ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ರೈತರು ಹೈನುಗಾರಿಕೆಗೆ ಒತ್ತು ನೀಡಿ: ಶಾಸಕ ಕೃಷ್ಣಪ್ಪ

KannadaprabhaNewsNetwork | Published : Jun 8, 2025 11:52 PM

ಹೈನುಗಾರಿಕೆಯಿಂದ ನಷ್ಟ ಉಂಟಾಗಿದೆ ಎಂದು ಹೇಳಿದವರೇ ಇಲ್ಲ. ಕಾಮಧೇನುವಿನ ಸಾಕಣೆಯಿಂದ ಸಕಲವೂ ಸಮೃದ್ಧಿಯಾಗಲಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನಲ್ಲಿ ತೆಂಗು- ಕಂಗು (ಅಡಿಕೆ) ಗೆ ಸರಿಸಮಾನವಾಗಿ ಹೈನುಗಾರಿಕೆಗೆ ಒತ್ತು ನೀಡಿದಲ್ಲಿ ರೈತರ ಬದುಕು ಹಸನಾಗುವುದರಲ್ಲಿ ಸಂಶಯವಿಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ತಾಲೂಕಿನ ಹಿಂಡುಮಾರನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತೆಂಗು ಮತ್ತು ಅಡಿಕೆಯ ಬೆಲೆಗಳು ಯಾವಾಗ ವ್ಯತ್ಯಾಸವಾಗುತ್ತದೆ ಎಂಬುದನ್ನು ಅರಿಯಲು ಸಾಧ್ಯವೇ ಇಲ್ಲ. ಇಂದು ಇದ್ದ ಬೆಲೆ ನಾಳೆ ಇರದು. ಆದರೆ ಹಾಲಿನ ಬೆಲೆ ನಿಖರವಾಗಿರುತ್ತದೆ. ಪ್ರತಿ ತಿಂಗಳು ರೈತರ ಖಾತೆಗೆ ತಪ್ಪದೇ ಹಣ ಜಮಾ ಆಗಲಿದೆ. ಹೆಚ್ಚು ಗುಣಮಟ್ಟದ ಹಾಲು ಹಾಕಿದಷ್ಟೂ ಹೆಚ್ಚು ಹಣ ಸಿಗಲಿದೆ ಎಂದು ಅವರು ಹೇಳಿದರು.

ದಬ್ಬೇಘಟ್ಟ ಹೋಬಳಿಯ ಜನರಿಗೆ ನೀರಾವರಿ ಕೊರತೆ ಇದೆ. ಇದನ್ನು ಹೋಗಲಾಡಿಸುವ ಸಲುವಾಗಿ ಹೇಮಾವತಿ ನದಿ ನೀರನ್ನು ಹೋಬಳಿಯ 36 ಕೆರೆಗಳಿಗೆ ಹರಿಸಲು ಕ್ರಮ ಕೈಗೊಳ್ಳಲಾಗಿದೆ. ನೀರಾವರಿಯ ಕೊರತೆ ಎದುರಿಸುತ್ತಿರುವುದರಿಂದ ರೈತರ ಬದುಕು ದುಃಸ್ಥಿತಿಯಲ್ಲಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಮಾತನಾಡಿ, ಹೈನುಗಾರಿಕೆಯಿಂದ ನಷ್ಟ ಉಂಟಾಗಿದೆ ಎಂದು ಹೇಳಿದವರೇ ಇಲ್ಲ. ಕಾಮಧೇನುವಿನ ಸಾಕಣೆಯಿಂದ ಸಕಲವೂ ಸಮೃದ್ಧಿಯಾಗಲಿದೆ. ಹಸುವಿನ ಹಾಲು, ಸಗಣಿ, ಗಂಜಲ ಸೇರಿದಂತೆ ಪ್ರತಿಯೊಂದು ವಸ್ತುವಿಗೂ ಬೆಲೆ ಇದೆ. ರೈತರ ಆಧಾರಸ್ಥಂಭವಾಗಿರುವ ರಾಸುಗಳ ಶ್ರೇಯಸ್ಸಿಗಾಗಿ ಹಾಲು ಒಕ್ಕೂಟ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರಾಸುಗಳಿಗೂ ಮತ್ತು ರೈತರಿಗೂ ಉಚಿತ ವಿಮೆ ಸೌಲಭ್ಯ ಜಾರಿಗೆ ತರಲಾಗಿದೆ. ಹೈನುಗಾರರು ಮೃತ ಹೊಂದಿದರೆ ಸುಮಾರು 50 ಸಾವಿರ ರು. ಪರಿಹಾರ ನೀಡಲಾಗುತ್ತಿದೆ. ಹಸುಗಳು ಮೃತಪಟ್ಟಲ್ಲಿ 10 ಸಾವಿರದಿಂದ 70 ಸಾವಿರದವರೆಗೂ ವಿಮೆ ನೀಡಲಾಗುತ್ತಿದೆ ಎಂದರು.

ಹಾಲು ಉತ್ಪಾದಕರ ಹಿತ ಕಾಪಾಡುವ ಸಲುವಾಗಿ ಜಿಲ್ಲಾ ಹಾಲು ಒಕ್ಕೂಟ ಸಾಫ್ಟ್ ವೇರ್ ಅಳವಡಿಸಿದೆ. ತಾವು ಹಾಕುವ ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ಕಣ್ಣೆದುರೇ ಹಣ ನಿಗದಿಯಾಗುತ್ತದೆ. ಪ್ರತಿ ತಿಂಗಳೂ ತಪ್ಪದೇ ಹಾಲಿನ ಹಣ ಜಮಾ ಆಗುತ್ತಿದೆ ಎಂದು ಸಿ.ವಿ.ಮಹಲಿಂಗಯ್ಯ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂಡುಮಾರನಹಳ್ಳಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಟಿ.ಕೆ.ಯಶೋಧಾ ರಮೇಶ್ ವಹಿಸಿದ್ದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಡಿ.ರಮೇಶ್ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ನಾಗರಾಜು, ಗ್ರಾಮ ಪಂಚಾಯಿತಿ ಸದಸ್ಯ ಪಾಂಡೇಶ್, ವಿಎಸ್ ಎಸ್ ಎನ್ ನಿರ್ದೇಶಕಿ ಪ್ರಿಯತಮ ಧೃವಕುಮಾರ್, ಹಾಲು ಒಕ್ಕೂಟದ ವ್ಯವಸ್ಥಾಪಕ ಚಂದ್ರಶೇಖರ್ ಕೇದನೂರಿ, ತಾಲೂಕು ಮುಖ್ಯಸ್ಥರಾದ ಎಂ.ಎಸ್.ಮಂಜುನಾಥ್, ವಿಸ್ತರಣಾಧಿಕಾರಿಗಳಾದ ಕೆ.ಪಿ.ಮಂಜುನಾಥ್, ಎಸ್.ದಿವಾಕರ್, ಎಸ್.ಕಿರಣ್ ಕುಮಾರ್, ಸಂಘದ ಉಪಾಧ್ಯಕ್ಷೆ ಪುಟ್ಟಮ್ಮ, ನಿರ್ದೇಶಕರಾದ ರಾಧಮ್ಮ, ಸುಮಿತ್ರ, ಹೇಮಲತಾ, ಅನ್ನಪೂರ್ಣ, ನಂಜಮ್ಮ. ಮಂಜಮ್ಮ, ಸುಶಿಲಮ್ಮ, ಭಾರತಿ, ಕಾರ್ಯದರ್ಶಿ ಪವಿತ್ರಾ, ಹಾಲು ಪರೀಕ್ಷಕಿ ವರಲಕ್ಷ್ಮೀ ಉಪಸ್ಥಿತರಿದ್ದರು.