ್ಯಾಮೆರಾ ವ್ಯವಸ್ಥೆ ಮಾಡುತ್ತಿಲ್ಲ ಎಂದರು.
ಪ್ರತಿಭಟನೆಯಲ್ಲಿ ರೈತಸಂಘದ ಲೋಕೇಶ್, ಕೂತನೂರು ಗಣೇಶ್,ಶಿವಪುರ ಸಿದ್ದಪ್ಪ ಹಲವರಿದ್ದರು.ಬಾಕ್ಸ್ರಸ್ತೆತಡೆ ಮಾಡಂಗಿಲ್ಲ, ಪೊಲೀಸರ ನಿರ್ಲಕ್ಷ್ಯ
ಗುಂಡ್ಲುಪೇಟೆ: ಹೆದ್ದಾರಿಗಳಲ್ಲಿ ರಸ್ತೆತಡೆ ಮಾಡಂಗಿಲ್ಲ ಎಂಬ ನಿಯಮವಿದೆ ಆದರೂ ಸ್ಥಳೀಯ ಪೊಲೀಸರ ನಿರ್ಲಕ್ಷ್ಯದಿಂದ ರಸ್ತೆತಡೆ ಆಗುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಪ್ರಯಾಣಿಕರು, ಪ್ರವಾಸಿಗರಿಗೆ ತೊಂದರೆ ರಸ್ತೆ ತಡೆಯಿಂದ ಅನಾನುಕೂಲವಾಗುತ್ತಿದೆ. ಜಿಲ್ಲಾಡಳಿತ ಸ್ಥಳೀಯ ಪೊಲೀಸರಿಗೆ ಹೆದ್ದಾರಿಯಲ್ಲಿ ರಸ್ತೆತಡೆ ನಡೆಸದಂತೆ ಸೂಚನೆ ನೀಡಲಿ ಎಂದು ಸಲಹೆ ನೀಡಿದ್ದಾರೆ.
ಗುಂಡ್ಲುಪೇಟೆಯಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆದಾಗ ಬಹುತೇಕ ರಸ್ತೆತಡೆ ನಡೆಸುತ್ತಿದ್ದಾರೆ. ಆ ಸಮಯದಲ್ಲಿ ದೂರ ದೂರಿಗೆ ಹೋಗುವ ಸಾರ್ವಜನಿಕರು, ಪ್ರವಾಸಿಗರಿಗೆ ತೊಂದರೆ ಆಗುತ್ತೇ ಇದಕ್ಕೆ ನಾವೇಕೆ ಕಾದು ನಿಲ್ಲಬೇಕು ಎಂದು ಪ್ರವಾಸಿಗ ಮಹೇಶ್ ಬಾಬು ಆಕ್ಷೇಪ ಎತ್ತಿದ್ದಾರೆ.ಪ್ರತಿಭಟನೆ ನಡೆಸಲು, ನಮ್ಮದೇನು ತಕರಾರಿಲ್ಲ. ಸಂಬಂಧ ಪಟ್ಟ ಕಚೇರಿ ಅಥವಾ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಿ. ಅದು ಬಿಟ್ಟು ಹೆದ್ದಾರಿಯಲ್ಲಿ ಕುಳಿತರೆ ಸಾರ್ವಜನಿಕರಿಗಾಗುವ ತೊಂದರೆಗೆ ಜಿಲ್ಲಾಡಳಿತ ಸ್ಪಂದಿಸಲಿ ಎಂದು ಹೆಸರೇಳಲಿಚ್ಚಿಸಿದ ಅಧಿಕಾರಿಯೊಬ್ಬರು ಹೇಳಿದ್ದಾರೆ.