ಕಳಪೆ ಮೆಕ್ಕೆಜೋಳ ಬಿತ್ತನೆ ಬೀಜ ಮಾರಾಟ ಖಂಡಿಸಿ ರೈತರ ಪ್ರತಿಭಟನೆ

KannadaprabhaNewsNetwork | Published : Jun 17, 2025 1:28 AM

ಪ್ರಸಕ್ತ ವರ್ಷ ವಿವಿಧ ಜಿಲ್ಲೆಯ ರೈತರು ಈಗಾಗಲೇ ಇಲ್ಲಿಂದ ಮೆಕ್ಕೆಜೋಳ ಬೀಜ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಬೀಜ ಬಿತ್ತಿ ಹತ್ತಾರು ದಿನ ಕಳೆದರೂ ಮೊಳಕೆಯೊಡೆದಿಲ್ಲ.

ರಾಣಿಬೆನ್ನೂರು: ಮೆಕ್ಕೆಜೋಳ ಬಿತ್ತನೆ ಬೀಜ ಕಳಪೆಯಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತರು ನಗರದ ಸೀಡ್ಸ್ ಕಂಪನಿಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಏಷ್ಯಾ ಖಂಡದಲ್ಲಿಯೇ ಬೀಜೋತ್ಪಾದನೆಯಲ್ಲಿ ಹೆಸರುವಾಸಿಯಾದ ತಾಲೂಕಿನಲ್ಲಿ ಕಳಪೆ ಬೀಜದ ಜಾಲ ವ್ಯಾಪಕವಾಗಿ ಹರಡಿಕೊಂಡಿದೆ. ಗುಣಮಟ್ಟದ ಬೀಜ ಎಂದು ನಂಬಿಕೊಂಡು ಹೊರಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ವಿಜಯನಗರ ಮತ್ತು ದಾವಣಗೆರೆ, ಶಿವಮೊಗ್ಗ, ಗದಗನಿಂದ ರೈತರು ಬರುತ್ತಾರೆ. ಆದರೆ ಕಳಪೆ ಬಿತ್ತನೆ ಬೀಜದಿಂದ ರೈತರ ಬದುಕು ಹಾಳಾಗುತ್ತಿದೆ ಎಂದು ಆರೋಪಿಸಿದರು.

ಪ್ರಸಕ್ತ ವರ್ಷ ವಿವಿಧ ಜಿಲ್ಲೆಯ ರೈತರು ಈಗಾಗಲೇ ಇಲ್ಲಿಂದ ಮೆಕ್ಕೆಜೋಳ ಬೀಜ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಬೀಜ ಬಿತ್ತಿ ಹತ್ತಾರು ದಿನ ಕಳೆದರೂ ಮೊಳಕೆಯೊಡೆದಿಲ್ಲ. ಭೂಮಿಯಲ್ಲಿ ಸಾಕಷ್ಟು ತೇವಾಂಶವಿದ್ದರೂ ಬಿತ್ತನೆ ಬೀಜ ಇನ್ನೂ ಮೊಳಕೆ ಬಂದಿಲ್ಲ. ಹೀಗಾಗಿ ರೈತರಲ್ಲಿ ಆಂತಕ ಎದುರಾಗುವ ಜತೆಗೆ ಮೋಸವಾಗಿದೆ. ಕೂಡಲೇ ಅಧಿಕಾರಿಗಳು ಬೀಜ ವಿತರಿಸಿದ ಅಂಗಡಿ ಮಾಲೀಕರ ಮೇಲೆ ಕ್ರಮ ಕೈಗೊಳ್ಳುವ ಜತೆಗೆ ರೈತರಿಗೆ ಪರಿಹಾರ ಒದಗಿಬೇಕು ಎಂದರು.

ಕೂಡಲೇ ಸ್ಥಳಕ್ಕೆ ಆಗಮಿಸಿದ ಸಹಾಯಕ ಕೃಷಿ ನಿರ್ದೇಶಕ ಶಾಂತಮಣಿ ಜಿ. ಮಾತನಾಡಿ, ರೈತರು ಖರೀದಿಸಿದ ಮೆಕ್ಕೆಜೋಳ ಬಿತ್ತನೆ ಬೀಜಗಳು ಮೊಳಕೆ ಬಾರದ ಕಾರಣ, ರೈತರ ದೂರಿನ ಮೇರೆಗೆ ನಗರದ ನಿಸರ್ಗ ಸೀಡ್ಸ್ ಪ್ರೈವೇಟ್ ಲಿಮಿಟೆಡ್, ನಿಸರ್ಗ ಸೀಡ್ಸ್ ಸೆಂಟರ್, ಮರುಳಸಿದ್ದೇಶ್ವರ ಸೀಡ್ಸ್ ಸೆಂಟರ್ ಮತ್ತು ಶಿವಂ ಸೀಡ್ಸ್ ಸೆಂಟರ್‌ಗಳ ಬೀಜ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ಮಾರಾಟ ಮಳಿಗೆ ಜಪ್ತಿ ಮಾಡಲಾಗಿದೆ ಎಂದರು.

ರೈತರ ಪ್ರತಿಭಟನೆಯಲ್ಲಿ ನೂರಾರು ರೈತರು ಪಾಲ್ಗೊಂಡಿದ್ದರು. ಅಧಿಕಾರಿಗಳು ಬಿತ್ತನೆ ಬೀಜ ಮಾರಾಟ ಮಳಿಗೆ ಜಪ್ತಿ ಮಾಡಿದ್ದರಿಂದ ರೈತರು ಪ್ರತಿಭಟನೆ ಕೈಬಿಟ್ಟರು. ಬಿತ್ತನೆ ಬೀಜ ಮಾರಾಟದ ಮಳಿಗೆಗಳ ಮೇಲೆ ದಾಳಿ ವೇಳೆ ಉಪ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಡಿ.ಕೆ., ಕೃಷಿ ಅಧಿಕಾರಿಗಳಾದ ಬಸವರಾಜ ಎಫ್.ಎಂ, ಅರವಿಂದ ಎಂ. ಉಪಸ್ಥಿತರಿದ್ದರು.ರಾಣಿಬೆನ್ನೂರಿನ ಸಮಗ್ರ ಪ್ರಗತಿಗೆ ಶ್ರಮಿಸುವೆ: ಶಾಸಕ ಕೋಳಿವಾಡ

ರಾಣಿಬೆನ್ನೂರು: ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಪಕ್ಷಭೇದ ಮರೆತು ಎಲ್ಲ ಸದಸ್ಯರ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವೆ ಎಂದು ಶಾಸಕ ಪ್ರಕಾಶ ಕೋಳಿವಾಡ ಭರವಸೆ ನೀಡಿದರು.ನಗರದ ವಿವಿಧ ವಾರ್ಡ್‌ಗಳಲ್ಲಿ ಸೋಮವಾರ ಸ್ಥಳೀಯ ನಗರಸಭೆ ವತಿಯಿಂದ ಅಮೃತ ನಗರೋತ್ಥಾನ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಗುತ್ತಿಗೆದಾರರು ನಿಗದಿತ ಕಾಲಮಿತಿಯೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕು. ಕಾಮಗಾರಿ ಸಮಯದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.ನಗರಸಭಾ ಸದಸ್ಯರಾದ ಶೇಖಪ್ಪ ಹೊಸಗೌಡ್ರ, ಗಂಗಮ್ಮ ಹಾವನೂರ, ಮಂಜುಳಾ ಹತ್ತಿ, ಪ್ರಭಾವತಿ ತಿಳವಳ್ಳಿ, ಮಲ್ಲಿಕಾರ್ಜುನ ಅಂಗಡಿ, ಪುಟ್ಟಪ್ಪ ಮರಿಯಮ್ಮನವರ, ಮಲ್ಲೇಶಪ್ಪ ಮದ್ಲೇರ, ಮಾಜಿ ಸದಸ್ಯ ಬಸವರಾಜ ಹುಚ್ಚಗೊಂಡರ, ರಾಜಶೇಖರಯ್ಯ ಸುರಳಿಕೇರಿಮಠ, ಮಧು ಕೋಳಿವಾಡ, ಸಿಡಿಪಿಒ ಪಾರ್ವತಿ ಹುಂಡೇಕಾರ, ಪೌರಾಯುಕ್ತ ಪಕ್ಕೀರಪ್ಪ ಇಂಗಳಗಿ, ಎಇಇ ಮರೀಗೌಡ್ರ, ನಿರ್ಮಲಾ ನಾಯಕ, ಗುಡಿಸಲಮನಿ, ಗುತ್ತಿಗೆದಾರರಾದ ನಿರಂಜನ ಗಡಾದ, ನಾಗಾರ್ಜುನ ಗಡಾದ ಮತ್ತಿತರರಿದ್ದರು.