ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ: ಕೇಂದ್ರ ಸರ್ಕಾರದ ನೆರವಿನಲ್ಲಿ ನ್ಯಾಷನಲ್ ಸೀಡ್ಸ್ ಕಾರ್ಪೋರೇಷನ್ ಕಂಪನಿ (ಎನ್ಎಸ್ಸಿ) ವತಿಯಿಂದ ಪ್ರಾಯೋಗಿಕವಾಗಿ ಮೊದಲ ಬಾರಿಗೆ ತಾಲೂಕಿನಲ್ಲಿ ನೀರಾವರಿ ಹೊಂದಿರುವ ರೈತರಿಗೆ ಉಚಿತವಾಗಿ ಶೇಂಗಾ ಬಿತ್ತನೆ ಬೀಜವನ್ನು ವಿತರಿಸಲಾಗುತ್ತಿದ್ದು, ಈ ಕುರಿತಂತೆ ಕೃಷಿ ಇಲಾಖೆ ಅಧಿಕಾರಿ ಬಳಿ ಯಾವುದೇ ಸಮರ್ಪಕ ಮಾಹಿತಿ ಇಲ್ಲದೇ ಇರುವುದರಿಂದ ಸೋಮವಾರ ರೈತ ಸಂಪರ್ಕ ಕೇಂದ್ರದ ಎದುರು ನೂರಾರು ರೈತರು ಪರದಾಡುವಂತಾಯಿತು.ತಾಲೂಕಿನಲ್ಲಿ ಕೆಂಪು ಮಣ್ಣಿನ ಭೂಮಿ ಇದ್ದು, ಶೇಂಗಾ ಬಿತ್ತನೆಗೆ ಅನುಕೂಲಕರವಾಗಿದೆ. ನೀರಾವರಿ ಸೌಲಭ್ಯವೂ ಇದೆ. ಮೊದಲು ತಲಾ ಒಬ್ಬ ರೈತರಿಗೆ ೮೦ ಕೆಜಿ ಶೇಂಗಾ ವಿತರಿಸಿದ್ದು, ರೈತರ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಒಬ್ಬ ರೈತರಿಗೆ ೨೦ ಕೆಜಿ ಶೇಂಗಾ ವಿತರಣೆಗೆ ಮುಂದಾಗಿರುವುದು ಯಾವ ರೀತಿ ಹೇಗೆ ವಿತರಿಸುತ್ತಿದ್ದಾರೆ ಎಂಬುದು ನಿಗೂಢವಾಗಿದೆ.ಪೊಲೀಸ್ ಸರ್ಪಗಾವಲು: ಶೇಂಗಾ ಬೀಜ ಪಡೆಯಲು ಸೋಮವಾರ ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿದ್ದು, ಶೇಂಗಾ ಬೀಜ ಪಡೆಯಲು ರೈತರು ಹರಸಾಹಸ ಪಡುವಂತಾಗಿದೆ. ಬೆಳಗ್ಗೆ ೮ ಗಂಟೆಯಿಂದಲೇ ರೈತ ಸಂಪರ್ಕ ಕೇಂದ್ರದ ಮುಂದೆ ಕ್ಯೂ ನಿಂತರೂ ಶೇಂಗಾ ಕಾಯಿ ಮಾತ್ರ ಸಿಗುತ್ತಿಲ್ಲ. ಇದು ಸಹಜವಾಗಿಯೇ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೃಷಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಮತ್ತೊಂದೆಡೆ ಪೊಲೀಸರ ಸರ್ಪಗಾವಲಿನಲ್ಲಿ ಉಚಿತ ಶೇಂಗಾ ಬೀಜಕ್ಕೆ ಪರದಾಟ ಆರಂಭವಾಗಿದೆ. ಯಾವ ರೈತರಿಗೆ ಎಷ್ಟು ಕೇಜಿ ಶೇಂಗಾ ಬೀಜ ಕೊಡಬೇಕು. ಎಷ್ಟು ಎಕರೆ ಪ್ರದೇಶಕ್ಕೆ ಎಷ್ಟು ಹಂಚಿಕೆ ಮಾಡಬೇಕು. ರೈತರಿಂದ ನೀರಾವರಿ ಹೊಂದಿರುವ ಬಗ್ಗೆ ಸೂಕ್ತ ದಾಖಲೆ ಪಡೆಯದೇ ಬೇಕಾಬಿಟ್ಟಿ ಹಂಚಿಕೆಗೆ ಮುಂದಾಗಿದ್ದು, ಕೆಲವು ರೈತರಿಗೆ ಮಾತ್ರ ಉಚಿತ ಶೇಂಗಾ ಬೀಜ ದೊರಕಿದೆ. ಇನ್ನೂ ಸಾವಿರಾರು ಸಂಖ್ಯೆಯ ರೈತರು ಕೃಷಿ ಇಲಾಖೆ ಮತ್ತು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ನಡೆ ಬಗ್ಗೆ ಹಿಡಿಶಾಪ ಹಾಕುತ್ತಿದ್ದಾರೆ.