ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಈ ಹಿಂದೆ ಇದ್ದ ಹಲವು ವೈದ್ಯಕೀಯ ಸೇವೆಗಳನ್ನು ಕಡಿತಗೊಳಿಸಿ, ವಿಭಾಗದ ವೈದ್ಯರನ್ನು ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಸಾಕಷ್ಟು ಸಮಸ್ಯೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸರ್ಕಾರ ಮತ್ತು ಆರೋಗ್ಯ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಕೆ. ರಾಮಲಿಂಗೇಗೌಡ ಮಾತನಾಡಿ, ಪಟ್ಟಣವು ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ. ಈ ಭಾಗದಲ್ಲಿ 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, 5 ಉಪ ಆರೋಗ್ಯ ಕೇಂದ್ರಗಳು ಇವೆ. ಪ್ರತಿನಿತ್ಯ ನೂರಾರು ರೋಗಿಗಳು ಆಸ್ಪತ್ರೆಗೆ ಬರುತ್ತಾರೆ, ತಜ್ಞ ವೈದ್ಯರನ್ನು ವರ್ಗಾವಣೆ ಮಾಡಿ ಆಸ್ಪತ್ರೆಯನ್ನು ಅವನತಿಯತ್ತ ನೂಕುತ್ತಿದೆ ಎಂದು ಕಿಡಿಕಾರಿದರು.ಮದ್ದೂರು- ಮಳವಳ್ಳಿ ಮುಖ್ಯರಸ್ತೆಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ಸರ್ಕಾರ ಮತ್ತು ಕುಟುಂಬ ಆರೋಗ್ಯ ಕಲ್ಯಾಣ ಇಲಾಖೆಯೂ ಹೊಸ ಮಾರ್ಗದರ್ಶಿಯನ್ನು ಹೊರಡಿಸಿ, ಕೆಳದರ್ಜೆಗೆ ಇರಿಸಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಾಡಲು ಹೊರಟಿರುವ ಕ್ರಮವನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಪ್ರಭುಲಿಂಗು, ಮಳವಳ್ಳಿ ತಾಲೂಕು ಘಟಕದ ಅಧ್ಯಕ್ಷ ಬಸವರಾಜು, ರೈತ ಮುಖಂಡರಾದ ಸೊ.ಶಿ.ಪ್ರಕಾಶ್, ತಾಲೂಕು ಕಾರ್ಯದರ್ಶಿ ಕೆ.ಪಿ.ದೊಡ್ಡಿ ಪುಟ್ಟಸ್ವಾಮಿ, ಮಣಿಗೆರೆ ರಾಮಣ್ಣ, ಬೊಪ್ಪಸಮುದ್ರ ಮಲ್ಲೇಶ್, ಹೊಸಹಳ್ಳಿ ಶಿವಣ್ಣ, ಪ್ರಗತಿಪರ ಸಂಘಟನೆಯ ಕರಡಕೆರೆ ಯೋಗೇಶ್, ಬಿಳಿಗೌಡ, ರಾಮಣ್ಣ ಸೇರಿ ರೈತಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.
7ಕೆಎಂಎನ್ ಡಿ13