ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೃಷಿ ಇಲಾಖೆಯಿಂದ ನಗರದ ಕೃಷಿ ತಂತ್ರಜ್ಞರ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ಧ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತಕ್ಕೆ ತನ್ನದೇ ಆದ ಅಚ್ಚಳಿಯದ ಇತಿಹಾಸ ಇದೆ. ಭಾರತ ಅವಿನಾಶಿ ದೇಶ. ಈ ದೇಶಕ್ಕೆ ಹಿಂದೆಯೂ ಏನೂ ಆಗಿಲ್ಲ, ಮುಂದೆಯೂ ಏನೂ ಆಗುವುದಿಲ್ಲ. ವಿನಾಶ ಅನ್ನುವುದೇ ಇಲ್ಲ. ಕೃಷಿಯಲ್ಲಿನ ವೈವಿಧ್ಯತೆಗಳ ಇಂತಹದ್ದೊಂದು ವಾತಾವರಣ ಸೃಷ್ಟಿಸಿವೆ. ರೈತರು ಸರ್ಕಾರದ ಸೌಲಭ್ಯ ಸದ್ಭಳಕೆ ಮಾಡಿಕೊಂಡು ಸುಸ್ಥಿರ ಕೃಷಿ ಮಾಡಬೇಕು ಎಂದರು.
ದೇಶದಲ್ಲಿ ಪ್ರತಿ ವರ್ಷವೂ ಡಿ. 23ನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ. ಭಾರತದ 5ನೇ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಸ್ಮರಣಾರ್ಥ ಅವರ ಜನ್ಮ ದಿನವನ್ನು ರೈತ ದಿನಾಚರಣೆಯಾಗಿ ನಡೆಸಿಕೊಂಡು ಬರಲಾಗಿದೆ. ಈ ವರ್ಷ ಸುಸ್ಥಿರ ಹಾಗೂ ಚೇತರಿಕೆಯತ್ತ ಆಹಾರ, ಸುರಕ್ಷತೆಗಾಗಿ ಕ್ರಿಯಾಶೀಲ ಪರಿಹಾರ ಎಂಬ ಧ್ಯೇಯ ವಾಕ್ಯದೊಂದಿಗೆ ರೈತ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರತಿ ಹಳ್ಳಿಯಲ್ಲೂ ಈ ರೀತಿಯ ಕಾರ್ಯಕ್ರಮ ಆಯೋಜಿಸಿದರೆ ರೈತ ದಿನಾಚರಣೆಗೆ ನಿಜವಾದ ಅರ್ಥ ಬರಲಿದೆ ಎಂದು ಹೇಳಿದರು.ಭರತ ಖಂಡ ಮತ್ತು ಸುತ್ತಮುತ್ತಲಿನ ಮಧ್ಯ ಪ್ರಾಚ್ಯದ ರಾಷ್ಟ್ರಗಳವರೆಗೂ ಬಹಳಷ್ಟು ಪ್ರಾಚೀನ ಸಂಸ್ಕೃತಿ, ನಾಗರಿಕತೆ, ಜ್ಞಾನ ಹೊಂದಿರುವ ದೇಶ ನಮ್ಮದು. ಇತರೆ ರಾಷ್ಟ್ರಗಳಿಗೆ ಜ್ಞಾನ, ಅಕ್ಷರ ದಾಸೋಹ, ಜೀವ ವೈವಿಧ್ಯತೆ ಕೊಟ್ಟಿರುವ ದೇಶ ನಮ್ಮದಾಗಿದೆ. ಜಗತ್ತಿನ ಶೇ.8ರಷ್ಟು ಜೈವಿಕ ವೈವಿಧ್ಯತೆ ಹೊಂದಿರುವ ದೇಶ ಭಾರತ. ಈ ಹಿನ್ನೆಲೆ ಇಡೀ ಜಗತ್ತಿನಲ್ಲೇ ಭರತ ಖಂಡ ಹಾಗೂ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಮಾತ್ರ ಮೊದಲು ಕೃಷಿ ಪ್ರಾರಂಭವಾಗಿದೆ ಎಂದು ಹೇಳಿದರು.
ಇದೇ ವೇಳೆ ಕೃಷಿ ಭಾಗ್ಯ ಯೋಜನೆ ಮರು ಜಾರಿ ಕುರಿತ ಕರಪತ್ರ ಬಿಡುಗಡೆ ಮಾಡಲಾಯಿತು.
ಹಿರಿಯೂರಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಓ.ಕುಮಾರ, ರೈತ ಸಂಘದ ಮುಖಂಡ ಕೆ.ಸಿ ಹೊರಕೇರಪ್ಪ, ಡಿಎಸ್ ಹಳ್ಳಿ ಮಲ್ಲಿಕಾರ್ಜುನ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಸಿದ್ದಪ್ಪ, ತುರುವನೂರಿನ ಮಂಜುನಾಥ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ಎಸ್.ವಿ.ನಾಗರಾಜ್, ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಜಿ.ಸಿ.ರಂಗಸ್ವಾಮಿ, ಶಿರಸಿ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ.ಎಚ್.ಶಿವಣ್ಣ, ಕೃಷಿ ಉಪನಿರ್ದೇಶಕ ಶಿವಕುಮಾರ್, ಸಹಾಯಕ ಕೃಷಿ ನಿರ್ದೇಶಕ ರಜನಿಕಾಂತ್, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ವೀರಭದ್ರರೆಡ್ಡಿ, ಮತ್ತಿತರರು ಉಪಸ್ಥಿತರಿದ್ದರು.