ಕನ್ನಡಪ್ರಭ ವಾರ್ತೆ ಹಾಸನ
ಪಡೆದ ಸಾಲಕ್ಕೆ ರೈತರ ಜಮೀನು ಹರಾಜಿಗೆ ಇಟ್ಟಿದ್ದಲ್ಲದೇ ಕೇಳಲು ಹೋದ ಮಾಲೀಕನ ಮೇಲೆ ಹಲ್ಲೆ ಮಾಡಿ ಚರಂಡಿಗೆ ನೂಕಿ ಕೈ ಮುರಿದಿರುವುದನ್ನು ಖಂಡಿಸಿ ರೈತ ಸಂಘದಿಂದ ಕೆ.ಆರ್. ಪುರಂ ಬಳಿ ಇರುವ ಕರ್ಣಾಟಕ ಗ್ರಾಮೀಣ ಬ್ಯಾಂಕ್ ಮುಂದೆ ರಸ್ತೆ ತಡೆ ಮಾಡಿದಲ್ಲದೇ ಬ್ಯಾಂಕಿಗೆ ಬೀಗ ಹಾಕಲು ಮುಂದಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.ಇದೇ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ, ಕಳೆದ ೧೫ ದಿನಗಳ ಹಿಂದೆ ಊರಿಗೆ ಹೋಗಿ ತಮಟೆ ಹೊಡೆದು ಮೃತರಾಗಿರುವ ಶಾಂತೇಗೌಡರ ಪುತ್ರ ಶಿವಕುಮಾರ್ ಅವರ ಸಾಲದ ಜಮೀನು ಹರಾಜು ಹಾಕಲು ಬ್ಯಾಂಕಿನ ಮ್ಯಾನೇಜರ್ ಹೊರಟಿದ್ದರು. ಜಮೀನು ಹರಾಜು ಹಾಕುತ್ತೇವೆ ಯಾರಾದರೂ ಖರೀದಿ ಮಾಡಬಹುದು ಎಂದಿದ್ದಾರೆ. ನಮಗೆ ನೋಟಿಸ್ ಕೊಟ್ಟಿಲ್ಲ. ಏಕೆ ಹರಾಜು ಹಾಕುತ್ತಿದ್ದೀರಿ ಎಂದು ಜಮೀನು ಮಾಲೀಕರು ಬ್ಯಾಂಕಿನವರಿಗೆ ಕೇಳಿದ್ದು, ಇದು ಕೋರ್ಟ್ ಆದೇಶ ಎಂದಿದ್ದಾರೆ. ಈ ವೇಳೆ ಒಬ್ಬರಿಗೊಬ್ಬರೂ ಕೈ ಮಿಲಾಯಿಸಿದ್ದಾರೆ. ಈ ವೇಳೆ ಬ್ಯಾಂಕಿನವರು ಸಾಲ ಪಡೆದವನನ್ನು ನೂಕಿದಾಗ ಚರಂಡಿಗೆ ಹೋಗಿ ಬಿದ್ದಿದ್ದಾರೆ. ಈ ವೇಳೆ ಶಿವಕುಮಾರ್ ಅವರ ಕೈ ಮುರಿದು ಹೋಗಿದೆ ಎಂದು ದೂರಿದರು.
ಈ ಬ್ಯಾಂಕಿನವರು ಪ್ರತಿಭಟನಾಕಾರರ ಬಳಿ ಬಂದು ಸಮಸ್ಯೆ ಆಲಿಸಿದರು. ಈ ಬ್ಯಾಂಕ್ ವಿಲೀನ ಆಗಿರುವುದರಿಂದ ಸದ್ಯಕ್ಕೆ ಹರಾಜು ಪ್ರಕ್ರಿಯೆ ನಡೆಸುವುದಿಲ್ಲ. ರೈತರಿಗೆ ಸ್ಪಂದಿಸುವ ರೀತಿ ನಡೆದುಕೊಳ್ಳುವುದಾಗ ಹೇಳುವ ಮೂಲಕ ರೈತರ ಪ್ರತಿಭಟನೆ ಶಾಂತಿಗೊಳಿಸಿದರು.ರೈತ ಸಂಘದ ಬಿಟ್ಟಗೌಡನಹಳ್ಳಿ ಮಂಜು, ಆಲದಹಳ್ಳಿ ಶಶಿಧರ್, ರಾಜಣ್ಣ, ಶಿವಕುಮಾರ್, ಸೋಮಶೇಖರ್, ಪಾಲಾಕ್ಷ, ಶಂಕ ಮಂಜಣ್ಣ, ಮನು ಇತರರು ಉಪಸ್ಥಿತರಿದ್ದರು.