ಮುಂಗಾರು ಹಂಗಾಮಿನ ರಾಗಿ ಬಿತ್ತನೆಗೆ ರೈತರು ಸಜ್ಜು

KannadaprabhaNewsNetwork |  
Published : Aug 12, 2025, 12:30 AM IST
ಪೋಟೋ 1 : ನೆಲಮಂಗಲ ತಾಲ್ಲೂಕಿನಲ್ಲಿ ಟ್ರಾಕ್ಟರ್ ನಲ್ಲಿ ರಾಗಿ ಬಿತ್ತನೆ ಮಾಡುತ್ತಿರುವುದು | Kannada Prabha

ಸಾರಾಂಶ

ದಾಬಸ್‍ಪೇಟೆ: ಕಳೆದ ಒಂದು ವಾರದಿಂದ ತಾಲೂಕಾದ್ಯಂತ ಉತ್ತಮ ಮಳೆಯಾಗುತ್ತಿದೆ. ರೈತರ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ. ತಿಂಗಳಿನಿಂದ ಆಗಾಗ ಬರುತ್ತಿರುವ ಮಳೆಯಿಂದಾಗಿ ಜಮೀನು ಕೃಷಿ ಚಟುವಟಿಕೆಗಳಿಗೆ ಹದಗೊಂಡಿದೆ. ರೈತರ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ದಾಬಸ್‍ಪೇಟೆ: ಕಳೆದ ಒಂದು ವಾರದಿಂದ ತಾಲೂಕಾದ್ಯಂತ ಉತ್ತಮ ಮಳೆಯಾಗುತ್ತಿದೆ. ರೈತರ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ. ತಿಂಗಳಿನಿಂದ ಆಗಾಗ ಬರುತ್ತಿರುವ ಮಳೆಯಿಂದಾಗಿ ಜಮೀನು ಕೃಷಿ ಚಟುವಟಿಕೆಗಳಿಗೆ ಹದಗೊಂಡಿದೆ. ರೈತರ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಇತ್ತೀಚೆಗಿನ ಸಾಧಾರಣ ಮಳೆಗೆ ರೈತರು ತಮ್ಮ ಜಮೀನುಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ಉಳುಮೆ ಮಾಡಿಸಿ ಹದನುಗೊಳಿಸಿಕೊಂಡಿದ್ದರು. ಪ್ರಸ್ತುತ ಧಾರಾಕಾರ ಮಳೆ ಸುರಿದು ಇದೀಗಷ್ಟೇ ಬಿಡುವು ಕೊಟ್ಟಿದೆ. ರೈತರು ಬಿತ್ತನೆ ತಯಾರಿ ನಡೆಸಿದ್ದಾರೆ. ಜುಲೈ ಕೊನೆಯ ವಾರದಿಂದ ಆರಂಭಗೊಳ್ಳುವ ರಾಗಿ ಬಿತ್ತನೆ ಕಾರ್ಯ, ಆಗಸ್ಟ್ ತಿಂಗಳ ಕೊನೆಯವರೆಗೂ ನಡೆಯಲಿದೆ. ಕೃಷಿ ಇಲಾಖೆ ಮಳೆಯಾಶ್ರಿತ 16700 ಹೆಕ್ಟೇರ್, ನೀರಾವರಿ 30 ಹೆಕ್ಟೇರ್ ಸೇರಿ ಒಟ್ಟು 16730 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯ ಗುರಿ ಹೊಂದಿದೆ.

ಏಕದಳ ಹಾಗೂ ದ್ವಿದಳ ಧಾನ್ಯ : ರಾಗಿ ಹೊರತುಪಡಿಸಿ ಏಕದಳ ಧಾನ್ಯಗಳಾದ ಭತ್ತ 44 ಹೆಕ್ಟೇರ್, ಮುಸುಕಿನ ಜೋಳ 1180 ಹೆಕ್ಟೇರ್ ಸೇರಿ 1229 ಹೆಕ್ಟೇರ್ ಪ್ರದೇಶದಲ್ಲಿ, ದ್ವಿದಳ ಧಾನ್ಯಗಳಾದ ತೊಗರಿ 300 ಹೆಕ್ಟೇರ್, ಅಲಸಂದೆ 178 ಹೆಕ್ಟೇರ್ ಅವರೆ 415 ಹೆಕ್ಟೇರ್‌ ಒಟ್ಟು 895 ಹೆಕ್ಟೇರ್‌ಗಳಲ್ಲಿ ಹಾಗೂ ಎಣ್ಣೆ ಕಾಳುಗಳಾದ ಹರಳು 60 ಹೆಕ್ಟೇರ್‌, ಸಾಸುವೆ 26 ಹೆಕ್ಟೇರ್‌, ಹುಚ್ಚೆಳ್ಳು 15 ಹೆಕ್ಟೇರ್ ನೆಲಗಡಲೆ 30 ಹೆಕ್ಟೇರ್ ಒಟ್ಟು 131 ಹೆಕ್ಟೇರ್ ಗುರಿ ಹೊಂದಿದೆ.

ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆಯಿಲ್ಲ: ಅಧಿಕ ಇಳುವರಿ ಕೊಡುವ ಹಾಗೂ ಗುಣಮಟ್ಟದ ರಾಗಿ ಬಿತ್ತನೆ ಬೀಜ ಕೃಷಿ ಇಲಾಖೆಯಲ್ಲಿ ಲಭ್ಯವಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಎಂ.ಆರ್-6, ಜಿ.ಪಿ.ಯು-28 , ಎಂ.ಎಲ್.365 ರಾಗಿಯ ತಳಿಗಳು ದಾಸ್ತಾನಿದ್ದು, ರಿಯಾಯಿತಿ ದರದಲ್ಲಿ ಎಲ್ಲ ರೈತರಿಗೂ ಲಭ್ಯವಿದೆ. ರಾಷ್ಟ್ರೀಯ ಬೀಜ ನಿಗಮ ಹಾಗೂ ರಾಜ್ಯ ಬೀಜ ನಿಗಮಗಳಿಂದ ಬಿತ್ತನೆ ಬೀಜಗಳು ಪೂರೈಕೆಯಾಗುತ್ತಿದ್ದು, ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆಯಿಲ್ಲ. ರೈತರು ಆಯಾ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದು ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಆ.16ರೊಳಗೆ ವಿಮೆ ಮಾಡಿಸಿ:

ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಡಿಯಲ್ಲಿ ಬೆಳೆ ವಿಮೆ ಇದ್ದು ಓರಿಯಂಟಲ್ ಜನರಲ್ ಇನ್ಶರೆನ್ಸ್ ಕಂಪನಿ ಮೂಲಕ ಹೋಬಳಿ ಅಥವಾ ಗ್ರಾಮ ಪಂಚಾಯಿತಿಗಳಲ್ಲಿ ಬೆಳೆ ವಿಮೆ ಕಂತು ಪಾವತಿಸಬೇಕು. ಒಂದು ಎಕರೆಗೆ 344 ಕಂತನ್ನು ಆಗಸ್ಟ್ 16ರೊಳಗೆ ಪಾವತಿಸಿ ವಿಮೆ ಮಾಡಿಸುವಂತೆ ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಕೋಟ್ ..............

ಇಂದು ಕೃಷಿ ಲಾಭದಾಯಕವಾಗಿ ಉಳಿದಿಲ್ಲ. ಬೆಳೆದರೂ ಕಷ್ಟ, ಬೆಳೆಯದಿದ್ದರೂ ಕಷ್ಟ ಎನ್ನುವಂತಾಗಿದೆ. ಬೆಳೆ ಚೆನ್ನಾಗಿ ಬೆಳೆದರೆ ಬೆಲೆ ಕುಸಿತದಿಂದ ರೈತರು ಜರ್ಝರಿತರಾಗುತ್ತಿದ್ದಾರೆ. ಹಾಗಾಗಿ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ನೀಡಬೇಕು. ವಿಮಾ ಸೌಲಭ್ಯವನ್ನು ಹೆಚ್ಚಿಸಬೇಕು.

-ಮಲ್ಲಿಕಾರ್ಜುನ್, ರೈತ ಹೊನ್ನೇನಹಳ್ಳಿ

ಕೋಟ್.................

ರೈತರಿಗೆ ಕೃಷಿ ಇಲಾಖೆಯಲ್ಲಿ ಲಭ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ರೈತರು ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಪಡೆಯಬಹುದು. ರೈತರಿಗೆ ಕೃಷಿ ಇಲಾಖೆಯಿಂದ ಮುಂಗಾರು ಬೆಳೆಯ ಅಗತ್ಯ ಮಾಹಿತಿ ಮನೀಡಲಾಗುವುದು.

-ಸಿದ್ದಲಿಂಗಯ್ಯ, ಸಹಾಯಕ ಕೃಷಿ ನಿರ್ದೇಶಕರು, ನೆಲಮಂಗಲ ತಾಲೂಕು

ಪೋಟೋ 1 : ನೆಲಮಂಗಲ ತಾಲೂಕಿನಲ್ಲಿ ಟ್ರ್ಯಾಕ್ಟರ್ ನಲ್ಲಿ ರಾಗಿ ಬಿತ್ತನೆ ಮಾಡುತ್ತಿರುವುದು.

ಪೋಟೋ 2 : ನೆಲಮಂಗಲ ತಾಲೂಕಿನ ಕೆಲವೆಡೆ ಬಿತ್ತನೆ ಮಾಡಿರುವ ರಾಗಿ ಪೈರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌