ಕನ್ನಡಪ್ರಭ ವಾರ್ತೆ ಧಾರವಾಡ ಮಲಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಮತ್ತು ರೈತರ ಹಲವಾರು ಬೇಡಿಕೆಗಳನ್ನಿಟ್ಟುಕೊಂಡು ಶುಕ್ರವಾರ ಪಕ್ಷಾತೀತ ಹೋರಾಟ ಸಮಿತಿ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕು ವತಿಯಿಂದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಲಾಯಿತು. ಮಲಪ್ರಭಾ ಬಲದಂಡೆ ಕಾಲುವೆ ನೀರನ್ನು ಇನ್ನೂ ಎರಡ್ಮೂರು ದಿವಸಗಳಲ್ಲಿ ಕಾಲುವೆಗೆ ಹಾಯಿಸಬೇಕು ಮತ್ತು ಮುಂಗಾರು ಬೆಳೆಗಳು ಈಗಾಗಲೇ ಬರಗಾಲದಿಂದ ನಾಶವಾಗಿದ್ದು, ಹಿಂಗಾರು ಬೆಳೆಗಳಾದ ಕಡಲೆ, ಗೋದಿ, ಜೋಳ ಇವುಗಳಿಗೆ ಬೇಗನೆ ನೀರು ಹರಿಸಿದರೆ ಸ್ವಲ್ಪವಾದರೂ ರೈತಾಪಿ ವರ್ಗಕ್ಕೆ ಬದುಕಲು ಅನುಕೂಲವಾಗುತ್ತದೆ. ಏಳು ಗಂಟೆ ನಿರಂತರ ತ್ರಿಫೇಸ್ ವಿದ್ಯುತ್ ನೀಡಲು, ಬೆಳೆವಿಮೆ ಹಣ ಬಿಡುಗಡೆ ಮಾಡಬೇಕು ಮತ್ತು ರೈತರ ಸಾಲದ ಮರುಪಾವತಿ ಮಾಡಲು ಒತ್ತಾಯಿಸಬಾರದು ಎಂದು ಆಗ್ರಹಿಸಲಾಯಿತು. ಹೋರಾಟ ಸಮಿತಿ ಅಧ್ಯಕ್ಷ ಅಂದಾನಯ್ಯ ಹಿರೇಮಠ ನೇತೃತ್ವ ವಹಿಸಿದ್ದರು. ಮುಖಂಡರಾದ ಬಸವರಾಜ ಕುಂದಗೋಳಮಠ, ಶರಣಪ್ಪಗೌಡ ದಾನಪ್ಪಗೌಡ, ಶಂಕರಗೌಡ ರಾಯನಗೌಡ, ದೇವರಾಜ ದಾಡಿಬಾವಿ, ಮಹಾಂತೇಶ ಕಲಾಲ, ಪ್ರಕಾಶ ಅಂಗಡಿ, ಮಹೇಶ ತೊಗಲಂಗಿ, ಎನ್.ಬಿ. ಸವದಿ, ಗುರುಸಿದ್ದಪ್ಪ ಮೆಣಸಿನಕಾಯಿ, ಶೇಖಣ್ಣ ಬತ್ತನ್ನವರ, ಮಂಜುನಾಥ ಹೆಬಸೂರ, ಬಸನಗೌಡ ಮರಿಗೌಡ ಇದ್ದರು.