ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನಲ್ಲಿ ಸರ್ಕಾರಿ, ಗೋಮಾಳ, ಹುಲ್ಲುಬನ್ನಿ, ಅರಣ್ಯ ಇನ್ನಿತರೆ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಾ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಭೂಮಿ ಮಂಜೂರಾತಿ ನೀಡಬೇಕೆಂದು ಆಗ್ರಹಿಸಿ ದಿನಾಂಕ- 27-10-2025 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಬಗರ್ ಹುಕುಂ ಸಾಗುವಳಿದಾರರ ಮೆರವಣಿಗೆಯು ನಗರದ ಸರ್ಕಾರಿ ಆಸ್ಪತ್ರೆಯ ಬಳಿಯ ಅಂಬೇಡ್ಕರ್ ಪ್ರತಿಮೆಯಿಂದ ತಹಸೀಲ್ದಾರ್ ಕಚೇರಿವರೆಗೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘಟನೆ ನೇತೃತ್ವದಲ್ಲಿ ನಡೆಯಲಿದೆ ಎಂದು ಎರಡೂ ಸಂಘಟನೆಗಳ ಪದಾಧಿಕಾರಿಗಳು ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ತಾಲೂಕಿನ ಬಗರ್ ಹುಕುಂ ಸಾಗುವಳಿದಾರರು ಫಾರಂ ನಂ. 50, 53 ಹಾಗೂ 57 ರಲ್ಲಿ ಅರ್ಜಿ ಸಲ್ಲಿಸಿದ್ದು, ಹಲವು ದಶಕಗಳಿಂದಲೂ ಭೂಮಿಯ ಮಂಜೂರಾತಿಗಾಗಿ ಕಾಯುತ್ತಿದ್ದಾರೆ. ಆದರೆ ಸರ್ಕಾರಗಳು ಬಡವರ ಭೂಮಿ ಹಕ್ಕಿನ ಸಮಸ್ಯೆಯನ್ನು ಆದ್ಯತೆ ಮಾಡಿಕೊಳ್ಳದೆ ಕಂಪನಿಗಳ, ಬಂಡವಾಳಶಾಹಿಗಳ ಪರವಾಗಿ ಇರುವುದರಿಂದ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರಾತಿ ನೀಡುತ್ತಿಲ್ಲ. ಭೂಮಿ ಮಂಜೂರಾತಿಗಾಗಿ ಕಾನೂನು ನೆಪ ಹೇಳಿ ನಿರಾಕರಿಸಲಾಗುತ್ತಿದೆ. ಆದರೆ ಸರ್ಕಾರಗಳು ಕಂಪನಿಗಳಿಗೆ, ಬಂಡವಾಳಶಾಹಿಗಳಿಗೆ ಭೂಮಿ ನೀಡುವುದಕ್ಕೆ ಯಾವುದೇ ಕಾನೂನು ಪಾಲಿಸುತ್ತಿಲ್ಲ. ಬಡವರಿಗೆ ಕಾನೂನು ತೊಡಕಿನ ನೆಪ ಹೇಳುತ್ತಿದೆ. ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ನೀಡಲು ತೊಡಕಾಗಿರುವ ಕಂದಾಯ ನಿಯಮಗಳನ್ನು ಸಡಿಲಿಸಿ ಬಡವರಿಗೆ ಭೂಮಿ ಮಂಜೂರಾತಿ ನೀಡಬೇಕು.
ಸರ್ಕಾರಗಳು, ಅಧಿಕಾರಿಗಳು ಬಡವರ ಬಗ್ಗೆ ಇರುವ ನಿರ್ಲಕ್ಷ್ಯವನ್ನು ಬಿಟ್ಟು ಕೂಡಲೇ ತಮ್ಮ ಧೋರಣೆಯನ್ನು ಬದಲಾಯಿಸಿಕೊಂಡು ಫಾರಂ ನಂ 50, 53 ಹಾಗೂ 57ರಲ್ಲಿ ಸಲ್ಲಿಸಿರುವ ಅರ್ಜಿದಾರರಿಗೆ ಭೂಮಿ ಮಂಜೂರಾತಿ ನೀಡಲು ಕ್ರಮ ತೆಗೆದುಕೊಳ್ಳಬೇಕು. ರಾಜ್ಯದ ಬಗರ್ ಹುಕುಂ ಸಮಸ್ಯೆಯನ್ನು ಬಗೆ ಹರಿಸುವ ಭಾಗವಾಗಿ ಒನ್ ಟೈಮ್ ಸೆಟಲ್ ಮೆಂಟ್ ಜಾರಿ ಮಾಡಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಹಕ್ಕು ಪತ್ರ ನೀಡಬೇಕು. ಅರ್ಜಿಗಳನ್ನು ತಿರಸ್ಕರಿಸಬಾರದು. ತಿರಸ್ಕರಿಸಿರುವ ಅರ್ಜಿಗಳನ್ನು ಪುನರ್ ಪರಿಶಿಲಿಸಬೇಕು.ನಿವೇಶನ ರಹಿತರಿಗೆ ನಿವೇಶನ, ಮನೆ ಇಲ್ಲದವರಿಗೆ ಮನೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ,ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಹೊರಕೇರಪ್ಪ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಮುಖಂಡ ಸತ್ಯಪ್ಪ ಮಲ್ಲಾಪುರ, ಹನುಮಂತಣ್ಣ ಗೋನೂರು, ರಾಜಪ್ಪ, ಆಂಜನಪ್ಪ, ಹಿರಿಯೂರು ತಾಲೂಕು ಸಮಿತಿಯ ತಿಪ್ಪೇಸ್ವಾಮಿ, ಪಾಂಡುರಂಗಪ್ಪ, ಮಹೇಶ್, ಎಚ್.ನರಸಿಂಹಮೂರ್ತಿ, ಕಾಂತರಾಜ್, ಕರಿಯಪ್ಪ, ರಾಮಾನಾಯ್ಕ ಮುಂತಾದವರು ಹಾಜರಿದ್ದರು.