ಹಗರಿಬೊಮ್ಮನಹಳ್ಳಿ: ಬೆಂಗಳೂರು ಸುತ್ತಮುತ್ತ ಕೃಷಿಕರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಲಾಗತ್ತಿದೆ. ರೈತ ಸಮುದಾಯ ಸುಮ್ಮನಿದ್ದರೆ ರಾಜ್ಯದ ಎಲ್ಲೆಡೆ ರೈತರ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಮೀಟರ್ ಅಳವಡಿಸುವ ಅಪಾಯವಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಎಚ್ಚರಿಸಿದರು.ಪಟ್ಟಣದ ಕೃಷಿಕ ಭವನದಲ್ಲಿ ಇತ್ತೀಚಿಗೆ ಅವರದ್ದೇ ಕೃತಿ ಪ್ರಿಪೇಡ್ ಮೀಟರ್ ಬಂತು, ರೈತರಿಗೆ ಆಪತ್ತು ತಂತು ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.ರೈತರಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್ ಕೊನೆಯ ದಿನಗಳನ್ನು ಎಣಿಸುತ್ತಿದೆ. ರೈತರೆಲ್ಲರೂ ಸಂಘಟಿತರಾಗಿ ಸರಕಾರದ ಕೃಷಿಕರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಕೆಯನ್ನು ವಿರೋಧಿಸದಿದ್ದರೆ ಇಡೀ ಕೃಷಿ ಕ್ಷೇತ್ರ ನಾಶವಾಗುತ್ತದೆ ಎಂದು ಕಿಡಿ ಕಾರಿದರು.ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹನಸಿ ದೇವರಾಜ್ ಮಾತನಾಡಿ, ಮೀಟರ್ ಅಳವಡಿಕೆ ಬಗ್ಗೆ ರೈತ ಸಮುದಾಯ ಎಚ್ಚೆತ್ತುಕೊಂಡು ಹೋರಾಟ ಮಾಡದಿದ್ದರೆ ಮುಂದಿನ ದಿನಗಳಲ್ಲಿ ರೈತ ಸಮುದಾಯ ನಿರಂತರ ಸಂಕಷ್ಟಗಳಿಗೀಡಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.ಹಿರಿಯ ಸಾಹಿತಿ ಮೇಟಿ ಕೊಟ್ರಪ್ಪ ಮಾತನಾಡಿ, ರೈತ ಪರ ಹೋರಾಟಗಾರ ಜೆ.ಎಂ. ವೀರಸಂಗಯ್ಯನವರು ರೈತ ಹೋರಾಟದಲ್ಲಿ ಮೂತ್ರಪಿಂಡಗಳನ್ನೇ ಕಳೆದುಕೊಂಡರೂ ಹೊರಾಟದ ಕಿಚ್ಚು ಕಳೆದುಕೊಂಡಿಲ್ಲ. ಅವರ ಕೃತಿ ರೈತರಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದರು.ಸಂಘದ ತಾಲೂಕು ಕಾರ್ಯದರ್ಶಿ ತಂಬ್ರಹಳ್ಳಿ ರವಿಕುಮಾರ್, ಮಹಾದೇವ ಪಾಟೀಲ್, ಜಿ. ಮಂಜುನಾಥ್, ಹುರಕಡ್ಲಿ ಶಿವಕುಮಾರ್, ಎಸ್. ಜಗನ್ನಾಥ್ ಮತ್ತು ರಂಗನಾಥ್ ಹವಲ್ದಾರ್ ಮಾತನಾಡಿದರು.ಸಂಘದ ಲಕ್ಷ್ಮೀದೇವಿ, ಹರಟೆ ಕಾಳಪ್ಪ, ನಾಗೇಂದ್ರಪ್ಪ, ಗಡ್ಡಿ ನಿಂಗಪ್ಪ, ಮತ್ತಿತರಿದ್ದರು.