ಮಾಗಡಿ: ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ತಾಲೂಕು ಆಡಳಿತದ ವಿರುದ್ಧ ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ನೇತೃತ್ವದಲ್ಲಿ ತಾಲೂಕು ಹಸಿರು ಸೇನೆ ಹಾಗೂ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಬಳಿಕ ಮಾತನಾಡಿದ ರೈತ ಮುಖಂಡ ಹೊಸಪಾಳ್ಯ ಲೋಕೇಶ್, ತಹಸೀಲ್ದಾರ್ ಅವರಿಗೆ ಕಳೆದ 15 ದಿನಗಳ ಹಿಂದೆ ರೈತರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ಕರೆಯುವಂತೆ ಮನವಿ ಮಾಡಿದರೂ ತಹಸೀಲ್ದಾರರು ಯಾವುದೇ ಅಧಿಕಾರಿಗಳನ್ನು ಕರಿಸಲೇ ಇಲ್ಲ. ಯಾರಿಗೆ ಮನವಿ ಮಾಡಿದರೂ ಅಧಿಕಾರಿಗಳು ಸಭೆಗೆ ಬರುವುದಾಗಲಿ ಪ್ರತಿಭಟನಾ ಸ್ಥಳಕ್ಕೆ ಬರುವುದಾಗಲಿ ಮಾಡುತ್ತಿಲ್ಲ. ಇಷ್ಟು ಉಡಾಫೆ ತೋರುವ ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದರೆ ಪೊಲೀಸರು ಅವಕಾಶ ಕೊಡುತ್ತಿಲ್ಲ. ನಮ್ಮ ಸಮಸ್ಯೆಗಳನ್ನು ಬಗೆಹರಿಸುವವರು ಯಾರು? ನಮ್ಮನ್ನು ಸುಮ್ಮನಿರಿಸಲು ಅಧಿಕಾರಿಗಳ ಸಭೆ ಕರೆಯುತ್ತೇವೆ ಎಂದು ಕಾಟಾಚಾರಕ್ಕೆ ಹೇಳುತ್ತಾರೆ ಎಂದು ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದರು.ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಎಚ್.ಎಂ.ಕೃಷ್ಣಮೂರ್ತಿ ಮಾತನಾಡಿ, ಅಧಿಕಾರ ಮತ್ತು ಸರ್ಕಾರ ಯಾವತ್ತು ಶಾಶ್ವತ ಅಲ್ಲ, ಜನಗಳಿಗೆ ನಾವೇನು ಮಾಡಿದ್ದೇವೆ ಎಂಬುದು ಮುಖ್ಯ. ರೈತರು ಪ್ರತಿಭಟನೆ ಮಾಡಿದರೆ ಅಧಿಕಾರ ಮತ್ತು ಪೊಲೀಸರನ್ನು ಬಳಸಿಕೊಂಡು ರೈತರನ್ನು ಬಂಧಿಸುತ್ತಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ, ತಮ್ಮ ಸಮಸ್ಯೆಯನ್ನು ರೈತರು ಯಾರಿಗೆ ಹೇಳಿಕೊಳ್ಳಬೇಕು? ಅಭಿವೃದ್ಧಿ ಮಾಡುತ್ತೇನೆಂದು ಶಾಸಕರು ತಾಲೂಕಿನಲ್ಲಿ ನಡೆದುಕೊಳ್ಳುವುದನ್ನು ವಿರೋಧಿಸಿದರೆ ಅಭಿವೃದ್ಧಿಗೆ ವಿರೋಧ ಎಂಬ ಪಟ್ಟ ಕಟ್ಟಿ ಪೊಲೀಸರನ್ನು ಬಳಸಿಕೊಂಡು ಬಂಧಿಸುತ್ತಿದ್ದಾರೆ ಆರೋಪಿಸಿದರು. ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಮಾಡಬಾಳ್ ಜಯರಾಂ, ದೊಡ್ಡಿ ಗೋಪಿ, ರೈತ ಸಂಘ ಯುವ ಘಟಕದ ಜಿಲ್ಲಾಧ್ಯಕ್ಷ ರಂಗಪ್ಪ, ರೈತ ಮುಖಂಡರಾದ ಧನಂಜಯ್ಯ, ಶಿವರಾಮು, ಶಿವಲಿಂಗಯ್ಯ, ಕಾಂತರಾಜು, ಕುರುಪಾಳ್ಯ, ಬುಡಾನ್ ಸಾಬ್, ಶಿವರುದ್ರಯ್ಯ, ನಾರಾಯಣ್, ಸಲೀಂಪಾಷಾ, ನಿಂಗರಾಜು , ಮುನಿರಾಜು, ಹನುಮಂತು, ಲೋಕೇಶ್ ಕರೇನಹಳ್ಳಿ ಕೃಷ್ಣಪ್ಪ, ವೆಂಕಟೇಶ್ ಇತರರು ಭಾಗವಹಿಸಿದ್ದರು.
ಬಾಕ್ಸ್.........ಸ್ಥಳಕ್ಕೆ ಬಾರದ ಅಧಿಕಾರಿಗಳು: ರೈತರ ಆಕ್ರೋಶ
ರೈತ ಸಂಘ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್, ಉಪತಹಸೀಲ್ದಾರ್ ಹಾಗೂ ಇತರ ಅಧಿಕಾರಿಗಳು ಯಾರು ಆಗಮಿಸಿದ ಹಿನ್ನೆಲೆಯಲ್ಲಿ ರೈತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಕಚೇರಿಯಿಂದ ಎಫ್ಡಿಎ ಅಧಿಕಾರಿ ಬಂದು ನ್ಯಾಯಾಂಗ ನಿಂದನೆ ಪ್ರಕರಣ ಇರುವುದರಿಂದ ತಹಸೀಲ್ದಾರ್ ಮತ್ತು ಉಪ ತಹಸೀಲ್ದಾರ್ ನ್ಯಾಯಾಲಯಕ್ಕೆ ಹಾಜರಾಗಿದ್ದರಿಂದ ಸ್ಥಳಕ್ಕೆ ಬಂದಿಲ್ಲ. ಇನ್ನೆರಡು ದಿನದಲ್ಲಿ ತಾಲೂಕು ಕಚೇರಿಯಲ್ಲಿ ರೈತರ ಬೇಡಿಕೆಗಳನ್ನು ಬಗೆಹರಿಸಲು ಅಧಿಕಾರಿಗಳ ಸಭೆ ಕರೆಯುತ್ತಾರೆ ಎಂದು ರೈತರ ಮನವರಿಸುವ ಕೆಲಸ ಮಾಡಿದರು ಇದಕ್ಕೆ ಒಪ್ಪತ ರೈತ ಸಂಘ ಪ್ರತಿಭಟನೆ ಮುಂದುವರಿಸಿತ್ತು.ಪೊಲೀಸರು ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದರೂ ಪ್ರತಿಭಟನೆ ಮುಂದುವರಿದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಕೂತಿದ್ದ ರೈತರನ್ನು ಬಂಧಿಸಿ ಪೊಲೀಸ್ ವಾಹನದಲ್ಲಿ ಮಾಗಡಿ ಠಾಣೆಗೆ ರೈತರನ್ನು ಕರೆದುಕೊಂಡು ಹೋಗಿ ಸ್ವಲ್ಪ ಸಮಯದ ನಂತರ ರೈತರನ್ನು ಬಿಡುಗಡೆ ಮಾಡಿದರು. ಒಂದು ಗಂಟೆಗೂ ಹೆಚ್ಚು ಕಾಲ ಮಾಗಡಿ-ಬೆಂಗಳೂರು ಮುಖ್ಯರಸ್ತೆಯಲ್ಲಿ ರೈತ ಸಂಘ ತಾಲೂಕು ಆಡಳಿತ ವಿರುದ್ಧ ಪ್ರತಿಭಟನೆ ನಡೆಸಿದರು.
(ಫೋಟೋ ಕ್ಯಾಪ್ಷನ್)ಮಾಗಡಿಯ ಕಲ್ಯಾಗೇಟ್ ವೃತ್ತದಲ್ಲಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ತಾಲೂಕು ಆಡಳಿತ ವಿರುದ್ಧ ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ನೇತೃತ್ವದಲ್ಲಿ ಹಸಿರು ಸೇನೆ ಹಾಗೂ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.