ಸಿರವಾರ ತಾಲೂಕಿನ ಕುರಕುಂದಾ ಶಾಲೆಯಲ್ಲಿ ನಡೆದ ಹೀರಾ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಶಾಸಕ ಜಿ.ಹಂಪಯ್ಯ ನಾಯಕ ಉದ್ಘಾಟಿಸಿದರು.
ಸಿರವಾರ:ಪ್ರತಿಯೊಂದು ಮಗುವಿನಲ್ಲೂ ವಿವಿಧ ಬಗೆ ಕಲೆಗಳು ಅಡಗಿರುತ್ತವೆ. ಅವುಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಶಾಸಕ ಜಿ.ಹಂಪಯ್ಯ ನಾಯಕ ಅಭಿಪ್ರಾಯಪಟ್ಟರು.
ತಾಲೂಕಿನ ಕುರಕುಂದಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಹೀರಾ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾಠ ಆಲಿಸುವ ಮಕ್ಕಳಿಗೆ ಇದರಿಂದ ಹೊಸತನ ದೊರೆಯುತ್ತದೆ. ಮಕ್ಕಳಲ್ಲಿ ಪಠ್ಯದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದರಿಂದ ವಿದ್ಯಾಭ್ಯಾಸಕ್ಕೂ ಸಹಕಾರಿಯಾಗಲಿದ್ದು, ಮುಂದಿನ ಜೀವನದಲ್ಲಿ ಏನಾದರೂ ಸಾಧಿಸಲು ಶಕ್ತಿ ದೊರೆಯಲಿದೆ ಎಂದರು.
ಶಿಕ್ಷಕರು ಮಕ್ಕಳ ಪ್ರತಿಭೆ ಶೋಧಿಸಿ ಸರಿಯಾದ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕು ಎಂದರು.
ಬಿಇಒ ಚಂದ್ರಶೇಖರ ದೊಡ್ಮನಿ, ಮಲ್ಲಟ ಗ್ರಾಪಂ ಅಧ್ಯಕ್ಷ ಹನುಮಂತ್ರಾಯ ನಾಯಕ, ಮುಖಂಡರಾದ ಬ್ರಿಜೇಶ ಪಾಟೀಲ, ರಮೇಶ ದರ್ಶನಕರ್, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲೇಶಪ್ಪ, ಮೌನೇಶ ಹಿರೇಹಣಿಗಿ, ಏಸುಮಿತ್ರ, ಸೂರಿ ದುರುಗಣ್ಣ, ತಿಮ್ಮಣ್ಣ ನಾಯಕ ಸೇರಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.