ಬೇಲೂರಲ್ಲಿ ಕಾಡಾನೆ ದಾಳಿ: ಕಾಫಿ ತೋಟ ನಾಶ: ರೈತರು ಕಂಗಾಲು

KannadaprabhaNewsNetwork | Published : Jan 26, 2024 1:46 AM

ಸಾರಾಂಶ

ಮಲೆನಾಡು ಭಾಗದಲ್ಲಿ ಸೇರಿದಂತೆ ಬೇಲೂರಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿಯಿಂದಾಗಿ ಅಪಾರ ಪ್ರಮಾಣದ ಕಾಫಿ ಸೇರಿದಂತೆ ಇತರೆ ಮಳೆಗಳು ನಾಶವಾಗುತ್ತಿದ್ದು ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ.

ಕುಯ್ಲಿಗೆ ಬಂದ 1 ಎಕರೆ ಬೆಳೆ ಹಾನಿಕನ್ನಡಪ್ರಭ ವಾರ್ತೆ ಬೇಲೂರು

ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿಯಿಂದಾಗಿ ಅಪಾರ ಪ್ರಮಾಣದ ಕಾಫಿ ಸೇರಿದಂತೆ ಇತರೆ ಮಳೆಗಳು ನಾಶವಾಗುತ್ತಿದ್ದು ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ.

ತಾಲೂಕಿನ ಶಿರಗೂರು ಗ್ರಾಮದ ಅಕ್ಷತಾ ಎಂಬುವರಿಗೆ ಸೇರಿದ ಕಾಫಿ ತೋಟಕ್ಕೆ ಸುಮಾರು ೧೦ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಳಿ ಮಾಡುವ ಮೂಲಕ ಕುಯ್ಲಿಗೆ ಬಂದ ಸುಮಾರು ೧ ಎಕರೆ ಕಾಫಿ ಬೆಳೆಯನ್ನು ತುಳಿದು ಸಂಪೂರ್ಣ ನಾಶ ಮಾಡಿದೆ. ಕೆಲ ತಿಂಗಳ ಹಿಂದೆಯೂ ಇವರ ತೋಟದಲ್ಲಿ ಸಂಪೂರ್ಣ ಬಾಳೆ ತೋಟ ನಾಶ ಮಾಡಿದ್ದು ಮತ್ತೆ ದಾಳಿ ಮಾಡುವ ಮೂಲಕ ಸಂಪೂರ್ಣ ಹಾನಿ ಮಾಡಿದೆ ಎಂದು ತೋಟದ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಬೆಳೆಗಾರರಾದ ಅಕ್ಷತಾ, ಬರಗಾಲದಿಂದ ತತ್ತರಿಸಿ ಹೋಗುತ್ತಿದ್ದು ಇನ್ನೊಂದು ಕಡೆ ಕಾಡಾನೆಗಳ ಹಾವಳಿಯಿಂದ ರೋಸಿ ಹೋಗಿದ್ದೇವೆ. ಕಷ್ಟಪಟ್ಟು ಬೆಳೆ ಮಾಡಿದ್ದೇವೆ. ಬೆಳೆಯನ್ನು ಕುಯ್ಯುವ ಮುಂಚೆಯೇ ಸುಮಾರು ೧ ಎಕರೆ ಕಾಫಿ ತೋಟ ನಾಶ ಮಾಡಿರುವುದು ನಿಜಕ್ಕೂ ಬೇಸರವಾಗಿದೆ. ಇನ್ನೂ ಅರಣ್ಯ ಇಲಾಖೆಯವರು ಬಂದು ನೋಡಿಕೊಂಡು ಹೊಗುತ್ತಿದ್ದು ಇದು ಎರಡನೇ ಬಾರಿ ಇಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಕೇವಲ ಆನೆಗಳನ್ನು ಹಿಡಿದು ಕಣ್ಣು ಒರೆಸುವ ಬದಲು ನಮಗೆ ಶಾಶ್ವತ ಪರಿಹಾರ ಕೊಡಿ. ಇಲ್ಲದಿದ್ದರೆ ನಮ್ಮ ಗ್ರಾಮದಲ್ಲಿರುವವನ್ನು ಇಲ್ಲಿಂದ ಸ್ಥಳಾಂತರ ಮಾಡಿ ಎಂದು ಕಣ್ಣೀರು ಹಾಕಿದರು. ನಮಗೆ ಆನೆಗಳ ದಾಳಿಯಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಆದಷ್ಟು ಬೇಗ ಆನೆಗಳನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಸುಮಾರು ೨೦ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಚಿಕ್ಕಬಿಕ್ಕೋಡು ಗ್ರಾಮದಲ್ಲಿ ಓಡಾಡುವಂತ ದೃಶ್ಯ ಕಂಡು ಬಂದಿತು.

ಕಾಡಾನೆಗಳ ಉಪಟಳಕ್ಕೆ ಅಪಾರ ಪ್ರಮಾಣದ ಕಾಫಿ ಬೆಳೆ ಸಂಪೂರ್ಣ ನಾಶವಾಗಿರುವುದು.

Share this article