ಹೊಸಕೋಟೆಯ ನಂದಗುಡಿ ಹೋಬಳಿಯ ಟೌನ್‌ಶಿಪ್‌ಗೆ ಭೂಮಿ ಕೊಡಲು ರೈತರ ನಕಾರ

KannadaprabhaNewsNetwork |  
Published : Aug 08, 2024, 01:35 AM IST
ಫೋಟೋ: 7 ಹೆಚ್‌ಎಸ್‌ಕೆ 2 ಮತ್ತು 32: ಹೊಸಕೋಟೆ ತಾಲೂಕಿನ  ನಂದಗುಡಿಯ ಶ್ರೀಕಾಡು ಮಲ್ಲೇಶ್ವರ ದೇವಾಲಯದ ಆವರಣದಲ್ಲಿ ನಂಧಗುಡಿ ಟೌನ್‌ಶಿಪ್ೆ ಬಗ್ಗೆ ರೈತರÀ ಅಭಿಪ್ರಾಯ ಪಡೆಯಲು ನಡೆದ ಸಭೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಮಾತನಾಡಿದರು. | Kannada Prabha

ಸಾರಾಂಶ

ಹೊಸಕೋಟೆ ತಾಲೂಕಿನ ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೌನ್ ಶಿಪ್ ಯೋಜನೆಗೆ ಭೂಮಿ ಬಿಟ್ಟುಕೊಡಲು ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

-ಶಾಸಕ ಶರತ್ ನೇತೃತ್ವದಲ್ಲಿ ಸಭೆ -ನಂದಗುಡಿ ಮತ್ತು ಸೂಲಿಬೆಲೆ ಹೋಬಳಿಯ 18,500 ಎಕರೆ ಪ್ರದೇಶಕ್ಕೆ ಟೌನ್‌ಶಿಪ್‌ ಯೋಜನೆ ಸಿದ್ಧತೆಕನ್ನಡಪ್ರಭ ವಾರ್ತೆ ಹೊಸಕೋಟೆ

ತಾಲೂಕಿನ ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೌನ್ ಶಿಪ್ ಯೋಜನೆಗೆ ಭೂಮಿ ಬಿಟ್ಟುಕೊಡಲು ರೈತರು ತೀವ್ರ ವಿರೋಧ ವ್ಯಕ್ತಪಡಿಸಿ, ಯೋಜನೆ ಕೈ ಬಿಡುವಂತೆ ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಅಭಿಪ್ರಾಯ ಸಂಗ್ರಹಿಸಲು ಶಾಸಕ ಶರತ್ ಬಚ್ಚೇಗೌಡ ನೇತೃತ್ವದಲ್ಲಿ 32 ಗ್ರಾಮಗಳ ರೈತರ ಸಭೆ ನಡೆಯಿತು.ಸಭೆಯಲ್ಲಿ ಮಾತನಾಡಿದ ಶಾಸಕ ಶರತ್‌ ಬಚ್ಚೇಗೌಡ, ನಂದಗುಡಿ ಮತ್ತು ಸೂಲಿಬೆಲೆ ಹೋಬಳಿಯ ಆರೇಳು ಗ್ರಾಮಗಳು ಒಳಗೊಂಡಂತೆ 18,500 ಎಕರೆ ಪ್ರದೇಶದಲ್ಲಿ ಟೌನ್‌ಶಿಪ್ ಯೋಜನೆ ಸಿದ್ದಪಡಿಸಲಾಗಿದೆ. ಇದರಲ್ಲಿ 4 ಸಾವಿರ ಎಕರೆ ಸರ್ಕಾರಿ ಜಾಗವಿದೆ. ಟೌನ್‌ಶಿಪ್‌ನಿಂದ ಈ ಭಾಗದ ಗ್ರಾಮಗಳು ಸಾಕಷ್ಟು ಅಭಿವೃದ್ಧಿಯಾಗಲಿದೆ. ಟೌನ್‌ಶಿಪ್‌ ಅಂದರೆ ಕೇವಲ ಕೈಗಾರಿಕೆಗಳ ಸ್ಥಾಪನೆ ಮಾತ್ರವಲ್ಲ. ಬದಲಾಗಿ ಸುಸಜ್ಜಿತ ಶಾಲೆ, ಆಸ್ಪತ್ರೆ, ಶಾಪಿಂಗ್ ಮಾಲ್ ಸೇರಿದಂತೆ ಅಗತ್ಯ ಎಲ್ಲಾ ಸೌಲಭ್ಯಗಳು ಕಲ್ಪಿಸಲಾಗುವುದು. ಸರ್ಕಾರ ಭೂಮಿ ಕೊಡುವ ರೈತರಿಗೆ ಹಣ ಅಥವಾ ಎಕರೆ ಅಭಿವೃದ್ಧಿ ಪಡಿಸಿದ 10 ಸಾವಿರ ಅಡಿ ಭೂಮಿ ಕೊಡಬಹುದು. ಅಭಿವೃದ್ಧಿ ಕಾಲಕಾಲಕ್ಕೆ ಬದಲಾಗಬೇಕು. ಆದರೆ ರೈತರು ಭೂಮಿ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಆದ್ದರಿಂದಲೆ ಅಭಿಪ್ರಾಯ ಸಂಗ್ರಹಿ ಸರ್ಕಾರದ ಗಮನಕ್ಕೆ ತರಲು ಸಭೆ ಆಯೋಜಿಸಿದೆ ಎಂದರು.

ವೃಷಭಾವತಿ ಯೋಜನೆ: ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿ ಕೆರೆಗಳಗೆ ನೀರು ತುಂಬಿಸುವ ಉದ್ದೇಶದಿಂದ 60 ಎಂಎಲ್‌ಡಿ ನೀರನ್ನು ಹೊರಮಾವು ಬಳಿಯಿಂದ ಬೆಟ್ಟಕೋಟೆ ಮಾರ್ಗವಾಗಿ ನಂದಗುಡಿ ಹಾಗೂ ಸೂಲಿಬೆಲೆ ಭಾಗದ ೫೯ ಕೆರೆಗೆ ನೀರು ಹರಿಸಲು ಡಿಪಿಆರ್ ತಯಾರಾಗಿದೆ. ೧೫೦ ಕೋಟಿ ವೆಚ್ಚದಲ್ಲಿ ವೃಷಭಾವತಿ ಯೋಜನೆಯಿಂದ ನೀರು ತುಂಬಿಸಲು ಯೋಜನೆ ಸಿದ್ದಪಡಿಸಲಾಗಿದೆ ಎಂದರು.

ಮಾಜಿ ತಾಪಂ ಅಧ್ಯಕ್ಷ ಕೆಂಚೇಗೌಡ ಮಾತನಾಡಿ, 2006ರಲ್ಲಿ ಕೇಂದ್ರ ಸರ್ಕಾರದಿಂದ ನಂದಗುಡಿಯಲ್ಲಿ ವಿಶೇಷ ವಿತ್ತ ವಲಯ ಮಾಡಲು 36 ಹಳ್ಳಿಗಳ ವ್ಯಾಪ್ತಿಯಲ್ಲಿ 12 ಸಾವಿರ ಎಕರೆ ಪ್ರದೇಶದ ಭೂಸ್ವಾಧೀನಕ್ಕೆ ಮುಂದಾಗಿದ್ದ ವೇಳೆ ರಾಜಭವನ ಚಲೋ ಮೂಲಕ ತಡೆ ಹಿಡಿದಿದ್ದೆವು. ಈಗ ಕೂಡ ಅದೇ ಪರಿಸ್ಥಿತಿ ಬಂದಿದೆ ಎಂದರು.

ರಾಜ್ಯ ಒಕ್ಕಲಿಗರ ಸಂಘದ ಕಾರ್ಯದರ್ಶಿ ರಾಜಶೇಖರಗೌಡ, ಟಿಎಪಿಸಿಎಂಎಸ್ ಉಪಾಧ್ಯಕ್ಷ ರವೀಂದ್ರ, ಜಿಪಂ ಮಾಜಿ ಸದಸ್ಯ ಕಲ್ಲಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮೇಶ್, ತಾಪಂ ಮಾಜಿ ಸದಸ್ಯರಾದ ಬೀರಪ್ಪ, ರುದ್ರೇಗೌಡ, ಎಸ್‌ಎಫ್ ಸಿಎಸ್ ಅಧ್ಯಕ್ಷ ಕೆ.ಮಂಜುನಾಥ್, ಸಮಾಜ ಸೇವಕರಾದ ಕಲ್ಕೆರೆ ಕೆ.ಎಸ್.ಮಹದೇವಯ್ಯ, ಎಂ.ಮಂದೀಪ್‌ಗೌಡ ಇತರರಿದ್ದರು.

ನಂದಗುಡಿ ಹೋಬಳಿಯಲ್ಲಿ ಹೈನುಗಾರಿಕೆ, ತರಕಾರಿ, ಹೂವು, ರೇಷ್ಮೆ ಬೆಳೆಯುತ್ತಾರೆ. ಟೌನ್ ಶಿಪ್‌ನಿಂದ ರೈತರು ಭೂಮಿ ಕಳೆದುಕೊಂಡು, ಬರುವ ಹಣವನ್ನೂ ಖರ್ಚು ಮಾಡಿಕೊಂಡು ಬರಿಗೈಯಲ್ಲಿ ಕೂರಬೇಕಾಗುತ್ತದೆ. ಆದ್ದರಿಂದ ನಾವು ನಮ್ಮ ಭೂಮಿಯಲ್ಲಿ ಏನೇ ಬೆಳೆದರೂ, ಯಾವುದೇ ಸಾಲ ಮಾಡಿಕೊಂಡರೂ ನಾವು ಮಾತ್ರ ನಮ್ಮ ಭೂಮಿ ಬಿಡೋಲ್ಲ.

-ದೇವೇಗೌಡ, ಪ್ರಗತಿಪರ ರೈತ, ಇಟ್ಟಸಂದ್ರ

ಸಾಕಷ್ಟು ರೈತರಿಗೆ ಜಮೀನು ಕೊಡುವ ಇಂಗಿತ ಇರಬಹುದು. ಆದರೆ, ಮುಂದಿನ ಪೀಳಿಗೆಗೆ ಜಮೀನನ್ನು ಕಾಪಾಡಿಕೊಂಡು ಒಕ್ಕಲುತನ ಮುಂದುವರೆಸಬೇಕು. ಆದ್ದರಿಂದ ಶಾಸಕರು ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕೃಷಿ ಚಟುವಟಿಕೆ ಮಾಡಲು ಸಹಕಾರ ನೀಡಬೇಕು. ಹೀಗೆ ಭೂಸ್ವಾಧಿನಕ್ಕೆ ಭೂಮಿ ಬಿಟ್ಟುಕೊಡಬಾರದು.

-ಅಕ್ಲೇಗೌಡ, ಅಧ್ಯಕ್ಷ, ತಾಲೂಕು ಘಟಕದ ರೈತ ಸಂಘ, ಹಸಿರು ಸೇನೆ

ಈಗಾಗಲೆ ಪಿಲ್ಲಗುಂಪೆ, ಕೈವಾರ, ನರಸಾಪುರ, ವೇಮಗಲ್ ಭಾಗಗಳಲ್ಲಿ ಕೈಗಾರಿಕಾ ಪ್ರದೇಶಗಳಿವೆ. ಇದರ ನಡುವೆ ನಂದಗುಡಿಗೆ ಟೌನ್ ಶಿಪ್ ಅಗತ್ಯವಿಲ್ಲ. ನಮ್ಮ ಗ್ರಾಮಗಳಿಗೆ ಅಗತ್ಯವಾದ ಉತ್ತಮ ರಸ್ತೆ, ನೀರು ಕೊಡಿ, ಈಗಾಗಲೆ ದವಸ ಧಾನ್ಯಗಳ ಬೆಲೆ ಗಗನಕ್ಕೇರಿದೆ. ಕೃಷಿಗೆ ಉತ್ತೇಜನ ನೀಡುವ ಕೆಲಸ ಮಾಡಿ.

-ಅನಂತನಾರಾಯಣ್, ಮಾಜಿ ಅಧ್ಯಕ್ಷ, ಕುರಿ ಮತ್ತು ಉಣ್ಣೆ ಸಂಘ

ಹೋರಾಟಕ್ಕೂ ಸಿದ್ದರಿರಬೇಕು: ಶಾಸಕ

ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಪ್ರಜೆಗಳಿದ್ದರೆ ಮಾತ್ರ ಸರ್ಕಾರ ಇರುತ್ತೆ. ಆದ್ದರಿಂದ ಉದ್ದೇಶಿತ ಟೌನ್‌ಶಿಪ್‌ಗೆ ಭೂಮಿ ಕೊಡಲು ರೈತರ ವಿರೋಧ ವ್ಯಕ್ತವಾಗಿದೆ. ನಾನು ಈ ಭಾಗದ ಶಾಸಕನಾಗಿ ಸರ್ಕಾರಕ್ಕೆ ರೈತರ ಅಭಿಪ್ರಾಯ ತಿಳಿಸುತ್ತೇನೆ. ರೈತರು ಅಭಿಪ್ರಾಯ ವ್ಯಕ್ತಪಡಿಸಿದ ಮಾತ್ರಕ್ಕೆ ಟೌನ್‌ಶಿಪ್ ಹೋಯ್ತು ಎನ್ನುವಂತಿಲ್ಲ. ಬದಲಾಗಿ ಹೋರಾಟ ಮಾಡುವ ಅನಿವಾರ್ಯ ಬಂದರೆ ಅದಕ್ಕೂ ಸಿದ್ದರಿರಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಔಷಧಿ ಪೂರೈಸದಷ್ಟು ಸರ್ಕಾರ ದಿವಾಳಿಯೇ ? ಸಿಟಿ ರವಿ ಪ್ರಶ್ನೆ
ಮಾದಕ ವಸ್ತುಗಳ ಸೇವನೆ ಬದುಕಿನ ವಿನಾಶಕ್ಕೆ ಮುನ್ನುಡಿ: ಡಾ.ಸುಹಾಸ್